ಕೊರಟಗೆರೆ
ನಮ್ಮ ದೇಶದಲ್ಲಿನ ಭಯೋತ್ಪಾದನೆಗೆ ಕಡಿವಾಣ ಮತ್ತು ಗಡಿರಕ್ಷಣೆಗಾಗಿ 3ಲಕ್ಷ ಕೋಟಿ ಮೀಸಲಿಟ್ಟ ದೇಶದ ಮೊದಲ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಸೈನಿಕರು ಮತ್ತು ರೈತರ ಪರವಾಗಿ ಐದು ವರ್ಷ ಪಾರದರ್ಶಕ ಆಡಳಿತ ನೀಡಿದೆ ಎಂದು ರಾಜ್ಯ ರೈತ ಮೋರ್ಚ ಉಪಾಧ್ಯಕ್ಷ ಶಿವಪ್ರಸಾದ್ ತಿಳಿಸಿದರು.
ಪಟ್ಟಣದ ಗುಂಡಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಬಿಜೆಪಿ ಪಕ್ಷದ ಕಾರ್ಯಕರ್ತರ ಪ್ರಚಾರ ರ್ಯಾಲಿಗೆ ಚಾಲನೆ ನೀಡಿದ ವೇಳೆ ಮಾತನಾಡಿದರು.
ದೇಶದ ಅಭಿವೃದ್ದಿಗೆ ಕಂಟಕರಾಗಿ 55ವರ್ಷ ಆಡಳಿತ ನಡೆಸಿದ ಕಾಂಗ್ರೇಸ್ ಪಕ್ಷ ಬಡವರು ಮತ್ತು ರೈತರಿಗೆ ಸುಳ್ಳು ಭರವಸೆ ನೀಡಿರುವುದೇ ಅವರ ಸಾಧನೆ. ಕಾಂಗ್ರೇಸ್ ಪಕ್ಷಕ್ಕೆ ಸ್ವತಂತ್ರವಾಗಿ ಸ್ಪರ್ಧಿಸುವ ಶಕ್ತಿಯಿಲ್ಲದೇ ಜೆಡಿಎಸ್ ಪಕ್ಷದ ಜೊತೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಅಭಿವೃದ್ದಿ ಬಗ್ಗೆ ಮಾತನಾಡುವ ರಾಹುಲ್ಗಾಂಧಿ ಸ್ವತಂತ್ರ ಬಂದ ದಿನದಿಂದ ಏನು ಮಾಡಿದ್ದಾರೆ ಎಂಬುದು ಮತದಾರರಿಗೆ ತಿಳಿದಿದೆ ಎಂದು ಹೇಳಿದರು.
ಮಾಜಿ ಪ್ರಧಾನಿ ದೇವೇಗೌಡ ಮತ್ತು ರೇವಣ್ಣ ಇಬ್ಬರು ಹಾಸನ ಜಿಲ್ಲೆಗೆ ಹೇಮಾವತಿ ನೀರಿನ ಪೂರೈಕೆ ಮಾಡುವ ಉದ್ದೇಶಕ್ಕಾಗಿ ತುಮಕೂರು ಜಿಲ್ಲೆಗೆ ಹೇಮಾವತಿ ಹರಿಸದೇ ರಾಜಕೀಯ ತಂತ್ರದಿಂದ ನಿಲ್ಲಿಸಿದ್ದಾರೆ. ದೇವೇಗೌಡರ ಹೇಮಾವತಿ ನೀರಿನ ವಿರೋಧ ನೀತಿಯಿಂದ ತುಮಕೂರು ಜಿಲ್ಲೆ ಬರಪೀಡಿತದಿಂದ ನಲುಗುತ್ತೀದೆ. ರೈತರು ಮತ್ತು ಬಡಜನತೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪವನಕುಮಾರ್ ಮಾತನಾಡಿ 2014ರ ಲೋಕಸಭಾ ಚುನಾವಣೆ ವೇಳೆ ನರೇಂದ್ರ ಮೋದಿಯ ಅಲೆ ಮಾತ್ರ. 2019ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯ ಸುನಾಮಿ ಎದ್ದು ನಿಂತಿದೆ. 5ವರ್ಷದ ಅವಧಿಯಲ್ಲಿ ಹಗರಣ ಇಲ್ಲದೇ ಒಂದೇ ಒಂದು ದಿನ ರಜೆ ಪಡೆಯದೇ ದೇಶದ ಅಭಿವೃದ್ದಿಗೆ ಪಾರದರ್ಶಕ ಆಡಳಿತ ನೀಡಿದ ಏಕೈಕ ಪ್ರಧಾನಿ ಮೋದಿಯ ಪರವಾಗಿ ಯುವಜನತೆ ಬೆಂಬಲವಾಗಿ ನಿಂತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಪಂ ಸದಸ್ಯ ಪ್ರದೀಪಕುಮಾರ್ ಮಾತನಾಡಿ ನರೇಂದ್ರ ಮೋದಿಯ ಐದು ವರ್ಷದ ಸಾಧನೆ ಕೊರಟಗೆರೆ ಕ್ಷೇತ್ರದ ಮತದಾರರ ಮನೆ ಮಾತಾಗಿ ಚರ್ಚೆಯಾಗುತ್ತೀದೆ. ಸಣ್ಣ ಮತ್ತು ಅತಿಸಣ್ಣ ರೈತರಿಗೆ ಕಿಸಾನ್ ಸಮ್ಮನ್ ನಿಧಿಯ ಮೂಲಕ ಪ್ರತಿವರ್ಷ 6ಸಾವಿರ ಹಣ, ಬಿಪಿಎಲ್ ಕಾರ್ಡುಗಳಿಗೆ ಆಯುಸ್ಮಾನ್ ಆರೋಗ್ಯ ವಿಮೆ ಸೇರಿದಂತೆ ನೂರಾರು ಯೋಜನೆಗಳು ನೇರವಾಗಿ ಬಡವರಿಗೆ ತಲುಪಿತ್ತೀದೆ ಎಂದು ತಿಳಿಸಿದರು.
ಕೊರಟಗೆರೆ ಪಟ್ಟಣದ 15ವಾರ್ಡಿನಲ್ಲಿ ಬಿಜೆಪಿ ಪಕ್ಷದ ವತಿಯಿಂದ ರಾಜ್ಯ ರೈತ ಮೋರ್ಚ ಉಪಾಧ್ಯಕ್ಷ ಶಿವಪ್ರಸಾದ್ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪವನಕುಮಾರ್ ನೇತೃತ್ವದಲ್ಲಿ ನರೇಂದ್ರ ಮೋದಿಯ ಐದು ವರ್ಷದ ಅಭಿವೃದ್ದಿ ಕೆಲಸ ಮತ್ತು ಬಿಜೆಪಿ ಅಭ್ಯರ್ಥಿಯ ಪರವಾಗಿ ಮನೆ ಮನೆಗೆ ತೆರಳಿ ನೂರಾರು ಜನ ಬಿಜೆಪಿ ಕಾರ್ಯಕರ್ತರು ಪ್ರಚಾರ ನಡೆಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಓಬಿಸಿ ಮೋರ್ಚ ಕಾರ್ಯದರ್ಶಿ ತಿಮ್ಮಜ್ಜ, ತಾಲೂಕು ಯುವಮೋರ್ಚ ಅಧ್ಯಕ್ಷ ಗುರುಧತ್, ವಕೀಲರಾದ ಸಂತೋಷ್, ಲಕ್ಷ್ಮೀ ಮುಖಂಡರಾದ ಪ್ರಕಾಶರೆಡ್ಡಿ, ಮಲ್ಲೇಶ್, ಅಶೋಕ್, ಗೋಪಿ, ಉಲ್ಲಾಸ್, ಪುನೀತ, ಅಪ್ಪಿ, ರಾಕೇಶ್, ಮಧು, ಪ್ರೇಮಕುಮಾರ್, ಮಾರುತಿ, ಮಂಜುನಾಥ, ಗೋವಿಂದ, ರಂಗನಾಥ, ಸಿದ್ದರಾಜು ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/04/13-april-koratagere-bjp-pho.gif)