ಹೊನ್ನಾಳಿ:
ರಂಗಕಲೆಯನ್ನು ರಂಗಾಸಕ್ತರು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕಿದೆ ಎಂದು ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ರಾಣೇಬೆನ್ನೂರು ನಗರದ ಶ್ರೀ ಮಂಜುನಾಥ ನಾಟ್ಯ ಸಂಘದ ವತಿಯಿಂದ ಪಟ್ಟಣದ ನ್ಯಾಮತಿ ರಸ್ತೆಯಲ್ಲಿ ಹಾಕಿರುವ ನಾಟಕ ಥೇಯಟರ್ನಲ್ಲಿ ಭಾನುವಾರ ರಾತ್ರಿ “ಭಂಡ ಬಡ್ಡಿ ಮಗ” ನಾಟಕದ 25ನೇ ಪ್ರದರ್ಶನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಟಿವಿ, ಮೊಬೈಲ್ ಹಾವಳಿಗಳಿಂದ ನಾಟಕ, ಸಂಗೀತ, ಸಾಹಿತ್ಯ ಪ್ರಕಾರಗಳು ಅಳಿವಿನಂಚಿಗೆ ಬಂದಿದ್ದು, ಬದುಕಿಗೆ ಹತ್ತಿರವಿರುವ ನಾಟಕ ಕಲೆಯನ್ನು ತ್ವರಿತಗತಿಯಲ್ಲಿ ಉಳಿಸುವ ಕಾರ್ಯವಾಗಬೇಕಿದೆ ಎಂದು ತಿಳಿಸಿದರು.
ಹೆಣ್ಣುಮಕ್ಕಳು ಧಾರಾವಾಹಿಗಳು ಹಾಗೂ ಸಿನೆಮಾಗಳಲ್ಲಿ ಹೆಚ್ಚು ಸಮಯ ಕಳೆದರೆ ಗಂಡಸರು ವಿವಿಧ ಕಾರ್ಯಗಳ ಒತ್ತಡದಲ್ಲಿ ಇಂದು ಸಮಯ ಕಳೆಯುತ್ತಿದ್ದಾರೆ. ಇದರಿಂದ ನೈಜ ಜೀವನಕ್ಕೆ ಹೊಡೆತ ಉಂಟಾಗುತ್ತದೆ ಎಂದು ಹೇಳಿದರು.
ಒಂದು ಕಾಲದಲ್ಲಿ ನಾಟಕಗಳಿಗೆ ಹೆಚ್ಚು ಪ್ರಾಧಾನ್ಯತೆ ಇತ್ತು. ಇಂದು ನಾಟಕಗಳೆಂದರೆ ತಾತ್ಸಾರ ಮನೋಭಾವನೆ ತೋರಿಸುವ ಜನ ಹೆಚ್ಚಿದ್ದಾರೆ. ಈ ಗುಣ ತೊಲಗಬೇಕು. ನಾಟಕಗಳಿಂದ ನೇರವಾಗಿ ಕಲೆಯನ್ನು ನೋಡಿ ಆನಂದಿಸಬಹುದು ಎಂದು ತಿಳಿಸಿದರು.
ನಮ್ಮ ಬದುಕಿನ ನಿಜವಾದ ವಿಷಯವನ್ನು ನಾಟಕಗಳು ತೋರಿಸುತ್ತವೆ. ಸಮಾಜದ ಅಂಕು-ಡೊಂಕು ತಿದ್ದುವ ನಾಟಕಗಳು ಇಂದು ಅವಶ್ಯಕವಾಗಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ನಾಟಕಗಳನ್ನು ವೀಕ್ಷಿಸುವ ಮೂಲಕ ರಂಗ ಕಲೆಯನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಸಂಘದ ಮಾಲೀಕರಾದ ನಾಗರತ್ನಮ್ಮ ಚಿಕ್ಕಮಠ್ ಮಾತನಾಡಿ, ಮಳೆಗಾಲದಲ್ಲಿ ಶಿಕಾರಿಪುರ ಪಟ್ಟಣದಲ್ಲಿ ಕ್ಯಾಂಪ್ ಮಾಡಿದ್ದು ಜನರು ನಾಟಕ ನೋಡಲು ಬಾರದೆ ನಷ್ಟ ಅನುಭವಿಸಬೇಕಾಯಿತು. ಈಗ ಹೊನ್ನಾಳಿ ಪಟ್ಟಣದಲ್ಲಿ ನಾಟಕ ಪ್ರದರ್ಶನ ಪ್ರಾರಂಭ ಮಾಡಿದ್ದೇವೆ.
ಕಲಾಸಕ್ತರು ನಾಟಕ ನೋಡಲು ಬರುತ್ತಿದ್ದಾರೆ. ಇದು ಹೀಗೆಯೇ ಮುಂದುವರಿಯಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಪಪಂ ಸದಸ್ಯ ಸುರೇಶ್ ಹೊಸಕೇರಿ, ನಾಟಕ ಪಾತ್ರಧಾರಿಗಳಾದ ಮಲ್ಲಿಕಾರ್ಜುನ ಚಿಕ್ಕಮಠ್, ಸುಧೀರ್ ಚಿಕ್ಕಮಠ್, ರೇಣುಕಾ, ಮಹಾಂತೇಶ್ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
