ಫೆ.18ರಂದು ಕೇಂದ್ರ ಫಲಾನುಭವಿಗಳ ಜಾಗೃತಿ ಸಭೆ

ದಾವಣಗೆರೆ:

       ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಭೆ ಮತ್ತು ಜಾಗೃತಿ ಕಾರ್ಯಕ್ರಮವನ್ನು ಫೆ.18ರಿಂದ ರಾಜ್ಯದ ಎಲ್ಲ ತಾಲೂಕು ಪಂಚಾಯಿತಿ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ, ರಾಷ್ಟ್ರೀಯ ತೋಟಗಾರಿಕೆ ಮಂಡಳಿ ಸದಸ್ಯ ಶಿವಪ್ರಸಾದ್ ತಿಳಿಸಿದರು.

        ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಕೃಷಿಕರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಫಲಾನುಭವಿಗಳ ಸಭೆ ಏರ್ಪಡಿಸುತ್ತಿದ್ದು, ಈಗಾಗಲೇ ಪ್ರತಿ ಲೋಕಸಭಾ ಕ್ಷೇತ್ರದಲ್ಲೂ 10-12 ಲಕ್ಷ ಫಲಾನುಭವಿಗಳ ಪಟ್ಟಿ ತಯಾರಿಸಲಾಗಿದೆ ಎಂದರು

          ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಕನಿಷ್ಟ 1ಲಕ್ಷದಿಂದ 1.30 ಲಕ್ಷದವರೆಗೂ ಕೇಂದ್ರದ ಯೋಜನೆಗಳ ಲಾಭ ಪಡೆದ ಫಲಾನುಭವಿಗಳಿದ್ದಾರೆ. ಸರ್ಕಾರ ಈವರೆಗೂ ದೇಶದ 17.5 ಕೋಟಿ ರೈತರಿಗೆ ಮಣ್ಣು ಆರೋಗ್ಯ ಚೀಟಿಗಳನ್ನು ನೀಡಿದೆ. 3.70 ಕೋಟಿ ಕೃಷಿಕರಿಗೆ ಫಸಲ್ ವಿಮಾ ಯೋಜನೆಯಡಿ ಬೆಳೆ ವಿಮೆ ನೀಡಲಾಗಿದೆ. ಇಂತಹ ಹತ್ತಾರು ಯೋಜನೆಗಳ ಲಾಭ ಪಡೆದಿರುವ ಫಲಾನುಭವಿಗಳ ಸಭೆ ಮತ್ತು ಸರ್ಕಾರದ ಸವಲತ್ತುಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದು ಅವರು ತಿಳಿಸಿದರು.

       ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಶಾಂತರಾಜ್ ಪಾಟೀಲ್, ಮುಖಂಡರಾದ ವೆಂಕಟಗಿರಿ ನಾಯಕ್, ಬಸವರಾಜ್ ಬೇತೂರು, ನಾಗರಾಜ್ ಹುಣಸಘಟ್ಟ, ಚನ್ನೇಶ್, ಎಸ್.ಆರ್.ಶಿವಪ್ಪ, ಹನುಮಂತಪ್ಪ, ಗೋಪಾಲ್ ಸಾವಂತ್ ಇತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link