ಹಿರಿಯೂರು :
ಸತತ ಮಳೆಯ ಕೊರತೆಯಿಂದ ಬರಿದಾಗಿರುವ ತಾಲ್ಲೂಕಿನ ವಾಣಿವಿಲಾಸ ಜಲಾಶಯದ ನೀರನ್ನು ಯಾವುದೇ ಕಾರಣಕ್ಕೂ ಸೀಗೆಹಟ್ಟಿ ಸಮೀಪದ ಟ್ರಾನ್ಸ್ ಇಂಡಿಯಾ ಹಾಗೂ ಪರಮೇನಹಳ್ಳಿ ಸಮೀಪದ ವಿಎಸ್ಎಲ್ ಕಾರ್ಖಾನೆಗಳಿಗೆ ಕೊಡಬಾರದು. ಎಂದು ಶಾಸಕಿ ಪೂರ್ಣಿಮಾಶ್ರೀನಿವಾಸ್ ಅವರು ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ಧೇಶಕರಿಗೆ ಮಂಗಳವಾರ ಪತ್ರ ಬರೆದಿದ್ದಾರೆ.
ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಶಾಸಕಿ, ರಾಷ್ಟ್ರೀಯ ಜಲ ಆಯೋಗದ ಮಾರ್ಗಸೂಚಿಯಂತೆ ನೀರಿನ ಪ್ರಥಮ ಆದ್ಯತೆ ಕುಡಿಯಲಿಕ್ಕೆ ಎರಡನೇ ಆದ್ಯತೆ ಕೃಷಿಗೆ ಹೆಚ್ಚು, ನೀರು ಇದ್ದರೆ ಮಾತ್ರ ಉದ್ದಿಮೆಗಳಿಗೆ ಕೊಡಬಹುದಾಗಿದೆ. ಜಲಾಶಯ ಬರಿದಾಗಿರುವ ಕಾರಣ ತಾಲ್ಲೂಕಿನಲ್ಲಿ ಸಾವಿರಾರು ಎಕರೆ ತೆಂಗು, ಅಡಿಕೆ ತೋಟಗಳು ಒಣಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ.
ಇಂತಹ ವಿಷಮ ಪರಿಸ್ಥಿತಿಯಲ್ಲಿ ಜಲಾಶಯದ ನೀರನ್ನು ಉದ್ದಿಮೆಗಳಿಗೆ ಕೊಡುವಂತೆ ಕೆಲವು ರಾಜಕೀಯ ಪ್ರಮುಖರು ಪತ್ರ ನೀಡಿರುವುದಾಗಿ ತಿಳಿದು ಬಂದಿದೆ.ಕ್ಷೇತ್ರದ ಶಾಸಕಿಯಾಗಿ ಇದನ್ನು ನಾನು ವಿರೋಧಿಸುತ್ತೇನೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
2008-09ರಲ್ಲಿ ರೈತರು 543 ದಿನ ನಡೆಸಿದ ನಿರಂತರ ಹೋರಾಟದ ಫಲವಾಗಿ ಅಂದಿನ ಬಿಜೆಪಿ ಸರ್ಕಾರ ಭದ್ರಾಮೇಲ್ದಂಡೆ ಯೋಜನೆ ಮಂಜೂರು ಮಾಡಿ, ವಾಣಿವಿಲಾಸ ಜಲಾಶಯಕ್ಕೆ 5 ಟಿಎಂಸಿ ನೀರು ಮೀಸಲಿಟ್ಟಿತ್ತು. ಆದರೆ ನಂತರ ಬಂದ ಸರ್ಕಾರ 5 ಟಿ.ಎಂ.ಸಿ ಬದಲು ನೀರನ್ನು 2 ಟಿಎಂಸಿಗೆ ಇಳಿಸಿ ಈ ಭಾಗದ ರೈತರಿಗೆ ಆತಂಕ ಸೃಷ್ಟಿಸಿದೆ.
ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ ಹಾಗೂ ಡಿಆರ್ಡಿಓ ಯೋಜನೆಗಳಿಗೆ ಪ್ರತಿ ವರ್ಷ ಕುಡಿಯುವ 2 ಟಿಎಂಸಿ ನೀರುಬೇಕು.ಇದರ ನಡುವೆ ರಾಜಕೀಯ ಒತ್ತಡಕ್ಕೆ ಒಳಗಾಗಿ ಕಾರ್ಖಾನೆಗಳಿಗೆ ನೀರು ಕೊಟ್ಟರೆ ಅಚ್ಚುಕಟ್ಟು ಪ್ರದೇಶದ ರೈತರು ಉಳಿಯುವುದಿಲ್ಲ ಎಂಬುದಾಗಿ ಪೂರ್ಣಿಮಾ ತಿಳಿಸಿದರು.
ವಾಣಿವಿಲಾಸ ಹೋರಾಟ ಸಮಿತಿ ತಾಲ್ಲೂಕು ಕೃಷಿಕ ಸಮಾಜ ಈಗಾಗಲೇ ಕಾರ್ಖಾನೆಗಳಿಗೆ ನೀರು ಕೊಡುವುದಕ್ಕೆ ವಿರೋಧ ವ್ಯಕ್ತಪಡಿಸಿದೆ. ಸ್ಥಳೀಯರ ಕೋರಿಕೆಗೆ ವಿರುದ್ಧವಾಗಿ ನಡೆದುಕೊಂಡರೆ ಅಚ್ಚುಕಟ್ಟು ಪ್ರದೇಶದ ರೈತರ ಜೊತೆ ಬೀದಿಗಳಿದು ಹೋರಾಟ ನಡೆಸಬೇಕಾಗುತ್ತದೆ. ಎಂಬುದಾಗಿ ಅವರು ಎಚ್ಚರಿಸಿದ್ದಾರೆ.