ಚಿತ್ರದುರ್ಗ:
ಮಾರಕ ರೋಗಗಳ ವಿರುದ್ದ ಲಸಿಕೆಗಳನ್ನು ನೀಡಲು ಆಯೋಜಿಸಲಾಗಿರುವ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಹೇಳುವ ವಿಚಾರಗಳಿಂದ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಮಾರಕ ರೋಗಗಳನ್ನು ನಿಯಂತ್ರಿಸಿ ಎಂದು ವೈದ್ಯಾಧಿಕಾರಿಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ವಿ.ನೀರಜ್ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ ಹಾಗೂ ಕ್ಷೇತ್ರ ಆರೋಗ್ಯ ಮೇಲ್ವಿಚಾರಕರುಗಳಿಗೆ ಲಸಿಕೆಗಳಿಂದ ತಡೆಗಟ್ಟಬಹುದಾದ ಮಾರಕ ರೋಗಗಳ ಬಗ್ಗೆ ದುರ್ಗದಸಿರಿಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪೋಲಿಯೋ, ನಾಯಿಕೆಮ್ಮ, ಕ್ಷಯ, ಧರ್ನುವಾಯು ಹೀಗೆ ಹತ್ತು ಮಾರಕ ರೋಗಗಳ ವಿರುದ್ದ ಲಸಿಕೆಗಳನ್ನು ನೀಡಲಾಗುತ್ತಿದೆ. ಅದಕ್ಕಾಗಿ ಹಮ್ಮಿಕೊಂಡಿರುವ ತರಬೇತಿ ಕಾರ್ಯಾಗಾರದಲ್ಲಿ ನಿಮ್ಮ ಜ್ಞಾನವನ್ನು ವೃದ್ದಿಸಿಕೊಂಡು ಮಾರಕ ರೋಗಗಳನ್ನು ನಿಯಂತ್ರಿಸಿ ತಾಯಿ ಮತ್ತು ಶಿಶು ಮರಣವನ್ನು ಕಡಿಮೆಗೊಳಿಸುವಲ್ಲಿ ಯಶಸ್ವಿಯಾಗಿ ಎಂದು ಹೇಳಿದರು.
ಆರ್.ಸಿ.ಹೆಚ್.ಅಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಮಾತನಾಡಿ ಉತ್ಪಾದನಾ ಘಟಕದಿಂದ ಹಿಡಿದು ಮಾರಕ ರೋಗಿಗಳಿಗೆ ನೀಡುವತನಕ ಯಾವ ರೀತಿ ಲಸಿಕೆಗಳನ್ನು ಶೀಥಲ ಸರಪಳಿಯಲ್ಲಿ ನಿರ್ವಹಣೆ ಮಾಡಬೇಕು ಎಂಬುದರ ಕುರಿತು ತಿಳಿಸಿದರು.
ಹಿರಿಯ ವೈದ್ಯಾಧಿಕಾರಿ ಬಳ್ಳಾರಿಯ ಡಾ.ಶ್ರೀಧರ್ ಮಾತನಾಡುತ್ತ ಲಸಿಕೆಗಳಿಂದ ತಡೆಗಟ್ಟಬಹುದಾದ ಮಾರಕ ರೋಗಗಳ ಬಗ್ಗೆ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಹೊಸದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ.ಕವಿತ ಬೇಡಿಕೆ ಪಟ್ಟಿ, ಕ್ರಿಯಾ ಯೋಜನೆ ಹೇಗೆ ತಯಾರಿಸಬೇಕು ನಮೂನೆ ಯಾವ ರೀತಿ ಭರ್ತಿ ಮಾಡಬೇಕು ಎಂಬುದರ ಬಗ್ಗೆ ವಿವರವಾಗಿ ಹೇಳಿದರು.
ಬಸವೇಶ್ವರ ವೈದ್ಯಕೀಯ ಕಾಲೇಜಿನ ಮಕ್ಕಳ ತಜ್ಞ ಡಾ.ಬಸಂತ್, ಸಮುದಾಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ನಾಗೇಂದ್ರಗೌಡ, ಜಿಲ್ಲಾ ಕಾರ್ಯಕ್ರಮ ಅನುಷ್ಟಾನಾಧಿಕಾರಿ ಡಾ.ಜಯಮ್ಮ ವೇದಿಕೆಯಲ್ಲಿದ್ದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ