ಶಿರಾ
ಶಿಥಿಲಾವಸ್ಥೆಯಲ್ಲಿದ್ದ ದೇಶವು ಇದೀಗ ಜಾಗೃತಿಯ ಅಲೆಯಾಗಿ ಪರಿವರ್ತನೆಯಾಗಿದೆ. ದೇಶಭಕ್ತಿ ಎಲ್ಲರಲ್ಲೂ ಮೂಡಲು ನರೇಂದ್ರ ಮೋದಿ ಸರ್ಕಾರ ಕೈಗೊಂಡ ಸ್ಪಷ್ಟ ತೀರ್ಮಾನಗಳೇ ಕಾರಣ. ನಾವು ಬರೆಯುವ ಪೆನ್ನಿನಲ್ಲಿ ಇಂಕು ಇದ್ದರೆ ಮಾತ್ರ ಸಾಲದು ಸಹಿ ಹಾಕುವ ದಮ್ಮು ಇರಬೇಕು. ಅಂತಹ ದಮ್ಮು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಇದ್ದದ್ದರಿಂದಲೇ ದೇಶ ಮುಂಚೂಣಿಯಲ್ಲಿ ವಿಜೃಂಭಿಸಲು ಸಾಧ್ಯವಾಯಿತು ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ಶಿರಾ ನಗರದಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ನಾರಾಯಣಸ್ವಾಮಿ ಅವರ ಪರ ಮತಯಾಚನೆಗೆಂದು ಗುರುವಾರ ಶಿರಾ ನಗರಕ್ಕೆ ಆಗಮಿಸಿದ್ದ ಸಿ.ಟಿ.ರವಿ ನಗರದಲ್ಲಿ ನಡೆದ ರೋಡ್ ಶೋನಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ನೆರೆಯ ಪಾಕಿಸ್ಥಾನಕ್ಕೆ ಬಾಂಬ್ ಹಾಕಿಸುವ ತಾಕತ್ತು ಇದ್ದದ್ದರಿಂದಲೇ ನಮ್ಮ ಸೈನ್ಯಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿತು. ಇದು ಸಾಮಾನ್ಯ ವ್ಯಕ್ತಿಗಳಿಂದ ಆಗುವ ಮಾತಲ್ಲ. ದೇಶದ ಬಗ್ಗೆ ಕಾಳಜಿ ಇರುವ ಮೋದಿಯಂತಹ ಪ್ರಬುದ್ಧ ಶಕ್ತಿಗಳಿಂದ ಮಾತ್ರ ಸಾಧ್ಯ ಎಂದು ಸಿ.ಟಿ.ರವಿ ತಿಳಿಸಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಾರಾಯಣಸ್ವಾಮಿ 2 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲುತ್ತಾರೆಂಬ ವಿಶ್ವಾಸ ನಮ್ಮಲ್ಲಿದೆ. ಪಕ್ಷದ ಕಾರ್ಯಕರ್ತ-ಮುಖಂಡರು ಬೂತ್ ಮಟ್ಟದಲ್ಲಿ ಸಕ್ರಿಯವಾಗಿ ಕೆಲಸ ಮಾಡಬೇಕು ಎಂದರು.
ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷ ಬಿ.ಕೆ.ಮಂಜುನಾಥ್, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಮಾಲಿ ಮರಿಯಪ್ಪ, ನಗರ ಘಟಕದ ಅಧ್ಯಕ್ಷ ಬಿ.ಗೋವಿಂದಪ್ಪ, ಬರಗೂರು ತಿಪ್ಪೆಸ್ವಾಮಿ, ತರೂರು ಬಸವರಾಜು, ರಂಗನಾಥಗೌಡ, ರಂಗಸ್ವಾಮಿ, ನಿಡಗಟ್ಟೆ ಚಂದ್ರಶೇಖರ್ ಮುಂತಾದವರು ಹಾಜರಿದ್ದರು.