ಬೆಂಗಳೂರು
ರಾಜ್ಯದ ಜನರಿಗೆ ತಿಳಿಸಲು ಪ್ರಧಾನಿ ಬಳಿ ಯಾವುದೇ ಸರಕಿಲ್ಲ. ಅದಕ್ಕಾಗಿ ಏನೇನೋ ಹೇಳುತ್ತಿದ್ದಾರೆ. ಅವರಿಗೆ ಯಾರ ಭಯ ಇದೆ ಎಂಬುದು ತಮಗೆ ಗೊತ್ತಿಲ್ಲ. ಅದು ನಿಮ್ಮ ಊಹೆಗೆ ಬಿಟ್ಟದ್ದು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿಗೆ ತಮ್ಮ ಬಗ್ಗೆ ಭಯ ಇದೆ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಪಕ್ಷದ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸಿದ್ದರು.ಜೊತೆಗೆ ಅವರ ಪಕ್ಷದಿಂದ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಯಾರಾದರೂ ಒಬ್ಬರು ಚುನಾವಣೆಗೆ ಸ್ಪರ್ಧಿಸಬೇಕಿತ್ತು. ಯಾರೋ ಪಕ್ಷ ಬಿಟ್ಟಿದ್ದಾರೆ. ಯಾರೋ ಮತ್ತೊಂದು ಪಕ್ಷ ಸೇರಿದ್ದಾರೆ ಎಂಬುದರಲ್ಲಿ ವಿಶೇಷತೆ ಏನಿಲ್ಲ ಎಂದು ಉಮೇಶ್ ಜಾಧವ್ ಬಿಜೆಪಿ ಸೇರ್ಪಡೆ ಬಗ್ಗೆ ವ್ಯಂಗ್ಯವಾಡಿದರು.
ಬೆಂಗಳೂರು ಯೋಜನೆಗಳನ್ನು ಪ್ರಧಾನಿ ಕಲಬುರಗಿಯಲ್ಲಿ ಉದ್ಘಾಟನೆ ಮಾಡಿರುವ ಔಚಿತ್ಯವನ್ನು ಪ್ರಶ್ನಿಸಿರುವ ಖರ್ಗೆ, ಕಲಬುರಗಿ ಭಾಗದ ಜನ ತಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಮುಂದಿನ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಜನ ತಮ್ಮನ್ನು ಕೈಬಿಡುವುದಿಲ್ಲ. ಪ್ರಧಾನಿ ಬಂದು ಪ್ರಚಾರ ಮಾಡಿದಾಕ್ಷಣ ಜನ ಬದಲಾಗುವುದಿಲ್ಲ. ಅಭಿವೃದ್ಧಿಯನ್ನು ನೋಡಿ ಮತ ನೀಡುತ್ತಾರೆ. ಹಿಂದೆ ಏನೆಲ್ಲಾ ಅಭಿವೃದ್ದಿ ಕೆಲಸ ಮಾಡಿದ್ದೇನೆ ಎಂಬುದು ಜನರಿಗೆ ತಿಳಿದಿದೆ ಎಂದರು.
ಕಲಬುರಗಿ ಅಂದರೆ ಪ್ರಧಾನಿ ಅವರಿಗೆ ಪ್ರೀತಿ ಇರಬೇಕು. ಅವರು ಏನೇನು ಯೋಜನೆ ಕೊಟ್ಟಿದ್ದಾರೆ. ಅದಕ್ಕಾಗಿ ಗೃಹ ಸಚಿವ ರಾಜನಾಥ ಸಿಂಗ್ ಕಲಬುರಗಿಗೆ ಬಂದು ಹೋಗಿದ್ದಾರೆ. ನಿಮ್ಮ ಕಣ್ಣೆದುರೇ ಇಷ್ಟೆಲ್ಲಾ ಅಭಿವೃದ್ದಿ ಆಗಿದೆ. ಸಂವಿಧಾನ ಕಲಂ 371 ಜೆ ತಿದ್ದುಪಡಿಗೆ ಬಿಜೆಪಿ ವಿರೋಧಿಸಿದ್ದರು. ಸಂಸತ್ತಿನಲ್ಲಿ ತಿದ್ದುಪಡಿ ಮಸೂದೆ ಮಂಡಿಸಿದರೆ ಅಡ್ವಾಣಿ ಅವರು ಕಸದ ಬುಟ್ಟಿಗೆ ಬಿಸಾಡಿದ್ದರು. ಆದರೂ ಯುಪಿಎ ಅವಧಿಯಲ್ಲಿ ವಿಶೇಷ ಸ್ಥಾನ ಮಾನ ದೊರಕಿಸಿ ಕೊಟ್ಟಿದ್ದೇವೆ ಎಂದರು.
ಇಂದು ಹೈದರಾಬಾದ್ ಕರ್ನಾಟಕ ವಿಶೇಷ ಸ್ಥಾನಮಾನದಿಂದಾಗಿ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಮತ್ತಿತರ ಸೌಲಭ್ಯಗಳು ಕಲಬುರಗಿ ಭಾಗದ ಜನರಿಗೆ ಲಭ್ಯವಾಗಿದೆ. ನಮ್ಮ ಸರ್ಕಾರದ ಕೆಲಸದಿಂದ ಜನರು ತೃಪ್ತರಾಗಿದ್ದಾರೆ. ಹೊಟ್ಟೆಕಿಚ್ಚು ಇರುವವರು ಏನೂಬೇಕೋ ಅದನ್ನೆಲ್ಲಾ ಮಾಡುತ್ತಿದ್ದಾರೆ. ಎಲ್ಲದಕ್ಕೂ ಕ್ಷೇತ್ರದ ಜನತೆ ತಕ್ಕ ಉತ್ತರ ನೀಡುತ್ತಾರೆ ಎಂದು ಪ್ರಧಾನಿ ಹಾಗೂ ಬಿಜೆಪಿ ನಾಯಕರ ವಿರುದ್ದ ಮಲ್ಲಿಕಾರ್ಜುನ್ ಖರ್ಗೆ ಹೇಳಿದರು.