ಬೆಂಗಳೂರು:
ವಿಜಯ ಸಂಕಲ್ಪ ಯಾತ್ರೆ ಮೂಲಕ ಪಕ್ಷದ ಗೆಲುವಿನ ವಿಶ್ವಾಸ ಹೆಚ್ಚಾಗಿದೆ. ಈ ಬಾರಿ ಜನತೆ ಬಿಜಪಿಗೆ ಸಂಪೂರ್ಣ ಬಹುಮತ ನೀಡಲಿದ್ದಾರೆ ಎಂದು ಮಾಜಿ ಸಚಿವ ಮತ್ತು ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರು ನುಡಿದರು.
ಬೈಂದೂರಿನಲ್ಲಿ ಇಂದು ವಿಜಯ ಸಂಕಲ್ಪ ಯಾತ್ರೆಯ ಪೂರ್ವಭಾವಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಸಮರ್ಥ ನಾಯಕತ್ವ, ರಾಜ್ಯದ ಉತ್ತಮ ನಾಯಕರನ್ನು ಜನತೆ ಗಮನಿಸಲಿದ್ದಾರೆ. ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಸ್ವತಃ ಜಾಮೀನಿನಡಿ ಹೊರಗೆ ಇದ್ದು ಮತ್ತೆ ಯಾವಾಗ ಜೈಲಿಗೆ ಹೋಗುತ್ತಾರೋ ತಿಳಿದಿಲ್ಲ. ಸಿದ್ದರಾಮಯ್ಯನವರು ಅರ್ಕಾವತಿ ರೀಡೂ ಹೆಸರಿನಲ್ಲಿ 800 ಕ್ಕೂ ಹೆಚ್ಚು ಎಕರೆ ರೀಡೂ ಮಾಡಿ 8 ಸಾವಿರ ಕೋಟಿ ಲೂಟಿ ಮಾಡಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಕೆಂಪಣ್ಣ ಅವರು ಈ ಕುರಿತು ವರದಿ ನೀಡಿದ್ದಾರೆ. ಇದೂ ಜನರ ಗಮನದಲ್ಲಿದೆ ಎಂದರು.
ಬಿಜೆಪಿ ಸಂಘಟನೆ ವ್ಯವಸ್ಥಿತವಾಗಿದ್ದು, ಚುನಾವಣೆಗೆ ಅದು ಸಜ್ಜಾಗಿದೆ. ಬೇರೆ ಪಕ್ಷಗಳಲ್ಲಿ ಇಂಥ ಸಂಘಟನೆ ಇಲ್ಲ. ದೇಶದ ರಕ್ಷಣೆಗೆ ಮತ್ತು ಧರ್ಮದ ರಕ್ಷಣೆಗೆ ಬಿಜೆಪಿ ಆಡಳಿತ ಅನಿವಾರ್ಯ ಎಂಬುದು ಜನರಿಗೂ ಗೊತ್ತಾಗಿದೆ. ರಾಮಮಂದಿರ, 370ನೇ ವಿಧಿ, ಮತಾಂತರ ನಿಷೇಧ ಕಾಯ್ದೆ, ಗೋಹತ್ಯಾ ನಿಷೇಧ ಕಾಯ್ದೆ- ಇವೆಲ್ಲವೂ ನಮ್ಮ ಸರಕಾರಗಳ ದಿಟ್ಟ ನಿಲುವಿಗೆ ಸಾಕ್ಷಿ ಎಂದು ತಿಳಿಸಿದರು.
ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು. ಬಳಿಕ ವಿವಿಧೆಡೆಗಳಲ್ಲಿ ನಡೆದ ರೋಡ್ ಷೋ ಮತ್ತು ಸಾರ್ವಜನಿಕ ಸಭೆಯಲ್ಲಿ ಮುಖಂಡರು, ಸಾವಿರಾರು ಕಾರ್ಯಕರ್ತರು ಮತ್ತು ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2023/03/Untitled-9-4.jpg)