ತುಮಕೂರು :
ತುಮಕೂರು ಮಹಾನಗರ ಪಾಲಿಕೆಯ ಹಲವು ವಾರ್ಡ್ಗಳಲ್ಲಿ ಮತಪಟ್ಟಿಯಲ್ಲಿನ ದೋಷದಿಂದಾಗಿ ಹಲವು ಮತದಾರರು ಮತದಾನದಿಂದ ವಂಚಿತರಾದ ಪ್ರಸಂಗ ಜರುಗಿತು. ಇದರಿಂದ ಬೇಸತ್ತ ಮತದಾರರು ತಮ್ಮ ಆಕ್ರೋಶ ಹೊರಹಾಕುತ್ತಿದ್ದುದು ಕಂಡು ಬಂದಿತು.
ಇತ್ತೀಚೆಗಷ್ಟೇ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಇರುವ ಮತಗಟ್ಟೆ ಕೇಂದ್ರವೇ ಈಗಲೂ ಇದೆ ಎಂದೇ ಮತದಾರರು ಭಾವಿಸಿದ್ದರು. ಅದರಂತೆ ಮತ ಚಲಾಯಿಸಲು ಹೊರಟಾಗ ತಮ್ಮ ಹೆಸರು ಅಲ್ಲಿ ಇಲ್ಲದೇ ಇರುವುದು ಕಂಡು ಬಂದಿತು. ಯಾವುದೋ ವಾರ್ಡ್ನ ಹೆಸರು ಮತ್ತೆಲ್ಲಿಯೋ ಸೇರ್ಪಡೆಯಾಗಿತ್ತು. ಅಂದರೆ ಅದೇ ವಾರ್ಡ್ನಲ್ಲಿರುವ ಕೆಲವರ ಹೆಸರುಗಳು ಪಕ್ಕದ ವಾರ್ಡ್ನ ಮತಪಟ್ಟಿಯಲ್ಲಿರುವುದು ಬೆಳಕಿಗೆ ಬಂದಿತು. ಹೀಗಾಗಿ ನಮ್ಮದು ಯಾವ ವಾರ್ಡ್ ಎಂಬುದನ್ನು ತಿಳಿಯುವಷ್ಟರಲ್ಲೇ ಹಲವರಿಗೆ ಸಾಕು ಸಾಕಾಗಿ ಹೋಯಿತು.
ವಿಧಾನಸಭಾ ಚುನವಣೆಗೂ, ನಗರ ಪಾಲಿಕೆ ಚುನಾವಣೆಗೂ ಸಾಕಷ್ಟು ವ್ಯತ್ಯಾಸಗಳಿರುವುದು ಈ ಚುನಾವಣೆಯಲ್ಲಿ ಕಂಡು ಬಂದಿತು. ಬಿಎಲ್ಒಗಳು ಚೀಟಿಯನ್ನು ವಿತರಿಸಿದ್ದರೂ ಕೆಲವರಿಗೆ ಮತಗಟ್ಟೆಯಲ್ಲಿ ಹೆಸರು ಇಲ್ಲದ ಕಾರಣ ಮತದಾನದಿಂದ ವಂಚಿತರಾದರು. ಇನ್ನೂ ಕೆಲವು ಕಡೆ ಮತಪಟ್ಟಿಯಲ್ಲಿ ಹೆಸರು ಡಿಲೀಟ್ ಆಗಿತ್ತು. ಮತದಾರರಿಗೆ ಎದುರಾಗುವ ಈ ಗೊಂದಲಗಳನ್ನು ನಿವಾರಿಸಿ ಅವರ ಹೆಸರು ಬರೆದುಕೊಡಲೆಂದು ಪ್ರತಿ ಬೂತ್ ಮಟ್ಟದಲ್ಲಿಯೂ ಬಿಎಲ್ಒಗಳನ್ನು ಕೂರಿಸಲಾಗಿತ್ತು. ಬಹುತೇಖ ಬಡಾವಣೆಗಳಲ್ಲಿ ಮತದಾರರು ನಮ್ಮ ಹೆಸರಿಲ್ಲ ಎಂದು ಬಿಎಲ್ಒಗಳ ಬಳಿ ಚರ್ಚಿಸುತ್ತಿದ್ದುದು ಕಂಡು ಬಂದಿತು.
ತುಮಕೂರಿನ ಎಸ್ಐಟಿ ಬಡಾವಣೆಯ ವಾಸವಿ ಕಾಲೇಜು ಸುತ್ತ ಇರುವ ಕೆಲವು ಮತದಾರರ ಹೆಸರು ಬಟವಾಡಿಯ ಶ್ರೀರಂಗ ವಿದ್ಯಾಮಂದಿರದ ಮತಗಟ್ಟೆಯಲ್ಲಿ ಇತ್ತು. ಇವರು ಈ ಹಿಂದೆ ಇವರೆಲ್ಲಾ ವಾಸವಿ ಹೈಸ್ಕೂಲ್ನಲ್ಲಿ ಮತದಾನ ಮಾಡುತ್ತಿದ್ದರು. ಹೆಸರು ಬೇರೆ ಕಡೆ ಇರುವ ಕಾರಣ ಅದೆಷ್ಟೋ ಮಂದಿ ಮತಹಾಕಲು ಹೋಗಲಿಲ್ಲ. ಇದೇ ರೀತಿ ಶೆಟ್ಟಿಹಳ್ಳಿ ರಸ್ತೆಯ ವಿಶಾಲಾಕ್ಷಮ್ಮ ಸಭಾಭವನ ಹಿಂದಿನ ಪ್ರದೇಶದ ಕೆಲವು ಮತದಾರರು ಹೆಸರುಗಳು ಎಸ್ಐಟಿಯ ಮತಗಟ್ಟೆಯಲ್ಲಿ ಸೇರಿಕೊಂಡಿದ್ದವು. ತುಮಕೂರು ಸಿದ್ದಗಂಗಾ ಕಾಲೇಜಿನ ಮತಗಟ್ಟೆಯಲ್ಲಿ ಹೆಸರುಗಳು ಇಲ್ಲದೇ ಇರುವ ಹಾಗೂ ಹೆಸರು ಡಿಲೀಟ್ ಆಗಿರುವ ಕಾರಣಕ್ಕೆ ಕೆಲವು ಮತದಾರರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದ ದೃಶ್ಯಗಳು ಕಂಡು ಬಂದವು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
