ಐ.ಡಿ.ಹಳ್ಳಿ
ಆದರ್ಶ ಶಿಕ್ಷಕರಾದ ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರಪತಿಗಳಾಗಿದ್ದಾಗ ಹತ್ತು ಸಾವಿರ ರೂಪಾಯಿಗಳ ಮಾಸಿಕ ವೇತನ ಪಡೆಯುತ್ತಿದ್ದರು. ಇದರಲ್ಲಿ ಎರಡು ಸಾವಿರದ ಐನೂರು ರೂಪಾಯಿಗಳನ್ನು ತಮ್ಮ ಸಾಂಸಾರಿಕ ಜೀವನಕ್ಕೆ ಬಳಸಿಕೊಳ್ಳುತ್ತಿದ್ದರು. ಉಳಿದ ಏಳು ಸಾವಿರದ ಐನೂರು ರೂಪಾಯಿಗಳನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡುತ್ತಿದ್ದರು. ಈ ವಿಚಾರವನ್ನು ಗುರುವಾರ ಕನ್ನಡ ಭಾಷಾ ಶಿಕ್ಷಕ ರಂಗನಾಥಪ್ಪ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬೊಧಿಸುತ್ತಿದ್ದರು. ಆಗ ಸರೋಜಮ್ಮ ಎಂಬುವ ವಿದ್ಯಾರ್ಥಿನಿ ಪ್ರಧಾನಿ ಮಂತ್ರಿಗಳ ಪರಿಹಾರ ನಿಧಿ ಎಂದರೇನು ಎಂದು ಕೇಳಿದ ಪ್ರಶ್ನೆಗೆ, ಅತಿವೃಷ್ಟಿ-ಅನಾವೃಷ್ಟಿ, ಪ್ರವಾಹ, ಭೂಕಂಪ ಮುಂತಾದ ನೈಸರ್ಗಿಕ ವಿಕೋಪಗಳಿಗೆ ಸಿಲುಕಿದ ಸಂತ್ರಸ್ತರಿಗೆ ಪರಿಹಾರ ಕಾರ್ಯ ಕೈಗೊಳ್ಳಲು ಸಹಾಯ ನೀಡುವ ನಿಧಿಯೇ ಪ್ರಧಾನಮಂತ್ರಿಗಳ ನಿಧಿ ಎಂದು ವಿದ್ಯಾರ್ಥಿಗಳಿಗೆ ಅರ್ಥೈಸಿದರು. ಇದರಿಂದ ಪ್ರೇರಣೆಗೊಂಡ ವಿದ್ಯಾರ್ಥಿಗಳು ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆಸ್ತಿ-ಪಾಸ್ತಿ ಕಳೆದುಕೊಂಡು ಹಾನಿಗೊಳಗಾಗಿರುವ ನೆರೆ ಸಂತ್ರಸ್ತರಿಗೆ ನಾವೂ ಸಹಾಯ ಮಾಡುತ್ತೇವೆ ಎಂದರು. ಈ ವಿಷಯವನ್ನು ತಕ್ಷಣ ಉಪ ಪ್ರಾಂಶುಪಾಲರಾದ ಬಿ.ಎನ್.ನಾಗರಾಜು ಗಮನಕ್ಕೆ ತರಲಾಯಿತು.
ಆಗ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದ ಎಲ್ಲ ವಿದ್ಯಾರ್ಥಿಗಳೂ, ಶಿಕ್ಷಕರೂ ನಿಧಿ ಸಂಗ್ರಹ ಕಾರ್ಯಕ್ಕೆ ಊರಿನ ಪ್ರಮುಖ ಬೀದಿಗಳಲ್ಲಿ ಪ್ರತಿಯೊಂದು ಮನೆಗಳಿಗೂ ಹೋಗಿ ಅಂಗಡಿಗಳು ಹಾಗೂ ಸಾರ್ವಜನಿಕರಿಂದ ದೇಣಿಗೆಯಾಗಿ ಒಟ್ಟು 20 ಸಾವಿರ ರೂಪಾಯಿಗಳನ್ನು ಸಂಗ್ರಹಿಸಿದರು. ಈ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಗೆ ಜಮಾ ಮಾಡಲಾಯಿತು. ಈ ಸಹಾಯಕ್ಕೆ ಐ.ಡಿ.ಹಳ್ಳಿ ಗ್ರಾಮದ ಎಲ್ಲಾ ನಾಗರಿಕ ಬಂಧುಗಳು ಸಹಾಯ ನೀಡಿದ್ದು ವಿಶೇಷವಾಗಿತ್ತು. ಸಾರ್ವಜನಿಕರಲ್ಲಿ ನಿಧಿ ಸಂಗ್ರಹದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಈ ಸಮಯದಲ್ಲಿ ಉಪಪ್ರಾಂಶುಪಾಲರಾದ ಬಿ.ಎಂ.ನಾಗರಾಜ, ಕನ್ನಡ ಶಿಕ್ಷಕರಾದ ರಂಗನಾಥಪ್ಪ, ಶಿವಕಮಾರ್ ಬಿ.ಕೆ. ದೊಡ್ಡ ರಾಮಣ್ಣ, ಎನ್ ನಾಗರಾಜು, ಗಂಗಾಧರ ಎಚ್.ಓ, ಎನ್ ಮಂಜುಳಾ, ಅನಿತಾ ಎಸ್, ಪ್ರಶಾಂತ್ ಬಿರಾದರ್, ಮಂಜುನಾಥ್ ಎಚ್.ಓ. ಮುಂತಾದವರು ಪಾಲ್ಗೊಂಡಿದ್ದರು.