ಬೆಂಗಳೂರು:
ಬಿಜೆಪಿ ಸರ್ಕಾರಕ್ಕೆ ಇನ್ನು ಹೆಚ್ಚು ದಿನ ಆಯಸ್ಸು ಇಲ್ಲ ಕರ್ನಾಟಕದಲ್ಲಿರುವ ಎಲ್ಲ ಕ್ಷೇತ್ರಗಳಲ್ಲಿ ಎರಡುರಿಂದ ಮೂರು ಸಮೀಕ್ಷೆ ಮಾಡಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ 136 ಶಾಸಕರು ಗೆಲ್ಲುವುದು ಖಚಿತ ಎಂಬ ವಿಶ್ವಾಸ ನಮಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಪ್ರಜಾಧ್ವನಿ ಯಾತ್ರೆ ಆರಂಭಕ್ಕೆ ಮೊದಲು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, `ರಾಮನಗರ ಹಾಗೂ ಬೀದರ್ ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರಜಾಧ್ವನಿ ಯಾತ್ರೆ ಯಶಸ್ವಿಯಾಗಿದೆ . ನಿರೀಕ್ಷೆಗೂ ಮೀರಿ ಜನ ಸ್ಪಂದನೆ ಸಿಕ್ಕಿದೆ ಎಂದಿದ್ದಾರೆ.
ಪ್ರಣಾಳಿಕೆ ವಿಚಾರವಾಗಿ ಸಮಿತಿಯ ಅಧ್ಯಕ್ಷ ಪರಮೇಶ್ವರ ಅವರು ಅಸಮಾಧಾನ ಹೊಂದಿದ್ದಾರಂತೆ ಎಂಬ ಪ್ರಶ್ನೆಗೆ, `ಯಾವುದೇ ಅಸಮಾಧಾನವಿಲ್ಲ. ಪರಮೇಶ್ವರ ಅವರು ಪಕ್ಷಕ್ಕೆ ದೊಡ್ಡ ಆಸ್ತಿ. ರಾಜ್ಯದ ಇತಿಹಾಸದಲ್ಲಿ ಸುದೀರ್ಘ ಕಾಲ ಪಕ್ಷದ ಅಧ್ಯಕ್ಷರಾಗಿದ್ದವರು. ಪರಮೇಶ್ವರ ಜತೆ ಸುರ್ಜೆವಾಲ ಅವರು ಸಭೆ ಮಾಡಿದ್ದಾರೆ‘ ಎಂದು ಸ್ಪಷ್ಟಪಡಿಸಿದರು.
‘ಬೆಂಗಳೂರು ಬಗ್ಗೆ ವಿಶೇಷ ಚಿಂತನೆ ಮಾಡಬೇಕಿದ್ದು, ಪರಮೇಶ್ವರ ಅವರ ನೇತೃತ್ವದ ತಂಡ ವಿದೇಶಕ್ಕೆ ತೆರಳಿ, ಸಂಚಾರ ನಿರ್ವಹಣೆ ಕುರಿತು ಅಧ್ಯಯನ ಮಾಡಲಿದೆ. ನಾವು ಈಗಾಗಲೇ ಸಿಂಗಾಪುರ ಆಡಳಿತದ ಜತೆ ಮಾತುಕತೆ ನಡೆಸಿದ್ದೇವೆ. ತಂಡ ರಚನೆ ಬಗ್ಗೆ ಚರ್ಚೆ ಮಾಡಲಾಗಿದೆ. ನಮ್ಮ ರಾಜ್ಯಕ್ಕೆ ಪ್ರಣಾಳಿಕೆ ನೀಡುವಾಗ ಬೆಂಗಳೂರಿಗೆ ಬಂದಿರುವ ಕಳಂಕ ತೊಡೆದುಹಾಕುವ ಪ್ರಯತ್ನ ಮಾಡುತ್ತೇವೆ‘ ಎಂದರು.
![](https://prajapragathi.com/wp-content/uploads/2022/05/203140-dk-919795-1606304554.jpg)