ದಾವಣಗೆರೆ:
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಫೇಲ್ ಯುದ್ದ ವಿಮಾನ ಖರೀದಿಯಲ್ಲಿ ಬ್ರಹ್ಮಾಂಡ ಭಷ್ಟಾಚಾರ ನಡೆಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯುದ್ದ ವಿಮಾನ ಖರೀದಿಯಲ್ಲಿ ಸುಮಾರು 70 ಸಾವಿರ ಕೋಟಿ ರೂ. ಹಗರಣ ನಡೆಸಿದ್ದು, ಇದರಲ್ಲಿ ಮೋದಿ ಮಿತ್ರರು ಭಾಗಿಯಾಗಿದ್ದಾರೆಂದು ದೂರಿದರು.
ಯುಪಿಎ ಸರ್ಕಾರದ ಅಧಿಕಾರವಧಿಯಲ್ಲಿ ಒಂದು ಯುದ್ಧ ವಿಮಾನಕ್ಕೆ 550 ಕೋಟಿ ದರ ನಿಗದಿ ಮಾಡಿ, ಈ ಯೋಜನೆಯ ವೆಚ್ಚದ ಶೇ.50 ರಷ್ಟು ಮೊತ್ತವನ್ನು ಭಾರತದಲ್ಲಿ ಬಂಡವಾಳವನ್ನಾಗಿ ಹೂಡಬೇಕೆಂದು ಫ್ರಾನ್ಸ್ನ ಹೆಚ್ಎಎಲ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ನಂತರದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರ ಆ ಒಪ್ಪಂದವನ್ನು ರದ್ದು ಮಾಡಿ, ಫ್ರಾನ್ಸ್ಗೆ ರಕ್ಷಿಣ ಸಚಿವ, ವಿದೇಶಾಂಗ ಸಚಿವರನ್ನು ಕರೆದೊದಯ್ಯದೇ, ಮೋದಿ ಮಿತ್ರ ಅಂಬಾನಿ ಒಬ್ಬರನ್ನೇ ಕರೆದುಕೊಂಡು ಹೋಗಿ, ಒಂದು ವಿಮಾನಕ್ಕೆ 1,650 ಕೋಟಿ ರೂ. ನಿಗದಿ ಮಾಡಿ, ಕೇವಲ 10 ದಿನಗಳ ಹಿಂದೆ ಆರಂಭವಾದ, ಒಂದು ದಿನವೂ ಏರೋಪ್ಲೇನ್ ತಯಾರಿಸದ ಕಂಪೆನಿಯಿಂದ 36 ಯುದ್ಧ ವಿಮಾನಗಳನ್ನು ಖರೀದಿಸಲಾಗಿದ್ದು, ಇದರಲ್ಲಿ ಸುಮಾರು 40 ಸಾವಿರ ಕೋಟಿ ರೂ.ಗಳಷ್ಟು ಅವ್ಯವಹಾರ ನಡೆದಿದೆ ಎಂದು ಹೇಳಿದರು.
ರಫೇಲ್ ಯುದ್ದ ವಿಮಾನ ಖರೀದಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸುವ ಚಿಂತನೆ ನಡೆಸಲಾಗುತ್ತಿದೆ ಎಂದ ಅವರು, ದೇಶದಲ್ಲಿ ಭ್ರಷ್ಟ ಸರ್ಕಾರ ಅಧಿಕಾರದಲ್ಲಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ನೇಹಿತರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ನರೇಂದ್ರ ಮೋದಿ ಅವರು ಬಂದು 1300 ದಿನಗಳಾದರೂ ಇನ್ನೂ ಕಪ್ಪು ಹಣ ಜನರಿಗೆ ಕೊಟ್ಟಿಲ್ಲ. ಅಲ್ಲದೇ ಲಲಿತ್ ಮೋದಿ ಮುಂತಾದವರು ಈ ಬ್ಯಾಂಕ್ನಲ್ಲಿದ್ದ ಹಣ ದೋಚಿಕೊಂಡು ವಿದೇಶಕ್ಕೆ ಹೋಗಿದ್ದಾರೆ. ಇದು ಈ ದೇಶದ ಚೌಕಿದಾರ ಎಂದು ಹೇಳುವ ಪ್ರಧಾನಿ ಕಾಲದಲ್ಲಿ ನಡೆದಿದೆ ಎಂದು ದಿನೇಶ್ ಗುಂಡೂರಾವ್ ಟೀಕಿಸಿದರು.
