ವರದಿ ಸಲ್ಲಿಕೆಗೆ ಲೋಕಾಯುಕ್ತ ಸೂಚನೆ

ತುಮಕೂರು:

              ದೂರಿಗೆ ಸಂಬಂಧಿಸಿದಂತೆ ತಾವು ಕೈಗೊಂಡ ಕ್ರಮದ ಬಗ್ಗೆ ಅಗತ್ಯ ದಾಖಲಾತಿಗಳೊಂದಿಗೆ ವರದಿ ಸಲ್ಲಿಸುವಂತೆ ಕರ್ನಾಟಕ ಲೋಕಾಯುಕ್ತವು ತುಮಕೂರು ಮಹಾನಗರ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‍ಗೆ ಸೂಚಿಸಿದೆ.

             ತುಮಕೂರಿನ ಶಿವಕುಮಾರ್ ಎಂಬುವರು ಈ ಹಿಂದೆಯೇ ಕರ್ನಾಟಕ ಲೋಕಾಯುಕ್ತಕ್ಕೆ ದೂರೊಂದನ್ನು ಸಲ್ಲಿಸಿದ್ದರು. ಇದರ ಮೇಲೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಆರೋಪಿಸಿದ್ದರು. 2013 ರಲ್ಲಿ ತುಮಕೂರಿಗೆ ಆಗಮಿಸಿದ್ದ ಉಪ ಲೋಕಾಯುಕ್ತ ಸುಭಾಷ್ ಬಿ.ಆಡಿ ಅವರಿಗೆ ನಿವೇದನೆ ಸಲ್ಲಿಸಿಕೊಂಡಿದ್ದ ಶಿವಕುಮಾರ್, 12ನೇ ವಾರ್ಡಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇರುವ ದೂರಿನ ಬಗ್ಗೆ ನಗರಸಭೆಯ ಅಧಿಕಾರಿಗಳೇ ಅನಧಿಕೃತ ಕಟ್ಟಡ ನಿರ್ಮಾಣಕ್ಕೆ ಉತ್ತೇಜನ ನೀಡುತ್ತಿದ್ದಾರೆಂದು ಆರೋಪಿಸಿದ್ದರು.

            ದಿನಾಂಕ: 3.7.2018 ರಂದು ಕರ್ನಾಟಕ ಲೋಕಾಯುಕ್ತ ಕಛೇರಿಯಿಂದ ತುಮಕೂರು ಮಹಾನಗರ ಪಾಲಿಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‍ಗೆ ಸೂಚನಾ ಪತ್ರವೊಂದು ರವಾನೆಯಾಗಿದ್ದು, ಅದರಲ್ಲಿ ಈ ಕೆಳಕಂಡ ಸೂಚನೆ ನೀಡಲಾಗಿದೆ.

             ಶ್ರೀ ಶಿವಕುಮಾರ್, ಬಿ.ಎಚ್.ರೋಡ್, ತುಮಕೂರು ಇವರು ಕಛೇರಿಗೆ ಸಲ್ಲಿಸಿದ್ದ ದೂರಿನ ಪ್ರತಿಯ ಮೇಲೆ ನಿಮ್ಮ ಆಕ್ಷೇಪಣೆಯನ್ನು 10.9.2018ರ ಒಳಗಾಗಿ ಸಲ್ಲಿಸತಕ್ಕದ್ದು. ಸದರಿ ದೂರಿಗೆ ಸಂಬಂಧಿಸಿದಂತೆ ತಾವೇನಾದರೂ ಈಗಾಗಲೇ ಕ್ರಮ ಕೈಗೊಂಡಿದ್ದಲ್ಲಿ ಆ ಕ್ರಮದ ಬಗ್ಗೆ ವರದಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ತಲುಪಿಸಲು ಸೂಚನೆ. ನಿಗದಿತ ದಿನಾಂಕದೊಳಗೆ ಕಳುಹಿಸದಿದ್ದಲ್ಲಿ ನಿಮ್ಮ ಯಾವುದೇ ಆಕ್ಷೇಪಣೆ ಇರುವುದಿಲ್ಲವೆಂದು ಪರಿಗಣಿಸಿ ಮುಂದಿನ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅದರಲ್ಲಿ ತಿಳಿಸಲಾಗಿದೆ.

Recent Articles

spot_img

Related Stories

Share via
Copy link