ದಾವಣಗೆರೆ:
ಪಕ್ಷದ ಕಾರ್ಯಕರ್ತರು, ಬೂತ್ ಉಸ್ತುವಾರಿಗಳು, ಪೇಜ್ ಪ್ರಮುಖರು ಮೈಕೊಡವಿ ನುಗ್ಗಿ ಕೆಲಸ ಮಾಡುವ ಮೂಲಕ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಬೇಕೆಂದು ಪಂಚಾಯತ್ ರಾಜ್ ಅಭಿವೃದ್ಧಿ ಸಚಿವ, ಜಿಲ್ಲಾ ಉಸ್ತುವಾರಿ ಮಂತ್ರಿ ಕೆ.ಎಸ್.ಈಶ್ವರಪ್ಪ ಕರೆ ನೀಡಿದರು.
ಮಹಾನಗರ ಪಾಲಿಕೆ ಚುನಾವಣೆಯ ಹಿನ್ನೆಲೆಯಲ್ಲಿ ನಗರದ ಶಾರದಾಂಬ ಕಲ್ಯಾಣ ಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 30-40 ಮತದಾರರ ಉಸ್ತುವಾರಿ ಒಬ್ಬರಿಗೆ ವಹಿಸಿ, ಬೂತ್ ಉಸ್ತುವಾರಿಗಳನ್ನು ನೇಮಿಸಿ, ಮತದಾರರ ಪಟ್ಟಿಹಿಡಿದು ಪೇಜ್ಗೆ ಒಬ್ಬರಂತೆ ಪೇಜ್ ಪ್ರಮುಖರನ್ನು ನೇಮಿಸಿ, ನಿಮ್ಮ ಬೂತ್ಗಳನ್ನೇ ಒಂದು ದೇಶ ಎಂದು ಅರಿತು ಮೈಕೊಡವಿ ನುಗ್ಗಿ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಬೇಕೆಂದು ಕಿವಿಮಾತು ಹೇಳಿದರು.
ಚುನಾವಣೆ ಹೊಸದಲ್ಲ:
ಪಕ್ಷದ ಕಾರ್ಯಕರ್ತರಿಗೆ ಚುನಾವಣೆ ಹೊಸದೇನಲ್ಲ. ಲೋಕಸಭೆ, ವಿಧಾನಸಭೆ ಗೆದ್ದುಕೊಂಡು ಬಂದಿದ್ದೇವೆ. ಒಮ್ಮೆ ಪಾಲಿಕೆಯಲ್ಲೂ ಪೂರ್ಣ ಬಹುಮತ ಸಾಧಿಸಿ ಆಡಳಿತವನ್ನೂ ನಡೆಸಿದ್ದೇವೆ. ಬಿಜೆಪಿಗೆ ಕಾರ್ಯಕರ್ತರೇ ಶಕ್ತಿಯಾಗಿದ್ದಾರೆ. ಆದರೆ, ಚುನಾವಣೆ ಅಂದಾಕ್ಷಣ ನಮ್ಮ ಶಕ್ತಿಯನ್ನೆ ಮರೆತು ಬಿಡುತ್ತೇವೆ. ಬೂತ್ ಮಟ್ಟದ ಕಾರ್ಯಕರ್ತರನ್ನು ಮಾತನಾಡಿಸಿ, ಅವರನ್ನು ಚುನಾವಣೆಯಲ್ಲಿ ತೊಡಿಸಿಕೊಂಡು, ಬಿಜೆಪಿಯ ಮತದಾರರು ಇಲ್ಲದ, ಗೊಂದಲ ಇರುವ ಮನೆಗಳಿಗೆ ಹೋಗಿ ಮಾತನಾಡಿಸಿ ಪಕ್ಷದ ವಿಚಾರಧಾರೆ ಮತ್ತು ಸಾಧನೆಯ ತಿಳಿಸಿ ನಮ್ಮ ಮತದಾರರನ್ನಾಗಿ ಪರಿವರ್ತಿಸಿ ವೋಟ್ ಹಾಕಿಸಬೇಕೆಂದು ಸಲಹೆ ನೀಡಿದರು.
ಪೂರ್ಣ ಬಹುಮತ:
ನಮ್ಮ ಒಬ್ಬೊಬ್ಬ ಕಾರ್ಯಕರ್ತನೂ ಹನುಮಂತ ಇದ್ದಂಗೆ. ಆದರೆ, ಸ್ವಲ್ಪ ನಿದ್ದೆ ಮಾಡ್ತರ್ತಾರೆ. ಅವರಿಗೆ ಆಗಾಗ ತಿವಿದು ಅಲ್ಲಿ ಸೀತೆಯನ್ನು ರಾವಣ ಹೊತ್ತುಕೊಂಡು ಹೋಗಿದ್ದಾನೆಂಬುದನ್ನು ಆಗಾಗಾ ಎಚ್ಚರಿಸುತ್ತಿರಬೇಕಷ್ಟೆ ಎಂದ ಅವರು, ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಬಂದೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಗ್ರ ಹಿಂದುತ್ವ ಹೋಗಲಿ:
ಮುಸ್ಲಿಮರು ಬಿಜೆಪಿಗೆ ಮತ ನೀಡುವುದಿಲ್ಲ ಎಂಬ ಭಾವನೆಯನ್ನು ಬಿಟ್ಟುಬಿಡಿ. ಪ್ರಧಾನಿ ನರೇಂದ್ರ ಮೋದಿ ಅವರ ಸಬ್ಕಾ ಸಾತ್ ಸಬ್ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬ ಕಾರ್ಯಕ್ರಮಗಳಿಂದ ಮುಸ್ಲಿಂ ಮತದಾರರು ಪರಿವರ್ತನೆಯಾಗಿದ್ದಾರೆ. ಹೀಗಾಗಿಯೆ ತಾವು ಸ್ಪರ್ಧಿಸಿದ್ದ 6 ಚುನಾವಣೆಗಳ ಪೈಕಿ 5 ಚುನಾವಣೆಗಳಲ್ಲಿ ಬಿಜೆಪಿಗೆ ಒಂದು ಮತ ಬಂದಿರಲಿಲ್ಲ. ಆದರೆ, ಈಗ ಮುಸ್ಲಿಂ ಬೂತ್ಗಳಲ್ಲಿ 10ರಿಂದ 352 ಮತಗಳು ನನಗೆ ಬಂದಿವೆ. ಪಾಲಿಕೆ ಚುನಾವಣೆಯಲ್ಲೂ ಮುಸ್ಲಿಂ ಮತಗಳು ಬರಲಿವೆ ಎಂದ ಅವರು, ಮುಸ್ಲಿಮರಲ್ಲಿನ ಉಗ್ರತೆ ಮತ್ತು ಉಗ್ರ ಹಿಂದೂತ್ವ ಹೋಗಬೇಕಷ್ಟೆ ಎಂದರು.
ಹೆಂಡ್ತಿಗೆ ಹಚ್ಕೊಟ್ ಬನ್ನಿ:
ನಾವು ಕೆಲಸ ಮಾಡುತ್ತಿರುವುದು ಒಂದು ವಿಚಾರಕ್ಕಾಗಿ ಮತ್ತು ದೇಶಕ್ಕಾಗಿ. ಈ ಚುನಾವಣೆಗೆ ಬಂದಿರುವುದು ದಾವಣಗೆರೆಯ ಅಭಿವೃದ್ಧಿಗಾಗಿ ನಾವು ಸ್ಮಾರ್ಟ್ಸಿಟಿಯನ್ನು ಹಾಕಿಸಿಕೊಂಡು ಬಂದಿದ್ದೇವೆ. ಆ ಅನುದಾನದ ಸಂಪೂರ್ಣ ಬಳಕೆ ಆಗಬೇಕಾದರೆ, ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬುದನ್ನು ಮತದಾರರಿಗೆ ಮನವರಿಕೆ ಮಾಡಿಕೊಡಿ, ಗಂಡ ಕಾಂಗ್ರೆಸ್ ಇದ್ದರೆ, ಹೆಂಡ್ತಿಗೆ ಹಚ್ಚಿಕೊಟ್ಟು ಬನ್ನಿ, ಏಕೆಂದರೆ, ನನ್ನನ್ನು ಸೇರಿ ಹೆಂಡ್ತಿ ಮಾತು ಕೇಳದರ್ಯಾರೂ ಇಲ್ಲ ಎಂದರು.
ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ಬಿಜೆಪಿಗೆ ಈ ಚುನಾವಣೆ ಮಹತ್ವದ ಚುನಾವಣೆಯಾಗಿದ್ದು, ನ.12ರಂದು ನಡೆಯಲಿರುವ ದಾವಣಗೆರೆ, ಮಂಗಳೂರು ಮಹಾನಗರ ಪಾಲಿಕೆ, ಪುರಸಭೆ ಮತ್ತು ನಗರಸಭೆ ಚುನಾವಣೆಯಲ್ಲಿ ಬಿಜೆಪಿ ನೂರಕ್ಕೆ ಇನ್ನೂರು ಭಾಗ ಗೆದ್ದೆ ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೂ ಆರೇಳು ದಿನ ನಮ್ಮ ಕಾರ್ಯಕರ್ತರು ವಿರಮಿಸದೇ, ಮನೆ, ಮನೆಗೆ ಹೋಗಿ, ಮೋದಿ ಅವರ ಕಾರ್ಯಕ್ರಗಳನ್ನು ಜನರಿಗೆ ತಲುಪಿಸಿ, ಪ್ರತಿಯೊಬ್ಬ ಕಾರ್ಯಕರ್ತರು ಅಭ್ಯರ್ಥಿಗಳಂತೆ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.ಚುನಾವಣಾ ಸಹ ಸಂಚಾಲಕ ದತ್ತಾತ್ರೇಯ ಮಾತನಾಡಿ, ದಾವಣಗೆರೆ ಹಾಗೂ ಮಂಗಳೂರು ಮಹಾನಗರಗಳಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಎರಡರಲ್ಲೂ ಬಹುಮತ ಗಳಿಸಬೇಕೆಂಬ ಸವಾಲನ್ನು ಪಕ್ಷ ತೆಗೆದುಕೊಂಡಿದೆ. ಚುನಾವಣಾ ಅಖಾಡ ಸಜ್ಜಾಗಿದ್ದು, ಬಿರುಸಿನ ಚಟುವಟಿಕೆ ಆರಂಭವಾಗಿವೆ. ಹೀಗಾಗಿ ಪಕ್ಷದ ಕಾರ್ಯಕರ್ತರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಕಿವಿಮಾತು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಾಸಕರಾದ ಎಸ್.ಎ.ರವೀಂದ್ರ ನಾಥ್, ಮಾಡಾಳು ವಿರೂಪಾಕ್ಷಪ್ಪ, ಪ್ರೊ.ಎನ್.ಲಿಂಗಣ್ಣ, ಎಸ್.ವಿ.ರಾಮಚಂದ್ರಪ್ಪ, ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಮುಖಂಡರುಗಳಾದ ಆನಂದಪ್ಪ, ರಾಜನಹಳ್ಳಿ ಶಿವಕುಮಾರ್, ಜಿ.ಎಸ್.ಅನಿತ್, ರಮೇಶ್ ನಾಯ್ಕ, ಸಂಗನಗೌಡ, ಎಂಜೆರಪ್ಪ, ಅಣಬೇರು ಜೀವನಮೂರ್ತಿ, ಎಚ್.ಸಿ.ಜಯಮ್ಮ ಮತ್ತಿತರರು ಉಪಸ್ಥಿತರಿದ್ದರು.ಸಹನಾ ಮಂಜುನಾಥ್ ವಂದೇ ಮಾತರಂ ಗೀತೆ ಹಾಡಿದರು. ಧನಂಜೇಯ ಕಡ್ಲೇಬಾಳ್ ಸ್ವಾಗತಿಸಿದರು. ಶಿವರಾಜ್ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
