ತುಮಕೂರು:
ಭಾನುವಾರದ ರಜೆಯ ದಿನವನ್ನು ಮಹಾನಗರ ಪಾಲಿಕೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಚೆನ್ನಾಗಿಯೇ ಬಳಸಿಕೊಂಡರು. ಸರ್ಕಾರಿ ನೌಕರರೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನ ಸಾಮಾನ್ಯವಾಗಿ ಮನೆಯಲ್ಲಿಯೇ ಇರುತ್ತಾರೆ. ಇದನ್ನರಿತ ಅಭ್ಯರ್ಥಿಗಳು ತಮ್ಮ ದಂಡಿನೊಂದಿಗೆ ಬೆಳ್ಳಂಬೆಳಿಗ್ಗೆಯೇ ಮನೆಗಳಿಗೆ ಭೇಟಿ ನೀಡುವ ಕಾರ್ಯದಲ್ಲಿ ಮಗ್ನರಾಗಿದ್ದರು.
ಮೊನ್ನೆಯಷ್ಟೇ ಶ್ರೀ ವರಮಹಾಲಕ್ಷ್ಮಿ ಹಬ್ಬ ಮುಗಿದಿತ್ತು. ಹಬ್ಬದ ಗುಂಗಿನಲ್ಲಿಯೇ ಇನ್ನೂ ಜನರಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ಸಾವಕಾಶ ಮಾಡಿಕೊಂಡ ಅಭ್ಯರ್ಥಿಗಳು ಪ್ರತಿ ಮನೆಯನ್ನು ಭೇಟಿ ಮಾಡಬೇಕೆಂಬ ಉದ್ದೇಶ ಹೊತ್ತು ಬೆಳಗ್ಗೆ 8 ಗಂಟೆಯಿಂದಲೇ ತಮ್ಮ ಕಾರ್ಯ ಪ್ರಾರಂಭಿಸಿದರು. ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳೊಂದಿಗೆ ಪಕ್ಷೇತರರ ಪ್ರಚಾರವೂ ಅಷ್ಟೇ ಬಿರುಸಾಗಿ ನಡೆಯಿತು.
ಕೆಲವು ವಾರ್ಡ್ಗಳಲ್ಲಿ ವಿವಿಧ ಪಕ್ಷಗಳ ಅಧಿಕೃತ ಅಭ್ಯರ್ಥಿಗಳಿಗೆ ಸೆಡ್ಡು ಹೊಡೆದು ಬಂಡಾಯ ಅಭ್ಯರ್ಥಿಗಳಾಗಿ ಕೆಲವರು ಸ್ಪರ್ಧಿಸಿದ್ದಾರೆ. ಈ ಸ್ಪರ್ಧೆ ಅಧಿಕೃತ ಅಭ್ಯರ್ಥಿಗಳಿಗೆ ಒಂದು ರೀತಿಯ ತಲೆನೋವಾಗಿದೆ. ಆ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಇವರ ಸ್ಪರ್ಧೆ ತಲೆನೋವಾದರೆ, ಇತರೆ ಪಕ್ಷಗಳ ಅಭ್ಯರ್ಥಿಗಳಿಗೆ ವರದಾನವಾಗುತ್ತಿದೆ. ಮತ್ತು ಕೆಲವು ಕಡೆ ಪಕ್ಷೇತರರಾಗಿ ಸ್ಪರ್ಧಿಸಿರುವ ಕೆಲವರು ಈಗಾಗಲೇ ತಮ್ಮ ಹೆಸರು ಚಿರಪರಿಚಿತ ಇರುವ ಕಾರಣ ಮತ್ತು ಹಿಂದಿನ ಕೆಲಸ ಕಾರ್ಯಗಳನ್ನು ಮುಂದಿಟ್ಟುಕೊಂಡು ಪ್ರಚಾರದಲ್ಲಿ ನಿರತರಾಗಿದ್ದಾರೆ.
ಚುನಾವಣೆಗೆ ದಿನಗಳು ಹತ್ತಿರ ಬರುತ್ತಿವೆ. ಕಳೆದ 3 ದಿನಗಳಿಂದಷ್ಟೇ ಪ್ರಚಾರ ಆರಂಭಿಸಲಾಗಿದೆ. ನಾಮಪತ್ರ ವಾಪಸ್ ಪಡೆದ ದಿನದಿಂದ ಪ್ರಚಾರ ಆರಂಭಿಸಿದ್ದು, ಇವರಿಗೆಲ್ಲ ಕೆಲವೇ ದಿನಗಳು ಮಾತ್ರವೇ ಉಳಿದಿವೆ. ಹೀಗಾಗಿ ಎಲ್ಲ ಕಡೆಯೂ ಎರಡು ಮೂರು ಬಾರಿ ಸುತ್ತಲು ಸಾಧ್ಯವಾಗುತ್ತಿಲ್ಲ. ಈ ಬಾರಿ ಯಾವ ಪಕ್ಷಗಳಿಂದಲೂ ಮುಖಂಡರುಗಳು ಬೀದಿಗಿಳಿದು ಪ್ರಚಾರಕ್ಕೆ ಬಂದಿಲ್ಲ. ಆಯಾ ವಾರ್ಡಿನ ಮುಖಂಡರುಗಳೇ ತಮ್ಮ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲವು ಕಡೆ ಇಬ್ಬರೂ ಪರಿಚಿತರಾಗಿರುವ ಕಾರಣ ಹಾಗೂ ಬೇರೆ ಬೇರೆ ಕಾರಣಗಳಿಂದಾಗಿ ಮತ ಪ್ರಚಾರಕ್ಕೆ ತೆರಳುತ್ತಿಲ್ಲ. ಪ್ರಚಾರಕ್ಕೆ ಹೋಗುವ ಬದಲು ಸಬೂಬು ಹೇಳಿಕೊಂಡು ತಪ್ಪಿಸಿಕೊಳ್ಳುತ್ತಿದ್ದಾರೆ.
ಭಾನುವಾರದ ರಜೆಯ ದಿನ ವಿವಿಧ ಅಭ್ಯರ್ಥಿಗಳು ಮನೆ ಮನೆಗಳಿಗೆ ಭೇಟಿ ನೀಡಿ ತಮ್ಮ ಪರಿಚಯ ಮಾಡಿಕೊಂಡದ್ದು ಕಂಡುಬಂದಿತು. ತಮ್ಮ ಆಪ್ತರು, ಬಂಧು ಬಳಗದವರು ಹಾಗೂ ಕಾರ್ಯಕರ್ತರೊಂದಿಗೆ ಮನೆ ಮನೆಗೆ ಭೇಟಿ ನೀಡುವ ಕಾರ್ಯ ನಡೆಯಿತು. ಇರುವ ಕಡಿಮೆ ಅವಧಿಯಲ್ಲಿ ಸಾಕಷ್ಟು ಮನೆಗಳನ್ನು ಭೇಟಿ ಮಾಡಿ ಪರಿಚಯ ಮಾಡಿಕೊಳ್ಳಬೇಕೆಂಬ ಉದ್ದೇಶ ಭಾನುವಾರ ಈಡೇರಿತು. ಕೆಲವರು ವಾದ್ಯಗಳೊಂದಿಗೆ, ಮೈಕ್ನೊಂದಿಗೆ, ಮೆರವಣಿಗೆಯಲ್ಲಿ ಸಾಗಿ ಬಂದರೆ ಮತ್ತೆ ಕೆಲವರು ತಮ್ಮ ಆಪ್ತರೊಂದಿಗೆ ಸದ್ದುಗದ್ದಲವಿಲ್ಲದೆ ಮನೆ ಮನೆ ಭೇಟಿ ಮಾಡುತ್ತಿದ್ದ ದೃಶ್ಯ ಕಂಡುಬಂದಿತು.
ಗೆಲುವಿನ ಕಸರತ್ತು
ಶತಾಯ ಗತಾಯ ಗೆದ್ದೇ ತೀರಬೇಕೆಂಬ ಹಠ ಹೊತ್ತ ಕೆಲ ಅಭ್ಯರ್ಥಿಗಳು ತಮ್ಮ ವಾರ್ಡಿನ ಲೀಡರ್ಗಳನ್ನು ಆಯ್ಕೆ ಮಾಡುವ ಮೂಲಕ ಅವರುಗಳಿಗೆ ಇಂತಿಂಥ ಕೆಲಸವನ್ನು ನಿರ್ವಹಿಸಬೇಕೆಂಬ ಆದೇಶವನ್ನು ಮಾಡಲಾಗಿದೆ. ಕೆಲವರಿಗೆ ಹಣ ಹಂಚುವ ಕೆಲಸ ನೀಡಿದರೆ, ಇನ್ನು ಕೆಲವರಿಗೆ ಭಕ್ಷ ಭೋಜನಗಳ ಉಪಚಾರ, ಮತ್ತೆ ಕೆಲವರಿಗೆ ಗುಂಡು ಪಾರ್ಟಿ ಹಾಗೂ ಗುಂಪುಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಈ ಬಾರಿಯಂತೂ ಯುವಕರ ಪಡೆ ಹೆಚ್ಚಿನದಾಗಿ ಹುಟ್ಟಿಕೊಂಡಿರುವುದು ವಿಶೇಷ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
