ದಾವಣಗೆರೆ:
ಇಲ್ಲಿನ ರೈಲ್ವೆ ನಿಲ್ದಾಣದ ಕಟ್ಟಡ ಕೆಡವಿ ಸ್ಮಾರ್ಟ್ಸಿಟಿಗೆ ತಕ್ಕಂತೆ ಹೊಸ ಕಟ್ಟಡ ನಿರ್ಮಿಸಿಯೇ ತೀರಬೇಕೆಂದು ಸಂಸದ ಜಿ.ಎಂ.ಸಿದ್ದೇಶ್ವರ್ ಪಟ್ಟುಹಿಡಿದರು.
ನಗರದ ರೈಲ್ವೆ ನಿಲ್ದಾಣಕ್ಕೆ ಗುರುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿ ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಸೇರಿದಂತೆ ರೈಲ್ವೆ ಇಲಾಖೆಯ ಇಂಜಿನೀಯರ್ಗಳು ಹಾಗೂ ಅಧಿಕಾರಿಗಳೊಂಗೆ ಚರ್ಚಿಸಿದ ಸಂಸದರು, 1937ರಲ್ಲಿ ಈ ರೈಲ್ವೆ ನಿಲ್ದಾಣ ನಿರ್ಮಾಣವಾಗಿದ್ದು, ಮೇಲ್ಛಾವಣಿ ಸೋರುತ್ತಿದೆ. ಕ್ಲಾಕ್ ರೂಂ, ಪ್ರವಾಣಿಕರ ವಿಶ್ರಾಂತಿ ಕೊಠಡಿ, ಪಾರ್ಸಲ್ ಕೊಠಡಿ ಯಾವುದೂ ಸರಿ ಇಲ್ಲ. ಅಲ್ಲದೆ, ಪ್ಲಾಟ್ ಫಾರಂ ಹಾಗೂ ರಾಜ್ಯ ಹೆದ್ದಾರಿ ಎತ್ತರದಲ್ಲಿದ್ದು, ರೈಲ್ವೆ ನಿಲ್ದಾಣ ತಗ್ಗುನಲ್ಲಿದೆ. ಹೀಗಾಗಿ ಜೋರಾಗಿ ಮಳೆ ಬಂದರೆ, ಪ್ಲಾಟ್ ಫಾರ್ಮ್ನಲ್ಲಿ ನೀರು ನಿಂತು ತೋಂದರೆಯಾಗಲಿದೆ. ಆದ್ದರಿಂದ ಈ ಹಳೇ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕೆಂದು ತಾಕೀತು ಮಾಡಿದರು.
ಈ ರೈಲ್ವೆ ನಿಲ್ದಾಣಕ್ಕೆ ಹೊಸ ಕಟ್ಟಡ ನಿರ್ಮಾಣ ಮಾಡಬೇಕೆಂದು ಕೋರಿ ಕೇಂದ್ರ ರೈಲ್ವೆ ಸಚಿವರು, ರೈಲ್ವೆ ಮಂಡಳಿ ಛೇರ್ಮನ್ ಅಶ್ವಿನ್ ಲೋಹ ಅವರ ಬಳಿಯೂ ಮನವಿ ಮಾಡಲಾಗಿದೆ. ಅಲ್ಲದೆ, ಹುಬ್ಬಳಿ ರೈಲ್ವೆಯ ವ್ಯವಸ್ಥಾಪಕ ನಿರ್ದೇಶಕರಿಗೂ ಪತ್ರ ಬರೆಯಲಾಗಿದೆ. ಆದರೆ, ಇತ್ತೀಚೆಗೆ ತಮಗೆ ಗೊತ್ತಿಲ್ಲದೇ, ತಮ್ಮ ಅನುಪಸ್ಥಿತಿಯಲ್ಲಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯ ಪಡೆಯದೇ, ಏಕಾಏಕಿ ನಿಲ್ದಾಣದ ಕಟ್ಟಡ ಸುಸ್ಥಿತಿಯಲ್ಲಿದೆ ಕೆಡವುವುದು ಬೇಡ ಎಂಬುದಾಗಿ ವರದಿ ನೀಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅರ್ಚನಾ ಗರಗ್ ಮಾತನಾಡಿ, ರೈಲ್ವೆ ನಿಲ್ದಾಣ ಸುಸ್ಥಿತಿಯಲ್ಲಿದೆ. ಹೀಗಾಗಿ ಹೊಸ ಕಟ್ಟಡ ನಿರ್ಮಾಣ ಮಾಡಲು ಬರುವುದಿಲ್ಲ. ಬೇಕಾದರೆ, ಈಗ ಮಂಜೂರಾಗಿರುವ 11 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನವೀಕರಣ ಮಾಡಿ, ನಿಲ್ದಾಣದ ಸೌಂದರ್ಯೀಕರಣಗೊಳಿಸಲಾಗುವುದು ಎಂದರು.
ಇದಕ್ಕೆ ಪ್ರತಿಕ್ರಯಿಸಿದ ಸಂಸದ ಜಿ.ಎಂ.ಸಿದ್ದೇಶ್ವರ್ ಎಷ್ಟು ವರ್ಷ ಬರೀ ನವೀಕರಣ ಮಾಡಿಸುತ್ತೀರಿ ಮುಂದೆ 10 ವರ್ಷಗಳ ನಂತರವಾದರೂ ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಲೇಬೇಕಾಗಿದೆ. ಆದ್ದರಿಂದ ಈಗಲೇ ರೈಲ್ವೆ ನಿಲ್ದಾಣಕ್ಕೆ ಹೊಸ ಕಟ್ಟಡ ನಿರ್ಮಾಣ ಮಾಡುವುದು ಒಳ್ಳೆಯದು. ಈ ಬಗ್ಗೆ ಸೆ.11ರಂದು ಮೈಸೂರಿನಲ್ಲಿ ಕೇಂದ್ರ ರೈಲ್ವೆ ಮಂತ್ರಿಗಳು ಹಾಗೂ ರೈಲ್ವೆ ಮಂಡಳಿ ಛೇರ್ಮನ್ ಕರೆದಿರುವ ಸಭೆಯಲ್ಲಿ ಒತ್ತಡ ಹಾಕಿ, ಹೊಸ ಕಟ್ಟಡ ತಂದೇ ತೀರುತ್ತೇನೆ ಎಂದು ಹೇಳಿದರು.
ರಾಜ್ಯ ಹೆದ್ದಾರಿ ಎತ್ತರದಲ್ಲಿದ್ದು, ಮಳೆ ಸುರಿದಾಗ ರಸ್ತೆಯ ನೀರು ಬಂದು ರೈಲ್ವೆ ನಿಲ್ದಾಣದ ಆವರಣದಲ್ಲಿ ನಿಲ್ಲುತ್ತಿದೆ. ಇದರಿಂದ ರೈಲ್ವೆ ಪ್ರಯಾಣಿಕರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಆದ್ದರಿಂದ ಈ ಸಮಸ್ಯೆಯನ್ನು ಸರಿ ಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕ್ರಮ ಕೈಗೊಳ್ಳಬೇಕೆಂದು ಸಂಸದರು ಸೂಚಿಸಿದರು.
ಇದಕ್ಕೆ ಪ್ರತಿಕ್ರಯಿಸಿದ ಡಿ.ಆರ್.ಎಂ. ಅರ್ಚನಾ ಗರಗ್, ರೈಲ್ವೆ ನಿಲ್ದಾಣಕ್ಕೆ ನೀರು ನುಗ್ಗದ್ದಂತೆ ತಡೆಯಲು 38 ಲಕ್ಷ ರೂ. ವೆಚ್ಚದಲ್ಲಿ ಡ್ರೈನೇಜ್ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ರೈಲ್ವೆ ಗೇಟ್ 199ರ ಅಶೋಕ ರಸ್ತೆಯ ರೈಲ್ವೆ ಗೇಟ್ನಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಈಗಾಗಲೇ 35 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ, ಇಲ್ಲಿಯ ಜಿಲ್ಲಾಧಿಕಾರಿಗಳು ಹಾಗೂ ನಿಮ್ಮ ರೈಲ್ವೆ ಇಲಾಖೆ ಅಧಿಕಾರಿಗಳು ಸರಿಯಾದ ಮಾಹಿತಿ ಇಲ್ಲದೇ, ಪ್ಲಾನ್ ತಯಾರಿಸಿ ಈಗ ಭೂ ಸ್ವಾಧೀನ ಪಡೆಸಿಕೊಳ್ಳಬೇಕೆಂದು ಹೇಳುತ್ತಿದ್ದಾರೆ. ಅಲ್ಲದೆ, ಇತ್ತೀಚೆಗೆ ಸರ್ವೇ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದೆ. ಆದರೆ, ಇನ್ನೂ ವರದಿ ನೀಡಿಲ್ಲ. ತಕ್ಷಣವೇ ಈ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಹರಿಹರದ ಬಳಿಯ ಅಮರಾವತಿ ಕಾಲೋನಿ ಬಳಿ ನಿರ್ಮಾಣ ವಾಗುತ್ತಿರುವ ರೈಲ್ವೆ ಸೇತುವೆ ಬಳಿಯಲ್ಲಿ ಪರ್ಯಾಯ ರಸ್ತೆ ನಿರ್ಮಿಸಿಕೊಡುವುದಾಗಿ ಹೇಳಿ, ರೈಲ್ವೆ ಇಲಾಖೆಯ ಸಹಾಯಕ ಮುಖ್ಯ ಅಭಿಯಂತರರು ಹೇಳಿದ್ದರು. ಆದರೆ, ಅಲ್ಲಿ ಸರಿಯಾಗಿ ಪರ್ಯಾಯ ರಸ್ತೆ ನಿರ್ಮಾಣವಾಗಿಲ್ಲ ಎಂಬುದಾಗಿ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಇದನ್ನು ಸರಿಪಡಿಸಬೇಕು. ಹಾಗೂ ಇಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ಸೇತುವೆಯನ್ನು ನಿಗದಿತ ಅವಧಿ ಅಂದರೆ, 2019ರ ಮಾರ್ಚ್ನಲ್ಲಿ ಲೋಕಾರ್ಪಣೆ ಮಾಡಬೇಕು. ದಾವಣಗೆರೆ ಹಳೇ ಭಾಗದಿಂದ ಬರುವ ರೈಲ್ವೆ ಪ್ರಯಾಣಿಕರಿಗಾಗಿ 2ನೇ ಪ್ರವೇಶ ದ್ವಾರದಲ್ಲಿ ಟಿಕೇಟ್ ಕೌಂಟರ್ ನಿರ್ಮಾಣ ಮಾಡಬೇಕು ಹಾಗೂ ಎರಡೂ ಕಡೆಯ ಪಾದಚಾರಿಗಳು ರೈಲ್ವೆ ಟ್ರ್ಯಾಕ್ಗಳನ್ನು ದಾಟಲು ಎಕಸಿಲೇಟರ್ ಸೇತುವೆ ನಿರ್ಮಿಸಬೇಕು ಹಾಗೂ ಡಿಸಿಎಂ ಟೌನ್ ಶಿಪ್ಬಳಿಯ ರೈಲ್ವೆ ಅಂಡರ್ ಪಾಸ್ ಬಳಿಯಾಗಿರುವ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ಮುಖ್ಯ ಅಭಿಯಂತರ ಅಲೋಕ್ ತಿವಾರಿ, ಎಂಜಿನಯರ್ಗಳಾದ ಪಿ.ಕೆ.ವರ್ಮಾ, ಋಚಿತಾ, ಸ್ಟೇಷನ್ ಮಾಸ್ಟರ್ ಮುರಿಗೇಂದ್ರಪ್ಪ ಹೆಚ್.ಜಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಮುಖಂಡರುಗಳಾದ ಪೈಲ್ವಾನ್ ರಾಜನಹಳ್ಳಿ ಶಿವಕುಮಾರ್, ಪಿ.ಸಿ.ಶ್ರೀನಿವಾಸ್, ಟಿಂಕರ್ ಮಂಜಣ್ಣ ಮತ್ತಿತರರು ಹಾಜರಿದ್ದರು.
