ಮಧುಗಿರಿ
ಕೇಂದ್ರದಲ್ಲಿ 10 ವರ್ಷ ಆಡಳಿತ ನಡೆಸಿದ ಯುಪಿಎ ಸರ್ಕಾರದ ಬಗ್ಗೆ ದಿನನಿತ್ಯ ಭ್ರಷ್ಟಾಚಾರದ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದನ್ನು ಗಮನಿಸಿದ್ದೆವು. ಎನ್ಡಿಎಯ ಸರ್ಕಾರ ಅಧಿಕಾರ ಸ್ವೀಕರಿಸಿದ ನಂತರ ದಿನ ನಿತ್ಯ ಭಾರತ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರ ಎಂದು ವಿದೇಶಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದೆ ಎಂದು ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಮ್ ಜೆ ಗೌಡ ಕಾಂಗ್ರೆಸ್ ಪಕ್ಷದ ವಿರುದ್ಧ ವ್ಯಂಗ್ಯವಾಡಿದರು.
ಪಟ್ಟಣದ ಮಂಜುನಾಥ ಕಂಫರ್ಟ್ನಲ್ಲಿ ತಾಲ್ಲೂಕು ಬಿ.ಜೆ.ಪಿ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪ್ರಬುದ್ದರ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆಲ ವಿರೋಧಿಗಳು ಮೋದಿಯವರ ವಿರುದ್ದ ಅಪಪ್ರಚಾರದಲ್ಲಿ ತೊಡಗಿಕೊಂಡು ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಆಯ್ಕೆಯಾದರೆ ನಮ್ಮ ದೇಶ ಮತ್ತಷ್ಟು ಸದೃಢವಾಗುತ್ತದೆ ಎಂದರು.
ವಾಜಪೇಯಿ ಅವರು ಮತ್ತೊಮ್ಮೆ ಖಂಡಿತವಾಗಿಯೂ ಪ್ರಧಾನಮಂತ್ರಿಯಾಗಲಿದ್ದಾರೆಂದು ಕಾರ್ಯಕರ್ತರು ಉದಾಸೀನ ಮಾಡಿ ಒಂದು ಬಾರಿ ಸ್ವಯಂ ಪ್ರೇರಿತವಾಗಿ ಮೋಸ ಮಾಡಿಕೊಂಡರು. ಈ ಬಾರಿ ಹಾಗಾಗದಂತೆ ಎಚ್ಚರವಹಿಸಿ ಚುನಾವಣೆ ಮುಗಿಯುವವರೆವಿಗೂ ಮೋದಿಯನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡುತ್ತೇವೆ ಎಂದು ದೃಢ ಸಂಕಲ್ಪದಿಂದ ಚುನಾವಣೆಯನ್ನು ಎದುರಿಸಬೇಕಾಗಿದೆ ಎಂದು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.
ತಾಲ್ಲೂಕು ಬಿ.ಜೆ.ಪಿ ಘಟಕದ ಅಧ್ಯಕ್ಷ ಎಸ್.ಇ.ರಮೇಶ್ ರೆಡ್ಡಿ ಮಾತನಾಡಿ, ವಿಶ್ವ ಕಂಡ ಅಪ್ರತಿಮ ನಾಯಕರಲ್ಲಿ ನರೇಂದ್ರ ಮೋದಿಯವರೂ ಒಬ್ಬರಾಗಿದ್ದು, ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯನ್ನು ಮಾಡಲು ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಕಾರ್ಯನಿರ್ವಹಿಸ ಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಸುರೇಶ್ ಚಂದ್ರ, ಜಿಲ್ಲಾ ಒಬಿಸಿ ಮೋರ್ಚಾ ಉಪಾಧ್ಯಕ್ಷ ಸುರೇಶ್, ತಾಲ್ಲೂಕು ಉಪಾಧ್ಯಕ್ಷ ಬಿ.ಪಿ.ನಾರಾಯಣ್, ಎಸ್.ಸಿ ಮೋರ್ಚಾ ಅಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ರವಿಕೀರ್ತಿ, ಉಪಾಧ್ಯಕ್ಷ ದೀಕ್ಷಿತ್, ಖಜಾಂಚಿ ಲೋಕೇಶ್, ಅನಿಲ್, ಶಿವಶಂಕರ್, ಹಿತೇಶ್, ನಾಗೇಂದ್ರ, ತಿಮ್ಮಣ್ಣ ಎಬಿವಿಪಿಯ ಎಸ್ ಆರ್ ರಮೇಶ್ ಹಾಗೂ ಇನ್ನಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
