ನವದೆಹಲಿ:
“ನಿಯಮ ಉಲ್ಲಂಘನೆ, ದುರ್ನಡತೆ, ಧಿಕ್ಕರಿಸುವ ವರ್ತನೆ”ಗಾಗಿ ಎಎಪಿ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರನ್ನು ಶುಕ್ರವಾರ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದ್ದು, ವಿಶೇಷಾಧಿಕಾರ ಸಮಿತಿಯ ವರದಿ ಬಾಕಿ ಇದೆ.
ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶ ಸರ್ಕಾರ(ತಿದ್ದುಪಡಿ)ದ ಮಸೂದೆಯ ಪ್ರಸ್ತಾವಿತ ಆಯ್ಕೆ ಸಮಿತಿಯಲ್ಲಿ ಮೇಲ್ಮನೆಯ ನಾಲ್ವರು ಸದಸ್ಯರ ಹೆಸರನ್ನು ಸೇರಿಸಿದ್ದಕ್ಕಾಗಿ ಎಎಪಿ ನಾಯಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸದನದ ನಾಯಕ ಪಿಯೂಷ್ ಗೋಯಲ್ ಅವರು ಮಂಡಿಸಿದ ಪ್ರಸ್ತಾವನೆಯನ್ನು ಅನುಸರಿಸಿ ಚಡ್ಡಾ ಅವರನ್ನು ಅಮಾನತುಗೊಳಿಸಲಾಗಿದೆ.ಧ್ವನಿ ಮತದ ಮೂಲಕ ಈ ಪ್ರಸ್ತಾವವನ್ನು ಅಂಗೀಕರಿಸಲಾಯಿತು.
ದೆಹಲಿ ಸೇವಾ ಮಸೂದೆಗೆ ಸಂಬಂಧಿಸಿದ ಪ್ರಸ್ತಾವನೆಯಲ್ಲಿ ಐವರು ಸಂಸದರ ಸಹಿಯನ್ನು ನಕಲಿ ಮಾಡಿದ್ದಾರೆ ಎಂದು ಆರೋಪಿಸಿದ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಎಎಪಿ ನಾಯಕ ರಾಘವ್ ಚಡ್ಡಾ, ಕೇಸರಿ ಪಕ್ಷ ತಮ್ಮ ಧ್ವನಿಯನ್ನು ಹತ್ತಿಕ್ಕಲು ಯತ್ನಿಸುತ್ತಿದೆ ಎಂದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆಮ್ ಆದ್ಮಿ ಪಕ್ಷದ(ಎಎಪಿ) ನಾಯಕ, ತಮ್ಮ ವಿರುದ್ಧದ ಆರೋಪಗಳು “ಆಧಾರರಹಿತ” ಎಂದು ಪ್ರತಿಪಾದಿಸಿದರು ಮತ್ತು ಆಯ್ಕೆ ಸಮಿತಿಗೆ ತಮ್ಮ ಲಿಖಿತ ಒಪ್ಪಿಗೆ ಅಥವಾ ಸಹಿ ಇಲ್ಲದೆ ಯಾವುದೇ ಸದಸ್ಯರ ಹೆಸರನ್ನು ಸಂಸದರು ಪ್ರಸ್ತಾಪಿಸಬಹುದು ಎಂದು ಹೇಳಿದ್ದಾರೆ.
ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸಿದ ಬಿಜೆಪಿ ಲೋಕಸಭಾ ಸದಸ್ಯರ ವಿರುದ್ಧ ವಿಶೇಷಾಧಿಕಾರ ಸಮಿತಿ ಮತ್ತು ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದು ಚಡ್ಡಾ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ