ಮಾನವ ಜನಾಂಗದಲ್ಲಿ ಜಾತಿ ತಾರತಮ್ಯ ಸಲ್ಲದು

ತಿಪಟೂರು

    ಪ್ರಾಣಿ, ಪಕ್ಷಿಗಳನ್ನು ದೇವರೆಂದು ಪೂಜಿಸುವ ನಾಡಿನಲ್ಲಿ, ಮಾನವ ಜನಾಂಗದಲ್ಲಿ ಜಾತಿಯ ಬಗ್ಗೆ ತಾರತಮ್ಯ , ದೌರ್ಜನ್ಯ ಮಾಡುವುದು ಸಲ್ಲದು ಎಂದು ಜನಸ್ಪಂದನ ಟ್ರಸ್ಟ್‍ನ ಅಧ್ಯಕ್ಷ ಸಿ.ಬಿ.ಶಶಿಧರ್ ಹೇಳಿದ್ದಾರೆ.

   ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ, ಅಲ್ಪ ಸಂಖ್ಯಾತರು ಮತ್ತು ದಲಿತರ ಮೇಲಿನ ದೌರ್ಜನ್ಯ ತಡೆಗೆ ಕಠಿಣ ಕಾನೂನು ರಚನೆಗೆ ಆಗ್ರಹಿಸಿ ಜುಲೈ 10 ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಶಿಧರ್, ದೇಶದ ಕೆಲವೆಡೆ ಕಾಗೆ, ಇಲಿಗಳನ್ನು ದೇವರೆಂದು ನಂಬಿ ಪೂಜಿಸುವ ಪ್ರವೃತ್ತಿ ಜಾರಿಯಲ್ಲಿದೆ. ಇಂತಹ ನಾಡಿನಲ್ಲಿ ಮಾನವ ದ್ವೇಷಿ ವಾತಾವರಣ ನಿರ್ಮಾಣವಾಗಿರುವುದು ಭಯದ ವಾತಾವರಣ ಉಂಟುಮಾಡಿದೆ.

   ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ನಿರಂತರ ಹಲ್ಲೆ ಮತ್ತು ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಇದು ಆಳುವವರ ನಿರ್ಲಕ್ಷ್ಯ ಮತ್ತು ಪರೋಕ್ಷ ಸಹಕಾರವನ್ನು ಎತ್ತಿ ತೋರಿಸುತ್ತಿದೆ. ನ್ಯಾಯಪರವಾದ ಕೆಲಸಗಳಿಗೆ ಜೀವಾವಧಿ ಶಿಕ್ಷೆಯ ಉಡುಗೊರೆ ನೀಡುವ ಮೂಲಕ ಭವಿಷ್ಯದಲ್ಲಿನ ನವಭಾರತದ ರೂಪುರೇಷೆಯನ್ನು ಪ್ರಶ್ನಿಸುವಂತಾಗಿದೆ. ಇಂತಹ ಆತಂಕದ ದಿನಗಳಲ್ಲಿ ಆಳುವ ಸರ್ಕಾರದ ಜನ ವಿರೋಧಿ ಕ್ರಮಗಳ ವಿರುದ್ಧ ಪ್ರಜಾತಾಂತ್ರಿಕವಾಗಿ ಗಟ್ಟಿಯಾಗಿ, ಪ್ರಶ್ನಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

   ಸೌಹಾರ್ಧ ತಿಪಟೂರು ಸಮಿತಿಯ ಮುಖಂಡ ಅಲ್ಲಾಬಕಾಶ್ ಮಾತನಾಡಿ, ಆಳುವ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ 2010 ರಿಂದ ಇಲ್ಲಿವರೆಗೂ 63 ಕ್ಕೂ ಹೆಚ್ಚು ಗುಂಪು ಥಳಿತದ ಹತ್ಯೆಗಳಾಗಿವೆ. ಇದರಲ್ಲಿ ಬಹುತೇಕ ದಲಿತರು ಮತ್ತು ಅಲ್ಪಸಂಖ್ಯಾತರು ಒಳಗಾಗಿದ್ದಾರೆ. ಬಲಪಂಥೀಯ ಶಕ್ತಿಗಳು ಪ್ರಜ್ಞಾ ಪೂರ್ವಕವಾಗಿ ಧರ್ಮಗಳ ನಡುವೆ ಬಿತ್ತುತ್ತಿರುವ ದ್ವೇಷದ ಕಾರಣ ಇಂತಹ ಹತ್ಯೆಗಳು ನಡೆಯುತ್ತಿವೆ.

    ಇದನ್ನು ಖಂಡಿಸಿ, ದೌರ್ಜನ್ಯ ತಡೆಗೆ ಕಠಿಣ ಕಾನೂನು ರಚನೆಗೆ ಆಗ್ರಹಿಸಿ ಡಿ.ಎಸ್.ಎಸ್. ಜನಸ್ಪಂದನ ಟ್ರಸ್ಟ್, ಡಾ.ಬಿ.ಆರ್. ಅಂಬೇಡ್ಕರ್ ಸೇನೆ, ರಾಜ್ಯ ರೈತ ಸಂಘ, ಸೇರಿದಂತೆ ವಿವಿಧ ಸಂಘಟನೆಗಳು ರಚಿಸಿಕೊಂಡಿರುವ ಸೌಹಾರ್ಧ ತಿಪಟೂರು ವತಿಯಿಂದ ಇಂದು ಸಂಜೆ 5-30 ಕ್ಕೆ ನಗರದ ಸಿಂಗ್ರಿ ನಂಜಪ್ಪ ವೃತ್ತದಲ್ಲಿ ಮೇಣದಬತ್ತಿ ಹಚ್ಚುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದರು.
ಸಭೆಯಲ್ಲಿ ಮುಖಂಡರಾದ ವಿಜಯಕುಮಾರ್, ಸಿ.ಬಿ. ಶಶಿಧರ್, ಅಲ್ಲಾಬಕಾಶ್, ಉಜ್ಜಜ್ಜಿ ರಾಜಣ್ಣ, ಶಫಿಉಲ್ಲಾ ಶರೀಫ್, ಮೊಹಮ್ಮದ್, ಇಮ್ರಾನ್, ಮೋಹಿನ್ ಖಾನ್, ಬಷೀರ್ ಸಾಬ್, ಮೋಹನ್ ಸಿಂಗ್, ಮನೋಹರ್ ಪಾಟೀಲ್ ಮುಂತಾದವರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link