ದಾವಣಗೆರೆ:
ಮಾನವೀಯ ಮೌಲ್ಯ, ಸೃಜನಶೀಲತೆ ಮೈಗೂಡಿಸಿಕೊಂಡು ಸುಂದರ ಬದುಕು ರೂಪಿಸಿಕೊಳ್ಳಬೇಕೆಂದು ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಡಾ.ಹೆಚ್.ಎಸ್.ಮಂಜುನಾಥ ಕುರ್ಕಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಮಾ.ಸ.ಬ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ಶನಿವಾರ ಕಾಲೇಜಿನ ಬಿಎ ಮತ್ತು ಬಿಕಾಂ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಓರಿಯೆಂಟೇಷನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಬದಲಾದ ಕಾಲಘಟ್ಟದಲ್ಲಿರುವ ನಾವು ಇಂದಿನ ದಿನಮಾನಗಳಲ್ಲಿ ಮೊಬೈಲ್, ಲ್ಯಾಪ್ಟಾಪ್ಗಳೊಂದಿಗೆ ಜೀವನ ನಡೆಸುತ್ತಿರುವ ಕಾರಣ ನಮ್ಮಲ್ಲಿ ಮಾನವೀಯ ಸಂವೇದನೆಗಳು ಕಣ್ಮರೆಯಾಗುತ್ತಿವೆ. ಆದ್ದರಿಂದ ನಮಗೆ ಈಗ ಮಾನವೀಯ ಮೌಲ್ಯಗಳ ಅವಶ್ಯಕತೆ ಅತ್ಯಂತ ತುರ್ತಾಗಿದೆ ಎಂದು ಹೇಳಿದರು.
ಯಾವ ವಿದ್ಯಾರ್ಥಿ ಮಾನವವೀಮೌಲ್ಯ, ಸೃಜನಶೀಲತೆ, ಕೌಶಲ್ಯ, ಕ್ರಿಯಾಶೀಲತೆಗಳನ್ನು ಮೈಗೂಡಿಸಿಕೊಳ್ಳುತ್ತಾನೋ, ಆ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನ ತನ್ನಷ್ಟಕ್ಕೆ ತಾನೇ ಆಗಿ, ಸುಂದರ ಬದುಕು ಕಟ್ಟಿಕೊಳ್ಳಲು ಪ್ರೇರಣೆ ನೀಡಲಿದೆ. ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ, ಸೃಜನಶೀಲತೆ, ಸಂಶೋಧನೆ ಮಾಡುವ ಗುಣ ಇಲ್ಲದಿದ್ದರೆ, ಮಾರುಕಟ್ಟೆ ವಸ್ತುಗಳಾಗಿ ಹೊರಹೊಮ್ಮುವುದು ಕಷ್ಟದಾಯವಾಗಲಿದೆ. ಪ್ರತಿಯೊಂದು ವಸ್ತುವಿನ ಗುಣಮಟ್ಟ, ಗಾತ್ರ-ಅಳತೆಯನ್ನು ತೂಗಿ ಅಳೆಯುವುದು ಮಾರುಕಟ್ಟೆ ಸಂಸ್ಕೃತಿಯ ಮಾನದಂಡವಾಗಿದೆ.
ಆದ್ದರಿಂದ ಈ ಗುಣಗಳನ್ನು ಅಳವಡಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಲಿದೆ ಎಂದರು,ಪ್ರಸ್ತುತ ಪಂಚಾಂಗದ ಮೇಲೆ ನಂಬಿಕೆ ಇಡುವುದು ಹೆಚ್ಚಾಗಿ, ಮೌಢ್ಯಕ್ಕೆ ಒಳಗಾಗುತ್ತಿದ್ದೇವೆ. ಆದರೆ, ನಾವು ಪಂಚಾಗವನ್ನು ಬಿಟ್ಟು, ಪಂಚ ಅಂಗಗಳ ಮೇಲೆ ನಂಬಿಕೆ ಇಟ್ಟುಕೊಂಡು ಆತ್ಮವಿಶ್ವಾಸದಿಂದ ಮುನ್ನಡೆದರೆ, ಪ್ರಪಂಚವೇ ಬೆರಗಾಗುವ ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದ ಅವರು, ವಿದ್ಯಾರ್ಥಿಗಳು ತಮ್ಮ ಮುಂದಿರುವ ಸವಾಲುಗಳನ್ನು ಸ್ವಚಿತ್ತದಿಂದ ಸ್ವೀಕರಿಸಿ, ಅವುಗಳನ್ನು ಎದುರಿಸುವ ಗುಣ ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಆತ್ಮವಿಶ್ವಾಸವೇ ಆಯುಧವಾಗಿದೆ. ಹೀಗಾಗಿ ಆತ್ಮವಿಶ್ವಾಸಕ್ಕೆ ಮಿಗಿಲಾದದ್ದು ಮತ್ತೊಂದಿಲ್ಲ. ವಿದ್ಯಾರ್ಥಿಗಳು ಸದೃಢ ಮನಸ್ಸು ಹೊಂದುವ ಮೂಲಕ ಹೊಸಚಿಂತನೆಗಳನ್ನು ರೂಢಿಸಿಕೊಂಡರೆ, ನಾಗರೀಕ ಸಮಾಜ ಕಟ್ಟಲು ಸಹಕಾರಿಯಾಗಲಿದೆ ಎಂದ ಅವರು, ಯುವ ಪೀಳಿಗೆಯು ಭವ್ಯ ಭಾರತದ ಉಸಿರಾಗಿದ್ದು, ಯುವ ಸಮೂಹದ ಮುಂದಿರುವ ಸವಾಲುಗಳನ್ನು ಸ್ವಯಂ ಪ್ರೇರಿತರಾಗಿ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕಾಗಿದೆ ಎಂದರು.
ಹಿಂದೆ ಅಂಕ ಗಳಿಕೆಯೇ ಉದ್ಯೋಗಕ್ಕೆ ಅಡಿಗಲ್ಲಾಗಿತ್ತು. ಹೆಚ್ಚು ಅಂಕಗಳಿಸಿದವರನ್ನು ಕರೆದು ಉದ್ಯೋಗ ಕೊಡಲಾಗುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ. ಅಂಕಗಳಿಗೆ ಬೆಲೆ ಇಲ್ಲದಂತಾಗಿದೆ. ವಿದ್ಯೆ, ಜ್ಞಾನಕ್ಕಾಗಿ ಇದೆಯೇ ಹೊರತು, ಉದ್ಯೋಗಕ್ಕಾಗಿಯಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಎಲ್ಲದಕ್ಕಿಂತಲೂ ಕ್ರಿಯಾಶೀಲತೆಯೇ ಮುಖ್ಯವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಕಿರು ಪರೀಕ್ಷೆ ಮತ್ತು ಮುಖ್ಯ ಪರೀಕ್ಷಾ ಮಾದರಿ ಕುರಿತು ಸಹ ಪ್ರಾಧ್ಯಾಪಕಿ ಜೆ.ತಾರಾಮಣಿ, ವಿದ್ಯಾರ್ಥಿ ವೇತನ ಮತ್ತು ಶುಲ್ಕ ರಿಯಾಯಿತಿ ಕುರಿತು ಕಚೇರಿ ಸಹಾಯಕಿ ಯಶೋಧಮ್ಮ, ಕ್ರೀಡೆ ಮತ್ತು ಸಾಂಸ್ಕøತಿಕ ಚಟುವಟಿಕೆಗಳ ಕುರಿತು ದೈಹಿಕ ಶಿಕ್ಷಣ ನಿರ್ದೇಶಕ ಮನ್ಸೂರ್, ಎನ್ಎಸ್ಎಸ್ ಮತ್ತು ಎನ್ಸಿಸಿ ಚಟುವಟಿಕೆ ಬಗ್ಗೆ ಟಿ.ಆರ್.ರಂಗಸ್ವಾಮಿ, ಗ್ರಂಥಭಂಡಾರದ ಪ್ರಯೋಜನದ ಬಗ್ಗೆ ವಿನೋದ್ ಎಸ್. ದೇವರಾಜ್ ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಕೆ. ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು.
