ರಾಜ್ಯದ ನರ್ಸಿಂಗ್ ಕಾಲೇಜು​ಗಳ ಗುಣಮಟ್ಟ ಸುಧಾರಣೆಗೆ ಆದ್ಯತೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು:

ರಾಜ್ಯದ ಅಭಿವೃದ್ಧಿಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಪ್ರಮುಖವಾದ ಕ್ಷೇತ್ರಗಳು. ರಾಜ್ಯದಲ್ಲಿರುವ ನರ್ಸಿಂಗ್ ಕಾಲೇಜುಗಳ ಗುಣಮಟ್ಟ ಸುಧಾರಣೆಗೆ ಆದ್ಯತೆ ನೀಡಲಾಗುತ್ತಿದೆ. ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಂಗ್ಲೋ ಇಂಡಿಯನ್ ಯುನಿಟಿ ಸೆಂಟರ್ ಇವರ ಸಹಭಾಗಿತ್ವದಲ್ಲಿ ಅಂತರರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಮತ್ತು 20ನೇ ಕರ್ನಾಟಕ ರಾಜ್ಯ ಮಟ್ಟದ ಫಾರೆನ್ಸ ನೈಟಿಂಗೇಲ್ ಶುಶ್ರೂಷ ಅಧಿಕಾರಿಗಳ ಪ್ರಶಸ್ತಿ 2020-2021 ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆರೋಗ್ಯ ಕ್ಷೇತ್ರದಲ್ಲಿ ನರ್ಸಿಂಗ್ ವೃತ್ತಿಗೆ ಬಹಳ ಮಹತ್ವವಿದೆ. ಆಧುನಿಕ ವೈದ್ಯಕೀಯ ಉಪಕರಣಗಳ ಬಳಕೆ ಸೇರಿದಂತೆ ವೈದ್ಯಕೀಯ ಕ್ಷೇತ್ರದ ಎಲ್ಲ ಅರಿವು ಶುಶ್ರೂಷಕರಿಗೆ ಅವಶ್ಯಕವಿದೆ. ಉತ್ತಮ ಸೇವೆ ಸಲ್ಲಿಸಿದ ಶುಶ್ರೂಷಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ತಿಳಿಸಿದರು.

ಆರೋಗ್ಯ ಕ್ಷೇತ್ರದ ಅಭಿವೃದ್ಧಿ: ಸರ್ಕಾರ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿದೆ. ಆರೋಗ್ಯ ಕ್ಷೇತ್ರದ ವಲಯವಾರು ಅಭಿವೃದ್ಧಿಗೆ 108 ತಾಲೂಕುಗಳನ್ನು ಗುರುತಿಸಲಾಗಿದೆ. ಅವುಗಳಿಗೆ ಮೂಲಸೌಕರ್ಯ, ಸ್ಟಾಫ್ ನರ್ಸುಗಳು, ಲ್ಯಾಬ್ ಪರಿಣಿತರು, ವೈದರನ್ನು ಒದಗಿಸುವ ಮಹತ್ವದ ಕಾರ್ಯವನ್ನು ಮಾಡಲಾಗುತ್ತಿದೆ. ರಾಜ್ಯದ ಅಭಿವೃದ್ಧಿಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಪ್ರಮುಖವಾದ ಕ್ಷೇತ್ರಗಳು. ಎಲ್ಲ ನಗರಗಳಲ್ಲಿ ‘ನಮ್ಮ ಕ್ಲೀನಿಕ್’ ಸ್ಥಾಪನೆ, 100 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲ್ದರ್ಜೆ, 4 ಜಿಲ್ಲೆಗಳಲ್ಲಿ ಸಂಚಾರಿ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು, 4000 ವೈದ್ಯರು ಹಾಗೂ ನರ್ಸ್‌ಗಳ ನೇಮಕಾತಿ ಮಾಡಲಾಗಿದೆ.
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಅಡಿ ಕೆಲಸ ಮಾಡುತ್ತಿರುವ ನರ್ಸ್‌ಗಳ ವೇತನದ ಪಾವತಿಯಲ್ಲಿನ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.
ಶುಶ್ರೂಷಕರ ಮಾನವೀಯ ಸೇವೆ ಬೆಲೆ ಕಟ್ಟಲಾಗದ್ದು: ಉದಾತ್ತವಾದ ವೃತ್ತಿಯಲ್ಲಿರುವ ಶುಶ್ರೂಷಕರು ದೇವಧೂತರಂತೆ ಕಾರ್ಯ ನಿರ್ವಹಿಸುತ್ತಾರೆ. ಶುಶ್ರೂಷಕರ ಮಾನವೀಯ ಸೇವೆ ಬೆಲೆ ಕಟ್ಟಲಾಗದ್ದು. ವೃತ್ತಿಪರ ಶುಶ್ರೂಷಕರಿಂದ ರೋಗಿಗಳ ಮಾನಸಿಕ ಸ್ಥೈರ್ಯ ಹೆಚ್ಚುತ್ತದೆ. ಯುದ್ಧದ ಸಂದರ್ಭದಲ್ಲಿ ಫ್ಲಾರೆನ್ಸ್ ನೈಟಿಂಗೇಲ್ ಅವರು ಮಾಡಿದ ಸೇವೆ ವಿಶ್ವಕ್ಕೆ ಮಾದರಿಯಾಗಿದೆ. ಅವರ ಜಯಂತಿಯಂದು ಶುಶ್ರೂಷ ಅಧಿಕಾರಿಗಳಿಗೆ ಪ್ರಶಸ್ತಿ ನೀಡುತ್ತಿರುವುದು ಅತ್ಯಂತ ಸಮಂಜಸವಾಗಿದೆ. ಆಂಗ್ಲೋ ಇಂಡಿಯನ್ ಯೂನಿಟಿ ಸೆಂಟರ್​ನ ಐವಾನ್ ನಿಗ್ಲಿಯವರು ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿರುವುದಕ್ಕೆ ಅಭಿನಂದನೆಗಳು. ರಾಜ್ಯದ ಶುಶ್ರೂಷಕರು ವಿಶ್ವಾದ್ಯಂತ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಉತ್ತರ ಕರ್ನಾಟಕ ಭಾಗದ ನರ್ಸ್​ಗಳನ್ನು ಪ್ರಶಸ್ತಿಗೆ ಪರಿಗಣಿಸಲು ಸಲಹೆ: ಉತ್ತರ ಕರ್ನಾಟಕ ಭಾಗದಲ್ಲಿ ಉತ್ತಮವಾದ ನರ್ಸಿಂಗ್ ಕಾಲೇಜುಗಳು ಹಾಗೂ ಶುಶ್ರೂಷಕರಿದ್ದಾರೆ. ದೂರದ ಊರುಗಳಲ್ಲಿರುವ ನರ್ಸ್​ಗಳ ಸೇವೆಯನ್ನು ಗುರುತಿಸಿದರೆ, ಆ ಪ್ರದೇಶದಲ್ಲಿರುವ ನರ್ಸ್​ಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಆ ಭಾಗದ ನರ್ಸ್​ಗಳನ್ನೂ ಪ್ರಶಸ್ತಿಗೆ ಪರಿಗಣಿಸಬೇಕೆಂದು ಐವಾನ್ ನಿಗ್ಲಿಯವರಿಗೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.
ಶಿವಮೊಗ್ಗದ ಜಾಹ್ನವಿ ಗೌಡ ಎಂಬ 24 ವರ್ಷದ ಶುಶ್ರೂಷಕಿ ಮೃತಪಟ್ಟಾಗ ತಮ್ಮ ಅಂಗಾಂಗಳನ್ನು ದಾನ ಮಾಡುವ ಮೂಲಕ 6 ಜನರಿಗೆ ಜೀವದಾನ ಮಾಡಿದ್ದಾರೆ. ತಮ್ಮ ಮರಣದ ನಂತರವೂ ತನ್ನ ಅಂಗಾಂಗಗಳು ಇತರರಿಗೆ ಉಪಯೋಗವಾಗಲಿ ಎಂಬ ಉದಾತ್ತ ಭಾವ ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap