ಚಳ್ಳಕೆರೆ
ನಗರದ ಪ್ರದೇಶದಲ್ಲಿ ಕಳೆದ ಹಲವಾರು ವರ್ಷಗಳಿಂದ ಯಾವುದೇ ಮನೆ, ನಿವೇಶನ ಇಲ್ಲದೇ ಇರುವ ನಿರ್ವಸತಿಯರಿಗೆ ಮನೆ ನೀಡುವ ಯೋಜನೆ ಕುರಿತಂತೆ ಶಾಸಕ ಟಿ.ರಘುಮೂರ್ತಿಯವರ ಮಾರ್ಗದರ್ಶನದಲ್ಲಿ ಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಿಕೆಗೆ ಜ.15 ಕೊನೆ ದಿನವಾಗಿದ್ದು, ಒಟ್ಟು 5200 ಅರ್ಜಿಗಳು ಸಲ್ಲಿಕೆಯಾಗಿದ್ದು, ಅರ್ಜಿಗಳ ಪರಿಶೀಲನಾ ಕಾರ್ಯ ಪ್ರಾರಂಭವಾಗಿದೆ ಎಂದು ಪೌರಾಯುಕ್ತ ಜೆ.ಟಿ.ಹನುಮಂತರಾಜು ತಿಳಿಸಿದರು.
ಅವರು, ಶನಿವಾರ ನಗರದ 17ನೇ ವಾರ್ಡ್ನಲ್ಲಿ ನಗರಸಭೆ ಸಿಬ್ಬಂದಿ ಹಾಗೂ ಕರ್ನಾಟಕ ಹೌಸಿಂಗ್ ಬೋರ್ಡ್ ಇಂಜಿನಿಯರ್ಗಳ ಸಹಕಾರದಿಂದ ಅರ್ಜಿ ಸಲ್ಲಿಸಿದವರ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ನಗರಸಭೆಯ ಸಿಬ್ಬಂದಿ ವರ್ಗ ಒಟ್ಟು 4 ತಂಡಗಳಲ್ಲಿ ನಗರದ ಎಲ್ಲಾ ವಾರ್ಡ್ಗಳಿಗೆ ತೆರಳಿ ಅರ್ಜಿ ಸಲ್ಲಿಸಿದವರ ಮಾಹಿತಿ ಹಾಗೂ ಸಂಪೂರ್ಣ ವಿವರವನ್ನು ಪಡೆದು ವರದಿ ನೀಡಲಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಮನೆ ಪಡೆಯಲು ಅರ್ಜಿ ಸಲ್ಲಿಸಿದವರು ನಿಗಧಿ ಪಡಿಸಿದ ಹೆಚ್ಚುವರಿ ಮೊತ್ತವನ್ನು ನಗರಸಭೆಗೆ ಪಾವತಿಸಬೇಕಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ 1.70 ಲಕ್ಷ, ಸಾಮಾನ್ಯ ವರ್ಗಕ್ಕೆ 2.30 ಲಕ್ಷ ಹಣವನ್ನು ಆಯ್ಕೆಯಾದವರು ಪಾವತಿಸಬೇಕಾಗುತ್ತದೆ. ಮಾಹಿತಿ ಪಡೆಯುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಸುಳ್ಳು ಮಾಹಿತಿಯನ್ನು ನೀಡಬಾರದು. ಮನೆ ಮತ್ತು ನಿವೇಶನ ಇದ್ದರು ಸುಳ್ಳು ಮಾಹಿತಿ ನೀಡಿ ಆಯ್ಕೆಯಾದಲ್ಲಿ ಪರಿಶೀಲನೆ ನಂತರ ದೃಢಪಟ್ಟಲ್ಲಿ ಅಂತವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ಪೌರಾಯುಕ್ತರು ನೀಡಿದ್ಧಾರೆ. ಈ ಸಂದರ್ಭದಲ್ಲಿ ನಗರಸಭೆಯ ಬೋರಪ್ಪ, ಓಬಣ್ಣ, ಇಂಜಿನಿಯರ್ಗಳಾದ ಹರೀಶ್, ಬಸವರಾಜ, ವಿಜಯಕುಮಾರ್ ಮುಂತಾದವರು ಉಪಸ್ಥಿತರಿದ್ದರು.