ದಾವಣಗೆರೆ:
ಜಿಲ್ಲೆಯ ಚನ್ನಗಿರಿ, ಜಗಳೂರು ಹಾಗೂ ದಾವಣಗೆರೆ ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿಗಳು ಶಿಫಾರಸು ಮಾಡಬೇಕೆಂದು ಸಂಸದ ಜಿ.ಎಂ.ಸಿದ್ದೇಶ್ವರ್ ಸೂಚಿಸಿದರು.
ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಮಂಗಳವಾರ ಚನ್ನಗಿರಿ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯತ್ ಆಶ್ರಯದಲ್ಲಿ ಏರ್ಪಡಿಸಿದ್ದ ಸಂತೇಬೆನ್ನೂರು ಹೋಬಳಿಯ ಪ್ರಪ್ರಥಮ ಜನಸಂಪರ್ಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ ರಾಜ್ಯ ಸರ್ಕಾರವು ಹರಪನಹಳ್ಳಿ ಮತ್ತು ಹರಿಹರ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದೆ. ಆದರೆ, ಇನ್ನುಳಿದ ಚನ್ನಗಿರಿ, ಜಗಳೂರು ಹಾಗೂ ದಾವಣಗೆರೆ ತಾಲೂಕುಗಳಲ್ಲೂ ಸಹ ಸರಿಯಾಗಿ ಮಳೆಯಾಗದ ಕಾರಣ ಬೆಳೆಗಳು ಸಂಪೂರ್ಣ ಒಣಗಿವೆ. ಆದ್ದರಿಂದ ಮಳೆ ಕೊರತೆ ಮತ್ತು ಬೆಳೆ ಹಾನಿಯ ಬಗ್ಗೆ ಕಂದಾಯ ಇಲಾಖೆಯಿಂದ ವರದಿ ಪಡೆದು, ಈ ಮೂರು ತಾಲೂಕುಗಳನ್ನು ಸಹ ಬರ ಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆ ಮಾಡುವಂತೆ ಜಿಲ್ಲಾಡಳಿತ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಸಲಹೆ ನೀಡಿದರು.
ವೃದಾಪ್ಯ ವೇತನ, ಅಂಗವಿಕಲರಿಗೆ ಮಾಸಾಶನ, ವಿಧವಾ ವೇತನ, ಉಜ್ವಲ್ ಯೋಜನೆಯಡಿ ಅಡುಗೆ ಅನಿಲ ಸಿಲಿಂಡರ್, ಭಾಗ್ಯಲಕ್ಷ್ಮೀ ಬಾಂಡ್, ಹಣ್ಣು ಶೇಖರಣೆ ಘಟಕ, ಅಂತಜಾರ್ತಿ ವಿವಾಹವಾದವರಿಗೆ ಪ್ರೋತ್ಸಾಹ ಧನ, ಬಗರ್ಹುಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರ, ಗಂಗಾ ಕಲ್ಯಾಣ, ದೀನ ದಯಾಳ್ ಉಪಾಧ್ಯಾಯ ಯೋಜನೆ, ಬಸವ ವಸತಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸ್ಥಳದಲ್ಲಿಯೇ ಮಂಜೂರಾತಿ ಪತ್ರಗಳನ್ನು ಈ ಜನಸಂಪರ್ಕ ಸಭೆಯಲ್ಲಿ ಅಧಿಕಾರಿಗಳು ನೀಡಲಿದ್ದಾರೆ ಎಂದರು.
ಬಹುತೇಕ ಜನರಿಗೆ ವೃದ್ಧಾಪ್ಯ ವೇತನ, ವಿದವಾ ವೇತನ ಹೇಗೆ ಪಡೆಯಬೆಕೆಂಬುದರ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಒಂದೆರಡು ಬಾರಿ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿ, ಅಲೆದಾಡಿ ಸುಮ್ಮನಿದ್ದು ಬಿಡುತ್ತಾರೆ. ಆದ್ದರಿಂದ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯಗಳನ್ನು ತಲುಪಿಸಲಿಕ್ಕಾಗಿ ಈ ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ. ಇಲ್ಲಿ ಫಲಾನುಭವಿಗಳಾಗಿ ಆಯ್ಕೆಯಾದವರಿಗೆ ಫಲ ವಿತರಿಸುತ್ತೇವೆ. ಅಕಸ್ಮಾತ್ ಅನ್ಯಾಯವಾಗಿದ್ದರೆ, ಇಲ್ಲಿರುವ ಅಧಿಕಾರಿಗಳ ಗಮನಕ್ಕೆ ತಂದು ಮಂಜೂರಾತಿ ಪತ್ರ ಪಡೆದುಕೊಳ್ಳಬಹುದಾಗಿದೆ. ಆದ್ದರಿಂದ ಸಾರ್ವಜನಿಕರು ಈ ಜನಸಂಪರ್ಕ ಸಭೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಕೇಂದ್ರ ಸರ್ಕಾರ ಸಹ ಬ್ಯಾಂಕಿಂಗ್ ಕ್ಷೇತ್ರದಿಂದ ಹೊರಗುಳಿದಿರುವ ಬಡ ಜನರಿಗಾಗಿ ಅಂಚೆ ಇಲಾಖೆಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಆರಂಭಿಸಿದೆ. ಇಲ್ಲಿ ಶೂನ್ಯ ಠೇವಣಿಯಲ್ಲಿ ಖಾತೆ ತೆರೆಯಬಹುದುದಾಗಿದೆ.
ಈಗ ಸರ್ಕಾರದ ಎಲ್ಲಾ ಯೋಜನೆಗಳ ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆ ಆಗುತ್ತಿದೆ. ಆದ್ದರಿಂದ ಬ್ಯಾಂಕಿಂಗ್ ಕ್ಷೇತ್ರದಿಂದ ಹೊರಗೆ ಉಳಿದಿರುವ ಸಾರ್ವಜನಿಕರು ಇಲ್ಲಿ ಖಾತೆ ತೆರೆಯಬೇಕು. ಅಲ್ಲದೆ, ಪ್ರಧಾನಿ ಮೋದಿಯವರು ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ದೆಶದ 50 ಕೋಟಿ ಜನರಿಗೆ ಆರೋಗ್ಯ ಸೇವೆ ಕಲ್ಪಿಸಲು ಮುಂದಾಗಿದ್ದು, ಈ ಯೋಜನೆಯಡಿ ಫಲಾನುಭವಿಯ ಆರೋಗ್ಯ ವೆಚ್ಚವನ್ನು 5 ಲಕ್ಷದ ವರೆಗೆ ಕೇಮದ್ರ ಸರ್ಕಾರವೇ ಭರಿಸಲಿದೆ. ಆದ್ದರಿಂದ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಚನ್ನಗಿರಿ ಶಾಸಕ ಕೆ.ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಸರ್ಕಾರ ಬಡವರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತದೆ. ಆದರೆ, ಆ ಯೋಜನೆಗಳ ಬಗ್ಗೆ ಜನರಿಗೆ ತಿಳಿದಿರುವುದಿಲ್ಲ. ಆದ್ದರಿಂದ ಜನರ ಮನೆಯ ಬಾಗಿಲಿಗೆ ಅಧಿಕಾರಿಗಳೇ ಹೋಗಿ, ಸೌಲಭ್ಯ ಕಲ್ಪಿಸಬೇಕೆಂಬ ಉದ್ದೇಶದಿಂದ ಈ ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ. ಇಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಸುಮಾರು 658 ಜನ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಗುತ್ತಿದೆ ಎಂದು ಹೇಳಿದರು.
ತಾಲೂಕಿನ 9 ಗ್ರಾಮ ಪಂಚಾಯತ್ಗಳಿಂದ 1,286ಕ್ಕೂ ಹೆಚ್ಚು ಜನರು ತಮಗೆ ನಿವೇಶನವಿದ್ದು, ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು ಕೋರಿ ಅರ್ಜಿಸಲ್ಲಿದ್ದಾರೆ. ತಕ್ಷಣವೇ ನಿವೇಶನ ಇರುವ ಅರ್ಹ ಫಲಾನುಭವಿಗಳು ನಿಮ್ಮ ಗ್ರಾ.ಪಂ.ಗಳ ಅಧ್ಯಕ್ಷರು, ಪಿಡಿಒಗಳನ್ನು ಭೇಟಿ ಮಾಡಿ, ಜಿಪಿಆರ್ಎಸ್ ಮಾಡಿಸಬೇಕು. ಅಲ್ಲದೆ, ಸುಮಾರು 1,524 ಜನರು ತಮಗೆ ನಿವೇಶನ ಇಲ್ಲ. ಆದ್ದರಿಂದ ನಿವೇಶನ ನೀಡಿ ಸೂರು ಕಲ್ಪಿಸಬೇಕೆಂದು ಕೋರಿ ಅರ್ಜಿಸಲ್ಲಿದ್ದು, ಜಿಲ್ಲಾಡಳಿತ ತಕ್ಷಣವೇ ಸರ್ಕಾರಿ ಜಮೀನು ಲಭ್ಯ ಇರುವ ಕಡೆಗಳಲ್ಲಿ ಹಾಗೂ ಖಾಸಗಿ ಅವರಿಂದ ಜಮೀನು ಖರೀದಿಸಿ ನಿವೇಶನ ಕಲ್ಪಿಸಲು ಮುಂದಾಗುವ ಮೂಲಕ ಚನ್ನಗಿರಿಯನ್ನು ಗುಡಿಸಲು ಮುಕ್ತ ತಾಲೂಕನ್ನಾಗಿ ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿದರು.
ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳು ಸುಲಲಿತವಾಗಿ ಸಿಗಬೇಕೆಂಬುದೇ ಜಿಲ್ಲಾಡಳಿತದ ಮುಖ್ಯ ಉದ್ದೇಶವಾಗಿದೆ. ತಂತ್ರಜ್ಞಾನ ಬಳಸಿಕೊಂಡು ಸೌಲಭ್ಯ ಕಲ್ಪಿಸಲು ಪ್ರಮಾಣಿಕ ಪ್ರಯತ್ನ ಮಾಡಿದರೂ ಸಹ ಸೌಲಭ್ಯ ಸಿಗುತ್ತಿಲ್ಲ ಎಂಬ ಕೂಗು ಕೇಳಿ ಬರುತ್ತದೆ. ಆದ್ದರಿಂದ ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಪ್ರತಿ ಹೋಬಳಿಯಲ್ಲಿ ಜನಸ್ಪಂದನಾ ಸಭೆ ನಡೆಸಿ, ಫಲಾನುಭವಿಗಳಿಗೆ ಮಂಜೂರಾತಿ ಪತ್ರ ಕೊಡುವುದು ಹಾಗೂ ಸೌಲಭ್ಯ ಸಿಗದವರಿಗೆ ಸೂಕ್ತ ಹಿಂಬರ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕರ ಕುಂದು-ಕೊರತೆಗಳನ್ನು ನೇರವಾಗಿ ಸ್ವೀಕರಿಸಿ, ನಿಗದಿತ ಕಾಲಾವಧಿಯಲ್ಲಿ ಇತ್ಯರ್ಥ ಪಡಿಸುವುದು ಜನಸಂಪರ್ಕ ಸಭೆಯ ಮುಖ್ಯ ಉದ್ದೇಶವಾಗಿದೆ. ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿಕಲಚೇತನರಿಗೆ, ವೃದ್ಧರಿಗೆ, ವಿಧವೆಯರಿಗೆ ಮಾಶಾಸನದ, ಭಾಗ್ಯಲಕ್ಷ್ಮೀ, ಸಂದ್ಯಾಸುರಕ್ಷಾ ಯೋಜನೆಗಳ ಮಂಜೂರಾತಿ ಪತ್ರ, ಬಗರ್ಹುಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರ, ಉಜ್ವಲ್ ಯೋಜನೆಯಡಿ ಅಡುಗೆ ಅನಿಲ ಸಿಲಿಂಡರ್ ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ ಒಟ್ಟು 658 ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಯಿತು.ಜಿ.ಪಂ. ಸಿಇಒ ಎಸ್.ಅಶ್ವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ವಾಗೀಶ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಪ್ರೋಬೇಷನರಿ ಉಪ ವಿಭಾಗಿಗಾಧಿಕಾರಿ ಮೋಹಿನ್, ಚನ್ನಗಿರಿ ತಾ.ಪಂ. ಅಧ್ಯಕ್ಷೆ ರೂಪಾ ಶ್ರೀಧರ್, ಜಿ.ಪಂ. ಸದಸ್ಯೆ ಬಿ.ಎಸ್.ಸಾಕಮ್ಮ ಗಂಗಾಧರ ನಾಯ್ಕ, ತಾಪಂ. ಸದಸ್ಯರುಗಳಾದ ಸುಜಾತ ಇ.ಆರ್.ಬಸವರಾಜ್, ಪ್ರಕಾಶ್ ಡಿ.ಆರ್, ಚಮದ್ರಮ್ಮ ರುದ್ರಪ್ಪ, ಶಿವಗಂಗಮ್ಮ , ಟಿ.ಡಿ.ವೀಣಾಕುಮಾರಿ , ಸಂತೇಬೆನ್ನೂರು ಗ್ರಾ.ಪಂ. ಅಧ್ಯಕ್ಷ ಕೆ.ಜಿ.ದೇವೇಂದ್ರಪ್ಪ, ತಹಶೀಲ್ದಾರ್ ಎನ್.ಜೆ.ನಾಗರಾಜ್, ಬಿಜೆಪಿ ಚನ್ನಗಿರಿ ತಾಲೂಕು ಘಟಕದ ಅಧ್ಯಕ್ಷ ಸಿದ್ದೇಶ್, ಮುಖಂಡ ಕೆಂಚಪ್ಪ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
