ತುಮಕೂರು:
ಮೈತ್ರಿ ಅಭ್ಯರ್ಥಿಯಾಗಿ ಹೆಚ್.ಡಿ.ದೇವೇಗೌಡರು ಸೋಮವಾರ (ಇಂದು) ನಾಮಪತ್ರ ಸಲ್ಲಿಸುತ್ತಿದ್ದು, ನಮ್ಮೆಲ್ಲರ ಬೆಂಬಲ ದೇವೇಗೌಡರಿಗೆ ಇರಲಿದೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಕಾಂಗ್ರೆಸ್ನ ಮುಖಂಡರುಗಳು ಹಾಜರಿರಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಇಲ್ಲಿನ ಖಾಸಗಿ ಹೋಟೆಲ್ನಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮುಖಂಡರುಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದ ನಂತರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರದ ಅಭಿವೃದ್ಧಿಗಾಗಿ, ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ತಡೆಯುವ ಉದ್ದೇಶದಿಂದ ರಾಜ್ಯದಲ್ಲಿ ಮೈತ್ರಿ ಮಾಡಿಕೊಳ್ಳಲಾಗಿದೆ.
ಈ ಹಿಂದೆ ತೀರ್ಮಾನವಾದಂತೆ ಈ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದು, ದೇವೇಗೌಡರೇ ಅಭ್ಯರ್ಥಿಯಾಗಿ ಇಲ್ಲಿಗೆ ಆಗಮಿಸುತ್ತಿರುವುದರಿಂದ ನಾವೆಲ್ಲರೂ ಅವರನ್ನು ಬೆಂಬಲಿಸಲು ತೀರ್ಮಾನಿಸಿದ್ದೇವೆ ಎಂದರು.ರಾಜ್ಯದಲ್ಲಿ ಕಾಂಗ್ರೆಸ್ಗೆ 20 ಹಾಗೂ ಜೆಡಿಎಸ್ಗೆ 8 ಕ್ಷೇತ್ರಗಳನ್ನು ಹಂಚಿಕೆ ಮಾಡಿದ ಸಂದರ್ಭದಲ್ಲಿ ತುಮಕೂರು ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಾಗ ಈ ಕ್ಷೇತ್ರವನ್ನು ಮುದ್ದಹನುಮೇಗೌಡರಿಗೆ ನೀಡಬೇಕೆಂದು ನಾನು ಒತ್ತಾಯ ಮಾಡುತ್ತಲೇ ಬಂದೆ.
ದೇವೇಗೌಡರ ಮನೆಗೂ ತೆರಳಿ ಮನವಿ ಮಾಡಿದ್ದೆ. ರಾಹುಲ್ಗಾಂಧಿ, ಕೆ.ಸಿ.ವೇಣುಗೋಪಾಲ್ ಅವರೊಂದಿಗೂ ಚರ್ಚೆ ನಡೆಸಿದ್ದೆ. ಆನಂತರ ದೇವೇಗೌಡರು ಮತ್ತು ರಾಹುಲ್ ಗಾಂಧಿ ಅವರು ಚರ್ಚಿಸಿದ ನಂತರ ಈ ಕ್ಷೇತ್ರ ಜೆಡಿಎಸ್ಗೆ ಇರಲಿ ಎಂದು ತೀರ್ಮಾನವಾಗಿದೆ. ಹೀಗಾಗಿ ಹೈಕಮಾಂಡ್ ಮಟ್ಟದಲ್ಲಿ ಆಗಿರುವ ತೀರ್ಮಾನವನ್ನು ನಾವು ಒಪ್ಪಿ ಅದರಂತೆ ನಡೆದುಕೊಳ್ಳಬೇಕು ಎಂದರು.
ತುಮಕೂರು ಕ್ಷೇತ್ರಕ್ಕೆ ದೇವೇಗೌಡರೇ ಬಂದು ಸ್ಪರ್ಧಿಸುವುದಾದರೆ ನಮ್ಮ ಅಭ್ಯಂತರವಿಲ್ಲ. ಬೇರೆಯವರಿಗೆ ಟಿಕೆಟ್ ಕೊಡುವುದಾದರೆ ಅವರ ಬದಲು ಮುದ್ದಹನುಮೇಗೌಡರಿಗೆ ಕೊಡಿ ಎಂದು ಕೇಳಿದ್ದೆವು. ನಿನ್ನೆಯವರೆಗೂ ದೇವೇಗೌಡರ ತೀರ್ಮಾನ ಅಧಿಕೃತವಾಗಿರಲಿಲ್ಲ. ನಿನ್ನೆ ಅಧಿಕೃತವಾದ ನಂತರ ಈ ಹಿಂದೆ ನಾವೇ ಹೇಳಿದ ರೀತಿಯಲ್ಲಿ ನಮ್ಮ ಮಾತಿಗೆ ನಾವು ಬದ್ಧರಾಗಿದ್ದೇವೆ. ದೇವೇಗೌಡರ ಸ್ಪರ್ಧೆಯನ್ನು ಸ್ವಾಗತಿಸುತ್ತೇವೆ.
ಒಂದು ವೇಳೆ ದೇವೇಗೌಡರೇನಾದರೂ ನಾನು ಸ್ಪರ್ಧಿಸುವುದಿಲ್ಲ ಎಂದು ಹೇಳಿದರೆ ಈಗಲೂ ಹೇಳುತ್ತೇನೆ ಮುದ್ದಹನುಮೇಗೌಡರಿಗೆ ಈ ಕ್ಷೇತ್ರ ಬಿಟ್ಟುಕೊಡಿ ಎಂಬುದಾಗಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಈ ರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿಯವರು 2 ಕೋಟಿ ಉದ್ಯೋಗ ಕಲ್ಪಿಸುವ ಭರವಸೆ ನೀಡಿದ್ದರು. ಆದರೆ ರಾಷ್ಟ್ರಾದ್ಯಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರಿಗಾಗಿ ಯಾವುದೇ ವಿಶೇಷ ಕಾರ್ಯಕ್ರಮವನ್ನು ಮೋದಿ ಅವರು ಹಾಕಿಕೊಳ್ಳಲಿಲ್ಲ.
ಕೆಲವು ಉದ್ದಿಮೆದಾರರು ಮೋಸ ಮಾಡಿದರೂ ಅವರ ಮೇಲೆ ಕ್ರಮ ಕೈಗೊಳ್ಳಲಿಲ್ಲ. ರೆಫೇಲ್ ಹಗರಣದಲ್ಲಿ ಜಂಟಿ ಸಂಸದೀಯ ಸಮಿತಿ ರಚಿಸಿ ತನಿಖೆ ಮಾಡಿ ಎಂದು ಕೇಳಿದರೂ ಸಮಿತಿ ರಚಿಸಲಿಲ್ಲ. ಹೀಗಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಮೈತ್ರಿ ಮಾಡಿಕೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆಯಾಗಿ ಚುನಾವಣೆಯನ್ನು ಎದುರಿಸಲಿವೆ ಎಂದರು.
ನಿನ್ನೆಯಷ್ಟೇ ಮುದ್ದಹನುಮೇಗೌಡರು ಸಭೆಯೊಂದನ್ನು ನಡೆಸಿ ಸೋಮವಾರ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ. ಅವರಿಗೆ ಅನ್ಯಾಯವಾಗಿದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ.
ಆದರೆ ಪಕ್ಷ ಮತ್ತು ರಾಷ್ಟ್ರದ ಹಿತದೃಷ್ಟಿಯಿಂದ ನಾವು ಒಮ್ಮತದ ತೀರ್ಮಾನಕ್ಕೆ ಬರಲೇಬೇಕು. ಮುದ್ದಹನುಮೇಗೌಡ ಅವರೊಂದಿಗೆ ನಾನು ಪ್ರತ್ಯೇಕವಾಗಿ ಸಂಪರ್ಕಿಸಿ ಮಾತನಾಡುತ್ತೇನೆ ಎಂದು ಪರಮೇಶ್ವರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಡಾ.ಎಸ್.ಷಫಿ ಅಹಮದ್, ಆರ್. ನಾರಾಯಣ್, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಜಿಲ್ಲಾ ಉಸ್ತುವಾರಿ ರಾಧಾಕೃಷ್ಣ, ಎಂ.ಎಲ್.ಸಿ. ವೇಣುಗೋಪಾಲ್, ಮಾಜಿ ಶಾಸಕರಾದ ಕೆ.ಷಡಕ್ಷರಿ, ಡಾ.ರಫೀಕ್ ಅಹಮದ್, ಬಿ.ಲಕ್ಕಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ವಕ್ತಾರ ಟಿ.ಎಸ್.ನಿರಂಜನ್, ಮುರಳಿಧರ ಹಾಲಪ್ಪ, ಗೀತಾ ರುದ್ರೇಶ್, ಸೈಯದ್ ನಯಾಜ್, ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಕೊಂಡವಾಡಿ ಚಂದ್ರಶೇಖರ್, ವಕ್ವ್ ಕಮಿಟಿಯ ಇಕ್ಬಾಲ್ ಅಹಮದ್, ಜಿ.ಚಂದ್ರಶೇಖರಗೌಡ ಸೇರಿದಂತೆ ವಿವಿಧ ಮುಖಂಡರುಗಳು ಉಪಸ್ಥಿತರಿದ್ದರು.
ಕಾಂಗ್ರೆಸ್ ನಿರ್ನಾಮ ಯಾರಿಂದಲೂ ಸಾಧ್ಯವಿಲ್ಲ
ಕಾಂಗ್ರೆಸ್ ಮುಕ್ತ ಭಾರತ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಈ ದೇಶದಲ್ಲಿಯೇ ಅದು ಸಾಧ್ಯವಿಲ್ಲ ಎಂದಾದರೆ ಜಿಲ್ಲೆಯಲ್ಲಿ ಹೇಗೆ ತಾನೇ ಸಾಧ್ಯವಾದೀತು? ಮೈತ್ರಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಮಾತ್ರಕ್ಕೆ ಕಾಂಗ್ರೆಸ್ ನಿರ್ನಾಮ ಎನ್ನುವ ಹೇಳಿಕೆಯಲ್ಲಿ ಯಾವುದೇ ಅರ್ಥವಿಲ್ಲ. ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಡಾ.ಜಿ.ಪರಮೇಶ್ವರ ಪ್ರತಿಕ್ರಿಯಿಸಿದರು.
ಮುದ್ದಹನುಮೇಗೌಡರು ಕ್ರಿಯಾಶೀಲ ಸಂಸದರಾಗಿದ್ದರು. ಅವರಿಗೆ ನೋವಾಗಿರುವುದು ಸಹಜ. ಆದರೆ ಪಕ್ಷ ಮತ್ತು ದೇಶದ ಹಿತದೃಷ್ಟಿಯಿಂದ ಮೈತ್ರಿ ತೀರ್ಮಾನವನ್ನು ಅವರೂ ಪಾಲಿಸಬೇಕು. ಮುಖಂಡರಾದ ಕೆ.ಎನ್.ರಾಜಣ್ಣ, ಮುದ್ದಹನುಮೇಗೌಡ ಅವರನ್ನು ಸಂಪರ್ಕಿಸಿ ಮನವಿ ಮಾಡಿಕೊಳ್ಳುತ್ತೇನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
