ಮುರುಘಾಮಠದಲ್ಲಿ ಸಾಮೂಹಿಕ ವಿವಾಹ; ಸಾಲಮಾಡಿ ಅದ್ದೂರಿಯ ಮದುವೆ ತರವಲ್ಲ

ಚಿತ್ರದುರ್ಗ :
            ಮದುವೆಗಳಿಗಾಗಿ ಸಾಲ ಮಾಡುವುದು ಸರಿಯಲ್ಲ. ಅದ್ಧೂರಿ ಮದುವೆಗಳಿಗಿಂತ ಅರ್ಥಪೂರ್ಣ ಮದುವೆಗಳೇ ಲೇಸು ಎಂದು ಶಿವಮೊಗ್ಗ ಬಸವಕೇಂದ್ರದ ಶ್ರೀ ಬಸವಮರುಳಸಿದ್ಧ ಸ್ವಾಮಿಗಳು ಹೇಳಿದರು.
            ನಗರದ ಬಸವಕೇಂದ್ರ ಶ್ರೀಮುರುಘಾಮಠದಲ್ಲಿ ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ (ರಿ) ಚಿತ್ರದುರ್ಗ ಇವರ ಸಹಯೋಗದಲ್ಲಿ ನಡೆದ ಇಪ್ಪತ್ತೆಂಟನೇ ವರ್ಷದ ಒಂಬತ್ತನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು
           ಇಡೀ ದೇಶದಲ್ಲೇ 28ವರ್ಷಗಳಿಂದ ಒಂದೇ ಜಾಗದಲ್ಲಿ ನಿರಂತರವಾಗಿ ಪ್ರತಿತಿಂಗಳು ವಿವಾಹಗಳನ್ನು ನೆರವೇರಿಸಿದ ಹೆಗ್ಗಳಿಕೆ ಶ್ರೀಮುರುಘಾಮಠದ್ದಾಗಿದೆ. ತಂದೆ ತಾಯಿಯರಿಗೆ ತಮ್ಮ ಮಕ್ಕಳ ಮದುವೆಗಳನ್ನು ಮಾಡುವುದು ಸಾರ್ಥಕದ ವಿಷಯವಾದರೆ ಶ್ರೀಮಠವು ನಿರಂತರವಾಗಿ ಇಂಥ ಮದುವೆಗಳನ್ನು ಮಾಡುತ್ತ ಸಾರ್ಥಕ್ಯವನ್ನು ಪಡೆದಿದೆ ಎಂದರು
              ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ದಂಪತಿಗಳು ಭಕ್ತಿ ಎಂಬ ಸಕ್ಕರೆಯನ್ನು ಬೆರೆಸಿದಂತೆ ಜಗಳವಿಲ್ಲದೆ ಭಿನ್ನಾಭಿಪ್ರಾಯಗಳಿಲ್ಲದೆ ನಾಲ್ಕು ಜನರಿಗೆ ಆದರ್ಶಪ್ರಾಯವಾಗುವಂತೆ ಬಾಳಬೇಕು. ಸತಿಪತಿಗಳಲ್ಲಿ ಹೊಂದಾಣಿಕೆ ಬಹಳ ಮುಖ್ಯ. ಗಂಧ ತೀಡಿದಂತೆ ಅವರ ಬದುಕಿರಬೇಕು. ದುಶ್ಚಟ, ದುರಾಚಾರ, ದುರ್ಗುಣಗಳನ್ನು ಇಟ್ಟುಕೊಳ್ಳದೆ ಜೀವನ ಸಾಗಿಸಿದರೆ ಅದೇ ಸ್ವರ್ಗ ಸುಖವಾಗಿರುತ್ತದೆ ಎಂದರು.
             ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮಿಗಳು ಮಾತನಾಡಿ, ಡಾ. ಶಿವಮೂರ್ತಿ ಮುರುಘಾ ಶರಣರು ಬರದ ಜಿಲ್ಲೆ ಚಿತ್ರದುರ್ಗದಲ್ಲಿ ಬಡವರ ಸಂಜೀವಿನಿಯಾಗಿ 28 ವರ್ಷಗಳಿಂದ ಸರಳ ವಿವಾಹಗಳನ್ನು ನಡೆಸಿಕೊಂಡು ಬಂದಿದ್ದಾರೆ. ಅದಕ್ಕಾಗಿಯೇ 25 ಕೋಟಿ ವೆಚ್ಚದಲ್ಲಿ ಅನುಭವ ಮಂಟಪವನ್ನು ನಿರ್ಮಿಸಿದ್ದಾರೆ. ಇಲ್ಲಿ ಮದುವೆಯಾದ ಸತಿ ಪತಿಗಳಿಬ್ಬರು ಅರ್ಥ ಮಾಡಿಕೊಂಡು ಹೊಂದಾಣಿಕೆಯ ಜೀವನ ಮಾಡಬೇಕು. ಶಿಕ್ಷಣದಿಂದ ಮಾತ್ರ ಬದುಕನ್ನು ಸದೃಢಗೊಳಿಸಿಕೊಳ್ಳಬಹುದು. ಶಿಕ್ಷಕರ ವೃತ್ತಿ ಮಹತ್ವವಾದುದು ಎಂಬ ರಾಧಾಕೃಷ್ಣನ್ ಸಂದೇಶದಂತೆ ಪ್ರತಿಯೊಬ್ಬರರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಬೇಕು ಎಂದರು.
ಚಿತ್ರದುರ್ಗ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಶ್ರೀಮತಿ ಎಂ.ಸಿ. ಶೋಭ ಮಾತನಾಡಿ, ಆಧುನಿಕತೆಯ ಈ ಕಾಲದಲ್ಲಿ ಮದುವೆಗಳೆಂದರೆ ತಂದೆ ತಾಯಿಗಳಲ್ಲಿ ಭಯವನ್ನುಂಟು ಮಾಡುವ ವಾತಾವರಣ ಸೃಷ್ಟಿಯಾಗಿದೆ. ಹೀಗಿರುವಾಗ ಶ್ರೀಗಳು ದುಂದುವೆಚ್ಚಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರಳ ಕಲ್ಯಾಣ ಮಹೋತ್ಸವಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಸಂತಸದ ವಿಷಯವಾಗಿದೆ. ವಧುವರರು ಪರಸ್ಪರರ ಕುಟುಂಬದಲ್ಲಿ ಪ್ರೀತಿ ಗೌರವಗಳನ್ನು ಗಳಿಸಿಕೊಂಡು ದಾಂಪತ್ಯ ಜೀವನವನ್ನು ಅರ್ಥಪೂರ್ಣಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.
            ಕಾರ್ಯಕ್ರಮದಲ್ಲಿ 25 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಇದೇ ಸಂದರ್ಭದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಡಾ. ರಾಧಾಕೃಷ್ಣನ್‍ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ಎಸ್‍ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ ಸ್ವಾಗತಿಸಿದರು. ಜಿ.ಟಿ. ಪ್ರದೀಪ್‍ಕುಮಾರ್ ನಿರೂಪಿಸಿದರು. ಜ್ಞಾನಮೂರ್ತಿ ಶರಣು ಸಮರ್ಪಿಸಿದರು.

Recent Articles

spot_img

Related Stories

Share via
Copy link