ಚಳ್ಳಕೆರೆ
ರಾಜ್ಯದ ತಾಂಡ ಅಭಿವೃದ್ಧಿ ನಿಗಮ ನಿಯಮಿತ ಇದರ ಸಹಯೋಗದಲ್ಲಿ ವಿವಿಧ ತಾಂಡಗಳಲ್ಲಿ ವಾಸಿಸುವ ಕುಟುಂಬಗಳ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ವಾಸಿಸುವವನೆ ಮನೆಯ ಒಡೆಯ ಎಂಬ ಯೋಜನೆಯಡಿಯಲ್ಲಿ ತಾಂಡದಲ್ಲಿ ವಾಸಿಸುವ ಜನರ ಎಲ್ಲಾ ಮಾಹಿತಿಯನ್ನು ಕೇಂದ್ರಿಕರಿಸಿ ನಿಗಮಕ್ಕೆ ಕಳುಹಿಸಿಕೊಡಲಾಗುವುದು. ಇದರಿಂದ ಲಂಬಾಣಿ ತಾಂಡಗಳಲ್ಲಿರುವ ಸಂಪೂರ್ಣ ಕುಟುಂಬಗಳ ವಿವರ, ವಾಸ್ತನ ಸಂಖ್ಯೆ ಮತ್ತು ಅವುಗಳ ಪರಿಸ್ಥಿತಿಯನ್ನು ಅವಲೋಕಿಸಿ ಕಾರ್ಯಕಲ್ಪ ನೀಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ತಾಂಡ ಅಭಿವೃದ್ಧಿ ನಿಗಮದ ಹಿರಿಯ ನಿರ್ದೇಶಕ ಎಲ್.ಜಿ.ನಾಯ್ಕ ತಿಳಿಸಿದರು.
ಅವರು, ಶುಕ್ರವಾರ ತಾಲ್ಲೂಕಿನ ವೀರದಿಮ್ಮನಹಳ್ಳಿ ಲಂಬಾಣಿಹಟ್ಟಿಯಲ್ಲಿ ದಾವಣಗೆರೆ ವಲಯ ಕಚೇರಿ ಸಹಕಾರದಿಂದ ಹಮ್ಮಿಕೊಳ್ಳಲಾದ ತಾಂಡಗಳ ಮಾಹಿತಿ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈಗಾಗಲೇ ರಾಜ್ಯದ ವಿವಿಧ ತಾಂಡಗಳಲ್ಲಿ ವಾಸಿಸುವ ಕುಟುಂಬಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಇದರಿಂದ ಜನಾಂಗದ ವಾಸ್ತವ ಪರಿಸ್ಥಿತಿಯ ಬಗ್ಗೆ ತಿಳಿಯಲು ಸಹಕಾರಿಯಾಗಿದೆ. ಲಂಬಾಣಿ ಸಮಾಜದ ಎಲ್ಲಾ ಬಂಧುಗಳು ನಿಗಮಕ್ಕೆ ಕರಾರು ಒಕ್ಕು ಮಾಹಿತಿ ನೀಡುವಂತೆ ಮನವಿ ಮಾಡಿದರು.
ಜನಾಂಗದ ಯುವ ಮುಖಂಡ ಎಸ್.ಗೋವಿಂದನಾಯ್ಕ ಮಾತನಾಡಿ, ಬಹಳ ವರ್ಷಗಳ ನಂತರ ಸರ್ಕಾರ ಲಂಬಾಣಿ ಸಮುದಾಯದ ಅಭಿವೃದ್ಧಿಯ ಬಗ್ಗೆ ಸಕರಾತ್ಮಕ ಚಿಂತನೆ ನಡೆಸುತ್ತಿರುವುದು ಸ್ವಾಗತಾರ್ಹ. ಕಾರಣ ಈ ಜನಾಂಗ ಇನ್ನೂ ಸಹ ಅಭಿವೃದ್ಧಿ ಕಾಣುವಲ್ಲಿ ಸಫಲವಾಗಿಲ್ಲ. ಇದಕ್ಕೆ ಮೂಲ ಮೂಲ ಕಾರಣ ನಮ್ಮಲ್ಲಿರುವ ಶಿಕ್ಷಣದ ಕೊರತೆ. ಯಾವ ಜನಾಂಗ ಶಿಕ್ಷಣದ ಬಗ್ಗೆ ಒತ್ತು ನೀಡುತ್ತದೆಯೋ ಅ ಜನಾಂಗ ಮಾತ್ರ ಅಭಿವೃದ್ಧಿ ಪಥದತ್ತ ಸಾಗುವುದು. ರಾಜ್ಯ ತಾಂಡ ಅಭಿವೃದ್ಧಿ ನಿಗಮ ಮಾಡುತ್ತಿರು ಮಾಹಿತಿ ಸಂಗ್ರಹಣಾ ಕಾರ್ಯ ಜನಾಂಗದ ಪುನಶ್ಚೇನಕ್ಕೆ ನಾಂದಿಯಾಗಲಿ ಎಂದರು. ಮಾಹಿತಿ ಸಂಗ್ರಹಣಾ ಅಂದೋಲನದಲ್ಲಿ ಹನುಮಂತನಾಯ್ಕ, ಎಸ್.ಕುಮಾರನಾಯ್ಕ, ಪುರುಷೋತ್ತಮನಾಯ್ಕ, ಗ್ರಾಮ ಪಂಚಾಯಿತಿ ಸದಸ್ಯರಾದ ಅಶೋಕ್, ಜಯಬಾಯಿ, ಮಹಂತೇಶ್, ಶಂಕರನಾಯ್ಕ ಮುಂತಾದವರು ಭಾಗವಹಿಸಿದ್ದರು.
