ಬೆಂಗಳೂರು: ತಾವು ಪ್ರತಿನಿಧಿಸುವ ಮಲ್ಲೇಶ್ವರಂ ಕ್ಷೇತ್ರದ ಮತ್ತೀಕೆರೆಯ ಹಲವೆಡೆಗಳಲ್ಲಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರು ಮಂಗಳವಾರ ಪಾದಯಾತ್ರೆ ನಡೆಸಿ, ಜನರ ಕುಂದುಕೊರತೆ ಆಲಿಸಿದರು. ಜತೆಗೆ ಅನಿರೀಕ್ಷಿತವಾಗಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು.
ಮತ್ತೀಕೆರೆಯ ನಾನಾ ರಸ್ತೆಗಳಲ್ಲಿ ಸಾಗಿದ ಅವರು, ಅಲ್ಲಲ್ಲಿ ಸೋರುತ್ತಿದ್ದ ನೀರು, ಅಸ್ತವ್ಯಸ್ತ ಚರಂಡಿ ಕಂಡು, ಸಿಡಿಮಿಡಿಗೊಂಡರು.
ಸ್ಥಳದಲ್ಲೇ ಇದ್ದ ಬಿಬಿಎಂಪಿ ಅಧಿಕಾರಿಯನ್ನು ಕರೆದ ಅವರು, ನಿಗದಿತ ಗಡುವಿನಲ್ಲಿ ಗುಣಮಟ್ಟದ ಕಾಮಗಾರಿ ಮುಗಿಸುವಂತೆ ಆದೇಶಿಸಿದರು.
ಶಾಲೆಯಲ್ಲಿ ಮಕ್ಕಳೊಂದಿಗೆ ಕೈ ಕುಲುಕಿ, ಕುಶಲೋಪರಿ ವಿಚಾರಿಸಿ ಮುಕ್ತವಾಗಿ ಬೆರೆತರು.
ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿನಿಯೊಬ್ಬಳು, ‘ಉಚಿತವಾಗಿ ಟ್ಯಾಬ್ ಕೊಟ್ಟಿರುವುದಕ್ಕೆ ಸಚಿವರಿಗೆ ಧನ್ಯವಾದ ತಿಳಿಸಿದಳು. ಅಲ್ಲದೆ, ಇದರಿಂದ ತಮ್ಮ ಕಲಿಕೆಗೆ ತುಂಬಾ ನೆರವು ಸಿಕ್ಕುತ್ತಿದೆ’ ಎಂದಳು.
ಬಳಿಕ ಮಾತನಾಡಿದ ಸಚಿವರು, ‘ಸರಕಾರಿ ಶಾಲೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿರುವುದು ಸಂತೋಷದ ಸಂಗತಿಯಾಗಿದೆ. ಈ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ’ ಎಂದರು.
ಶಾಲಾ ಮಕ್ಕಳನ್ನು ವಿಜ್ಞಾನದ ಪ್ರಯೋಗಾಲಯ, ಇಂಗ್ಲಿಷ್ ಲ್ಯಾಬ್ ತರಹದ ಜಾಗಗಳಿಗೆ ಆಗಾಗ್ಗೆ ಕರೆದುಕೊಂಡು ಹೋಗಬೇಕು. ಈ ಮೂಲಕ ಸರಕಾರಿ ಶಾಲೆಗಳ ಮಕ್ಕಳಿಗೂ ವಿನೂತನ ಅನುಭವ ಸಿಗುವಂತೆ ಮಾಡಬೇಕು’ ಎಂದರು.
ಮುಂದಿನ 25 ವರ್ಷಗಳು ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಅಮೃತ ಕಾಲವಾಗಿದೆ. ಇದು ಇಂದಿನ ಮಕ್ಕಳ ಉಜ್ವಲ ಭವಿಷ್ಯಕ್ಕೆ ಸಂಬಂಧಿಸಿದ್ದಾಗಿದೆ ಎಂದು ಅವರು ನುಡಿದರು.
ಈ ಸಂದರ್ಭದಲ್ಲಿ ಮಕ್ಕಳು ವಂದೇ ಮಾತರಂ ಮುಂತಾದ ದೇಶಭಕ್ತಿಯ ಘೋಷಣೆ ಮೊಳಗಿಸಿದರು.
