ಹುಳಿಯಾರು:
ಬೆಳೆ ವಿಮೆ ಪರಿಹಾರ ಹಣಕ್ಕೆ ಒತ್ತಾಯಿಸಿ ಹಾಗೂ ಒಡವೆ ಸಾಲ ಮರುಪಾವತಿಸದ ರೈತರಿಗೆ ನೋಟಿಸ್ ನೀಡಿರುವುದನ್ನು ಪ್ರತಿಭಟಿಸಿ ಗುರುವಾರ ಹುಳಿಯಾರಿನ ಕೆನರಾ ಬ್ಯಾಂಕ್ ಗೆ ಮುತ್ತಿಗೆ ಹಾಕಿದ ಕರ್ನಾಟಕ ರಾಜ್ಯ ರೈತ ಸಂಘದ ಹೊಸಳ್ಳಿ ಚಂದ್ರಣ್ಣ ಬಣದ ರೈತರು ಬ್ಯಾಂಕಿನ ಮುಂದೆ ಕೆಲಕಾಲ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಮಾತನಾಡಿದ ರಾಜ್ಯಾಧ್ಯಕ್ಷ ಹೊಸಳ್ಳಿ ಚಂದ್ರಣ್ಣ ಬೆಳೆ ವಿಮೆ ಪಾವತಿಸಲು ರೈತರು ಸಾಲ ಸೋಲ ಮಾಡಿದ್ದಾರೆ.ಇನ್ನು ಕೆಲವರು ಒಡವೆ ಒತ್ತೆ ಇಟ್ಟಿದ್ದಾರೆ.ಆದರೆ ಕಳೆದ ಐದಾರು ವರ್ಷದಿಂದ ತೀವ್ರ ಬರಗಾಲದಿಂದಾಗಿ ಬೆಳೆ ನಷ್ಟವಾಗಿದ್ದರೂ ಸಹ ಇದುವರೆಗೂ ರೈತರಿಗೆ ಪರಿಹಾರವಾಗಿ ವಿಮೆ ಹಣ ಬಂದಿಲ್ಲ ಎಂದು ಆರೋಪಿಸಿದರು.
ಜಿಲ್ಲೆಯ ರೈತರಿಂದ 2016-17 ಮತ್ತು 2017-18 ನೇ ವರ್ಷದಲ್ಲಿ ಕೋಟ್ಯಾಂತರ ರೂ. ಬೆಳೆ ವಿಮೆ ಕಟ್ಟಿಸಿಕೊಂಡು ಬೆಳೆ ನಷ್ಟದ ಪರಿಹಾರವಾಗಿ 95 ಕೋಟಿ ರೂ. ಘೋಷಿಸಿದೆ. ಅದರೆ ಇದರೂವರೆವಿಗೂ ಈ ಹಣ ಯಾವ ರೈತರ ಖಾತೆಗೆ ಜಮೆಯಾಗಿಲ್ಲ. ಬೆಳೆ ವಿಮೆ ಬರುವ ಭರವಸೆಯಿಂದ ಸಾಲಸೂಲ ಮಾಡಿರುವ ರೈತರ ಗೋಳು ಈಗ ಕೇಳುವವರಾರು ಇಲ್ಲದಾಗಿದ್ದಾರೆ.ಸಾಲದ ಸುಳಿಯಲ್ಲಿ ಸಿಕ್ಕ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣ ಹೆಚ್ಚಾಗುತ್ತಿದ್ದು ಈ ಬಗ್ಗೆ ಹಳ್ಳಿಗಳಿಗೆ ಆಗಮಿಸಿ ಸಾಂತ್ವನ ಹೇಳುತ್ತಿದ್ದಾರೆಯೇ ಹೊರತು ಯಾವುದೇ ರೀತಿಯ ಉಪಯೋಗ ರೈತರಿಗೆ ಆಗುತ್ತಿಲ್ಲ ಎಂದು ದೂರಿದರು.
ಒಡವೆ ಸಾಲ ಮಾಡಿದ್ದ ರೈತರಿಗೆ ನೋಟಿಸ್ ನೀಡಿರುವ ಬ್ಯಾಂಕಿನವರು ಇದೇ ತಿಂಗಳ 20ರಂದು ಪೂರಾ ಹಣ ಪಾವತಿಸದಿದ್ದಲ್ಲಿ ಒಡವೆ ಹರಾಜು ಮಾಡಿ ಹಣ ಜಮಾ ಮಾಡಿಕೊಳ್ಳಲಾಗುವುದು ಎಂದು ಕ್ರಮಕ್ಕೆ ಮುಂದಾಗಿದ್ದು ಈ ಬಗ್ಗೆ ಅಧಿಕಾರಿಗಳು ಸರ್ಕಾರದ ಆದೇಶವನ್ನು ಧಿಕ್ಕರಿಸುತ್ತಿದ್ದಾರೆ ಎಂದು ಕಿಡಿಕಾರಿದರು.ಹಣ ಮರುಪಾವತಿಗೆ ಒಡವೆ ಹರಾಜು ಮಾಡಲು ಮುಂದಾದಲ್ಲಿ ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲ.ಯಾವುದೇ ಕಾನೂನಿಗೆ ನಾವು ಬಗ್ಗುವುದಿಲ್ಲ ಎಂದು ಗುಡುಗಿದರು.
ರೈತರು ವ್ಯವಸಾಯದ ಉದ್ದೇಶದಿಂದ ಪಡೆದ ಟ್ರ್ಯಾಕ್ಟರ್ ಮುಂತಾದವುಗಳನ್ನು ಜಪ್ತಿ ಮಾಡುವ ಹಾಗಿಲ್ಲ ಎಂದು ಕಾನೂನಿದ್ದರೂ ಅಧಿಕಾರಿಗಳು ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು. ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ ಎಂದು ಹೇಳುತ್ತಿದ್ದರೂ ಅಧಿಕಾರಿಗಳು ಈ ಬಗ್ಗೆ ಸುಮ್ಮನಿರದೆ ರೈತರನ್ನು ಸಾಲ ಮರುಪಾವತಿಸಿ ಎಂದು ನೋಟಿಸ್ ನೀಡುತ್ತಿದ್ದಾರೆ.ಒಡವೆ ಹರಾಜಿಗೆ ಮುಂದಾಗಿರುವ ಬ್ಯಾಂಕ್ ನಾಳೆ ನಾವು ಸಾಲಕ್ಕೆ ಅಡವಿಟ್ಟಿರುವ ಜಮೀನು ಮನೆಗಳನ್ನು ಕೂಡ ಹರಾಜು ಹಾಕಿ ರೈತರನ್ನು ಬೀದಿಗೆ ತಂದು ಆತ್ಮಹತ್ಯೆಗೆ ನೇರ ಕಾರಣರಾಗುತ್ತಿದ್ದಾರೆ ಎಂದು ಆರೋಪಿಸಿದರು.
ನಿಮ್ಮ ಗೊಡ್ಡು ಬೆದರಿಕೆಗೆ ನಾವು ಬಗ್ಗುವುದಿಲ್ಲ.ಒಡವೆ ಹರಾಜಿಗೆ ಬಿಡುವುದಿಲ್ಲ.ಹಾಗೇನಾದರೂ ನೀವು ಹಳ್ಳಿಗೇ ಬಂದಿದ್ದೇ ಆದಲ್ಲಿ ನಿಮ್ಮನ್ನು ಕಂಬಕ್ಕೆ ಕಟ್ಟಲು ಸಹ ನಾವು ಹೆದರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ರೈತರ ಮನವಿ ಆಲಿಸಿದ ಬ್ಯಾಂಕಿನ ವ್ಯವಸ್ಥಾಪಕ ಮುರಳಿಧರ್ ಬ್ಯಾಂಕಿನಿಂದ ನೋಟಿಸ್ ನೀಡಿರುವುದು ಸತ್ಯ.ಆದರೆ ನೋಟಿಸ್ ನೀಡಿರುವುದು ಹುಳಿಯಾರು ಶಾಖೆಯಿಂದಲ್ಲ.ಅದು ಕೇಂದ್ರ ಕಚೇರಿಯ ಸಾಲಾ ವಸೂಲಾತಿ ವಿಭಾಗದಿಂದ ಬಂದಿರುವ ನೋಟಿಸ್ ಆಗಿದ್ದು ನಮ್ಮ ಶಾಖೆಯಿಂದ ಇದುವರೆಗೂ ನಾವು ಯಾವ ರೈತರಿಗೂ ನೋಟಿಸ್ ನೀಡಿಲ್ಲ ಎಂದು ಸಮಜಾಯಿಸಿ ನೀಡಿದರು.
ತಾಲ್ಲೂಕಿನ ಬರ ಪರಿಸ್ಥಿತಿಯ ಬಗ್ಗೆ ನಾವು ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಕಾಲಾವಕಾಶ ಕೋರಿದ್ದು ಈ ಬಗ್ಗೆ ರೈತರು ಅಧೀರರಾಗುವುದು ಬೇಡ ಎಂದರು.ವಿಮಾ ಕಂಪನಿಯಿಂದ ಹುಳಿಯಾರಿನ ಯಾವುದೇ ರೈತರಿಗೆ ಹಣ ಪಾವತಿಯಾಗಿಲ್. ಈ ಬಗ್ಗೆ ವಿಮಾ ಕಂಪನಿಯಿಂದ ಹಿಡಿದು ಲೀಡ್ ಬ್ಯಾಂಕಿನವರಿಗೆ ಎಲ್ಲರಿಗೂ ಮಾಹಿತಿ ನೀಡಿದ್ದು ಇನ್ನೊಂದು ತಿಂಗಳಲ್ಲಿ ಹಣ ಮರು ಪಾವತಿಯಾಗಲಿದೆ ಎಂದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬೀರಲಿಂಗಯ್ಯ,ಅಲೆಮಾರಿ ಬುಡಕಟ್ಟು ಸಂಘಟನೆಯ ಅಧ್ಯಕ್ಷ ರಾಜಪ್ಪ,ಜಯ ಕರ್ನಾಟಕ ಸಂಘಟನೆಯ ಮೋಹನ್ ಕುಮಾರ್ ರೈ, ಹೂವಿನ ತಿಮ್ಮಪ್ಪ,ಟಿಪ್ಪು ಸಂಘದ ಅಫ್ಸರ್,ಗೋಪಿ ನಾಯ್ಕ,ಸಾಕು ಬಾಯಿ, ಪುಷ್ಪಬಾಯಿ,ಕರಿಯಪ್ಪ ಮೊದಲಾದವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
