ಕೊರಟಗೆರೆ:-
ಸತತ ಬರಗಾಲದ ಛಾಯೆಗೆ ಸಿಲುಕಿದ ನಮ್ಮ ರಾಜ್ಯದ ರೈತರ ಕುಟುಂಬಕ್ಕೆ ಹಣಕಾಸಿನ ನೆರವು ನೀಡುವಲ್ಲಿ ನಮ್ಮ ದೇಶದ ಪ್ರಧಾನಿ ನರೇಂದ್ರಮೋದಿಯವರು ವಿಫಲರಾಗಿದ್ದಾರೆ ಎಂದು ರಾಜ್ಯದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿಷಾದ ವ್ಯಕ್ತಪಡಿಸಿದರು.
ಅವರು ತಾಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಶ್ರೀಆಂಜನೇಯ ದೇವಾಲಯದ ಆವರಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ತುಮಕೂರು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ನಮ್ಮ ಕಾಂಗ್ರೆಸ್ ಸರ್ಕಾರದ ಅಧಿಕಾರಾವಧಿಯಲ್ಲಿ ಸಿದ್ದರಾಮಯ್ಯನವರು 10ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡುವ ಮೂಲಕ ರೈತರ ರಕ್ಷಣೆ ಮಾಡಿತ್ತು. ಈಗ ಕಾಂಗ್ರೇಸ್ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರದ 49ಸಾವಿರ ಕೋಟಿ ರೈತರ ಸಾಲಮನ್ನಾ ಮಾಡುವುದರ ಜೊತೆ ಕೈಸಾಲ ಪಡೆದು ಬಡ್ಡಿ ಕಟ್ಟುತ್ತಿರುವ ರೈತರಿಗೆ ಋಣಮುಕ್ತ ಖಾಯಿದೆಯನ್ನು ಜಾರಿಗೆ ತರಲು ತಿರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ಸಿದ್ದರಬೇಟ್ಟದ ಬಾಳೆಹೋನ್ನುರು ಖಾಸಾ ಶಾಖಾ ಮಠದ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿ ಮಾತನಾಡಿ ಹೇಮಾವತಿ ನದಿಯ ನೀರನ್ನು ನಮ್ಮ ಕೊರಟಗೆರೆ ತಾಲೂಕಿನ ಪ್ರತಿಯೊಂದು ಕೆರೆಗಳಿಗೆ ಹರಿಸುವ ಪ್ರಯತ್ನ ಮಾಡಬೇಕು. ಬರಗಾಲ ಪೀಡಿತ ತಾಲೂಕಿನಲ್ಲಿ ಯಾವುದೇ ಅಭಿವೃದ್ದಿ ಯೋಜನೆ ಕುಂಠಿತವಾದರೂ ಪರವಾಗಿಲ್ಲ ಆದರೇ ರೈತರ ಉಳಿವಿಗಾಗಿ ನೀರಾವರಿ ಯೋಜನೆ ಮಾತ್ರ ತ್ವರಿತವಾಗಿ ಜಾರಿಯಾಗಬೇಕು. ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಡಗಿನ ರೈತರ ರಕ್ಷಣೆಗೆ ನಾವೇಲ್ಲರೂ ಸಹಾಯಹಸ್ತ ನೀಡಬೇಕು ಎಂದು ಹೇಳಿದರು.
ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀಡಾ.ಹನುಮಂತನಾಥ ಸ್ವಾಮೀಜಿ ಮಾತನಾಡಿ ಹೈನುಗಾರಿಕೆ ರೈತರ ಅಭಿವೃದ್ದಿಗೆ ಸಹಾಯ ಆಗಲಿದೆ. ರೈತರು ಆತ್ಮಹತ್ಯೆಯ ಯೋಚನೆಯನ್ನು ಸಹ ಮಾಡಬಾರದು. ಸತತ 6ವರ್ಷದ ಬರಗಾಲದಿಂದ ಕೊರಟಗೆರೆಯ ರೈತರು ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಕ್ಕೆ ಸರಕಾರ ನೆರವು ನೀಡಬೇಕು. ಕೊರಟಗೆರೆ ಮತ್ತು ಮಧುಗಿರಿ ತಾಲೂಕಿನ ಭಕ್ತರ ಸಹಾಯದಿಂದ ಕೊಡಗಿನ ರೈತರಿಗೆ ಮನೆ ನಿರ್ಮಾಣ ಮಾಡಿಕೊಡಲು ತಿರ್ಮಾನ ಮಾಡಲಾಗಿದ್ದು ಭಕ್ತರು ಸಹಾಯಹಸ್ತ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಂಸದ ಮುದ್ದಹನುಮೇಗೌಡ, ತುಮಕೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೋಂಡವಾಡಿ ಚಂದ್ರಶೇಖರ್, ತಾಲೂಕು ನಿರ್ದೇಶಕ ವಿಜಯಶಂಕರ್, ವ್ಯವಸ್ಥಾಪಕ ನಿರ್ದೇಶಕ ಬಿ.ಮುನೇಗೌಡ, ಜಿಪಂ ಸದಸ್ಯೆ ಪ್ರೇಮಾ, ತಾಪಂ ಅದ್ಯಕ್ಷ ಕೆಂಪರಾಮಯ್ಯ, ಉಪಾಧ್ಯಕ್ಷೆ ನರಸಮ್ಮ, ಕೆಪಿಸಿಸಿ ಕಾರ್ಯದರ್ಶಿ ಅನೀಲ್ಕುಮಾರ್ ಪಾಟೀಲ್, ಬ್ಲಾಕ್ ಕಾಂಗ್ರೇಸ್ ಗ್ರಾಮಾಂತರ ಅಧ್ಯಕ್ಷ ಅರಕೆರೆ ಶಂಕ್ರಣ್ಣ, ನಗರಧ್ಯಕ್ಷ ಅಶ್ವತ್ಥನಾರಾಯಣ ಸೇರಿದಂತೆ ಇತರರು ಇದ್ದರು.