ಭರವಸೆಗಳನ್ನು ಈಡೇರಿಸಲು ಷರತ್ತಿಗಿಂತ ವ್ಯವಸ್ಥಿತವಾಗಿ ಜಾರಿ : ಡಿ ಸಿ ಎಂ

ಬೆಂಗಳೂರು :

     ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಲು ಷರತ್ತಿಗಿಂತ ವ್ಯವಸ್ಥಿತವಾಗಿ ಜಾರಿ ಮಾಡುವುದು ಮುಖ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಉಚಿತ ಬಸ್ ಪ್ರಯಾಣ ವಿಚಾರದಲ್ಲಿ ಯಾರಿಗೆ, ಯಾವ ಬಸ್ ಗಳಲ್ಲಿ ಪ್ರಯಾಣಕ್ಕೆ ಅವಕಾಶವಿದೆ ಎಂಬ ವ್ಯವಸ್ಥಿತ ರೂಪದಲ್ಲಿ ಯೋಜನೆ ಜಾರಿ ಆಗಬೇಕಿದೆ. ನಿರುದ್ಯೋಗ ಭತ್ಯೆ ವಿಚಾರದಲ್ಲಿ ಪದವೀಧರ ಮನೆಯಲ್ಲಿದ್ದಾನೆಯೆ ಅಥವಾ ಖಾಸಗಿ ಕೆಲಸ ಮಾಡುತ್ತಿದ್ದಾನೆಯೆ ಖಾಸಗಿಯಲ್ಲಿ ಆತನ ಪರಿಸ್ಥಿತಿ ಏನು ಎಂಬ ಲೆಕ್ಕಾಚಾರ ಮಾಡಬೇಕು. ನಾವು ವಿರೋಧ ಪಕ್ಷಗಳಾಗಲಿ ಅಥವಾ ಬೇರೆಯವರ ಒತ್ತಡಕ್ಕೆ ಮಣಿದು ಯೋಜನೆಗಳನ್ನು ಜಾರಿ ಮಾಡುವುದಿಲ್ಲ ಎಂದು ತಿಳಿಸಿದರು.

    ನಿಮ್ಮ ಯೋಜನೆಗಳಿಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆಯೇ ಎಂಬ ಪ್ರಶ್ನೆಗೆ, “ಆರ್ಥಿಕ ಇಲಾಖೆ ಅಧಿಕಾರಿಗಳು ಅವರ ಸಲಹೆ ನೀಡಿದ್ದಾರೆ. ಅನೇಕ ಆಯ್ಕೆ ನೀಡಿದ್ದಾರೆ. ನಾವು ಅದನ್ನು ಅಧ್ಯಯನ ಮಾಡಿ, ಚರ್ಚೆ ಮಾಡುತ್ತೇವೆ” ಎಂದು ತಿಳಿಸಿದರು

     ಸಭೆಯಲ್ಲಿ ನಮ್ಮ ಪ್ರಣಾಳಿಕೆ ಹಾಗೂ ಗ್ಯಾರಂಟಿ ಯೋಜನೆಗಳ ಬಗ್ಗೆ ಸುದೀರ್ಘ ಚರ್ಚೆ ಮಾಡಿದ್ದೇವೆ. ಅಧಿಕಾರಿಗಳು ಸಚಿವರುಗಳಿಗೆ ಮಾಹಿತಿ ನೀಡಿ, ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ. ಅಧಿಕಾರಿಗಳು ರಾಜ್ಯದ ಆರ್ಥಿಕತೆ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಅನೇಕ ಆಯ್ಕೆಗಳನ್ನು ನೀಡಿದ್ದಾರೆ. ನಾವು ಅದನ್ನು ಅರಿತಿದ್ದು, ಶುಕ್ರವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುತ್ತೇವೆ. ಗ್ಯಾರಂಟಿ ಯೋಜನೆಗಳ ಜಾರಿಗೆ ನಾವು ಬದ್ಧರಾಗಿದ್ದೇವೆ. ಅಧಿಕಾರಿಗಳು ತಮ್ಮ ಅಭಿಪ್ರಾಯ, ಸಲಹೆ ತಿಳಿಸಿದ್ದಾರೆ ಎಂದರು.

     ಗುರುವಾರದ ಬದಲು ಶುಕ್ರವಾರ ಸಂಪುಟ ಸಭೆಯಲ್ಲಿ ಸಮಗ್ರವಾಗಿ ಚರ್ಚೆ ಮಾಡಿ ಮಾಧ್ಯಮಗಳಿಗೆ ಮಾಹಿತಿ ನೀಡುತ್ತೇವೆ. ಯಾರು ಕೂಡ ಊಹಾಪೋಹಗಳಿಗೆ ಅವಕಾಶ ನೀಡಬೇಡಿ. ಆ ಬಗ್ಗೆ ಹೆಚ್ಚಿನ ಗಮನ ನೀಡಬೇಡಿ. ನಾವು ನಮ್ಮ ಪ್ರಣಾಳಿಕೆ, ಕೊಟ್ಟಿರುವ ಮಾತಿನ ಬಗ್ಗೆ ಅರಿವಿದೆ. ಈ ಯೋಜನೆಗಳನ್ನು ಕ್ರಮಬದ್ಧವಾಗಿ ಅನುಷ್ಠಾನಕ್ಕೆ ತರುವುದು ನಮ್ಮ ಆದ್ಯತೆ ಎಂದರು.

     ಬಿಜೆಪಿ ಈ ಹಿಂದೆ ಎಲ್ಲರ ಖಾತೆಗೆ 15 ಲಕ್ಷ ರೂ. ಹಾಕುತ್ತೇವೆ ಎಂದು ಹೇಳಿದ್ದರು. ಆಗ ಮಾತನಾಡಲಿಲ್ಲ. ರೈತರಿಗೆ 10 ಗಂಟೆ ವಿದ್ಯುತ್ ಉಚಿತ ನೀಡುವುದಾಗಿ ಹೇಳಿದ್ದರು ಆ ಬಗ್ಗೆಯೂ ಚಕಾರ ಎತ್ತಲಿಲ್ಲ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ 600 ಭರವಸೆಗಳ ಪೈಕಿ ಕೇವಲ 50 ಭರವಸೆ ಈಡೇರಿಸಿದ್ದಾರೆ. ಆಗಲೂ ಮಾತನಾಡಲಿಲ್ಲ. ನಾವು ನಮ್ಮ ಯಾಜನೆಗಳನ್ನು ಕ್ರಮಬದ್ಧವಾಗಿ, ನ್ಯಾಯಬದ್ಧವಾಗಿ ಜಾರಿ ಮಾಡಿ ನ್ಯಾಯ ಒದಗಿಸಬೇಕು. ರಾಜ್ಯ ಹಾಗೂ ಮತದಾರ ಉಳಿಯಬೇಕು ಅದು ನಮ್ಮ ಗುರಿ” ಎಂದು ತಿಳಿಸಿದರು.

      ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರು ಗ್ಯಾರಂಟಿ ಯೋಜನೆ ಜಾರಿ ಕುರಿತ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಅವರು ಏನಾದರೂ ಹೇಳಿಕೊಳ್ಳಲಿ. ಸಲಹೆಯಾದರೂ ನೀಡಲಿ, ಒತ್ತಡ ಬೇಕಾದರೂ ಹಾಕಲಿ, ಹೋರಾಟ ಬೇಕಾದರೂ ಮಾಡಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತನಾಡುವವರನ್ನು ತಡೆಯಲು ಸಾಧ್ಯವಿಲ್ಲ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap