ಶಿರಾ:
ಪ್ರತಿಯೊಬ್ಬರೂ ಕೂಡಾ ವರ್ತಮಾನದ ಪರಿಸ್ಥಿತಿಗಳನ್ನು ಅವಲೋಕಿಸಲೇಬೇಕು. ವರ್ತಮಾನದ ಬಗ್ಗೆ ತಿಳಿಯದೇ ಹೋದಲ್ಲಿ ಮುಮದಿನ ಭವಿಷ್ಯವೂ ಆತಂಕಕಾರಿಯಾಗಿರುತ್ತದೆ ಎಂದು ಸಮಾಜ ಚಿಂತಕ ಕೆ.ದೊರೈರಾಜ್ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪ್ರ.ದ. ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಕೈಗೊಳ್ಳಲಾಗಿದ್ದ ಸಮಾರಂಭದಲ್ಲಿ ವರ್ತಮಾನದ ತಲ್ಲಣಕ್ಕೆ ಶಿಕ್ಷಕರ ಪ್ರತಿಕ್ರಿಯೇ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಅವರು ಮಾತನಾಡಿದರು.ಪ್ರತಿಯೊಂದು ಹಂತದಲ್ಲಿಯೂ ವ್ಯಕ್ತಿ ಸದಾ ಚೇತನಶೀಲನಾಗಿರಬೇಕು. ಜಗತ್ತು ಪ್ರತಿ ಕ್ಷಣವೂ ಚೇತನಶೀಲವಾಗಿರಬೇಕಾದಾಗ ಮನುಷ್ಯ ಕೂಡಾ ಚೇತನಶೀಲನಾಗದಿದ್ದರೆ. ದೇಶದ ಅಭಿವೃದ್ಧಿಯ ಕುಂಠಿತಕ್ಕೂ ಕಾರಣವಾಗುತ್ತದೆ ಎಂದರು.
ಯಾವುದೇ ಶೈಕ್ಷಣಿಕ ಕೇಂದ್ರಗಳು, ಶಾಲಾ, ಕಾಲೇಜುಗಳು ಪಠ್ಯವನ್ನು ಮೀರಿ ಯೋಚಿಸುವ ಶಕ್ತಿಯನ್ನು ರೂಢಿಸಿಕೊಳ್ಳಬೇಕು. ಖಾಸಗೀಕರಣವನ್ನು ಪ್ರೋತ್ಸಾಹಿಸುವ ಹಾಗೂ ಅದರ ಮೂಲಕ ಲಾಭವನ್ನು ಮಾಡಿಕೊಳ್ಳುವ, ಮಾಡಿಕೊಡುವ ನಿಟ್ಟಿನಿಂದ ಯು.ಜಿ.ಸಿ.ಗೆ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಕೊಡುತ್ತಿರುವ ಅನುದಾನವನ್ನು ಕಡಿತಗೊಳಿಸಲಾಗುತ್ತಿದೆ ಎಂದರು.
ಶಾಲಾ ಶಿಕ್ಷಕರುಗಳು ಮುಕ್ತವಾಗಿ ಬೋಧನೆಯಲ್ಲಿ ತೊಡಗಲು ಅನೇಕ ಅಡ್ಡಿ ಆತಂಕಗಳೂ ಎದುರಾಗುವ ಸಾದ್ಯತೆಗಳಿದ್ದು ಬೋಧಕರು ಅಂತಹ ತೊಡಕುಗಳ ನಡುವೆಯೂ ಮಕ್ಕಳ ಭವಿಷ್ಯವನ್ನು ರೂಪಿಸಿಬೇಕಾಗಿದೆ. ಸರ್ವರಿಗೂ ಸಮಾನ ಶಿಕ್ಷಣ ಲಭಿಸುವಂತಾಗಬೇಕು. ವರ್ತಮಾನದ ದೊಡ್ಡ ತಲ್ಲಣ ಪ್ರಸಕ್ತ ಅರ್ಥ ವ್ಯವಸ್ಥೆಯೇ ಆಗಿರುವುದು ಒಂದು ದುರಂತದ ಸಂಗತಿಯಾಗಿದೆ ಎಂದು ದೊರೈರಾಜು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ||ತಿಮ್ಮನಹಳ್ಳಿ ವೇಣುಗೋಪಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಅಧ್ಯಾಪಕರ ಘಟಕದ ಕಾರ್ಯದರ್ಶಿ ಡಿ.ಗಿರೀಶ್ ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕ ಶಿವಣ್ಣ ನಿರೂಪಿಸಿ ತಿರುಮಲ ವಂದಿಸಿದರು.