ದಾವಣಗೆರೆ
ಮಹರ್ಷಿ ವಾಲ್ಮೀಕಿರವರು ಮೊದಲು ಕೊಲೆಗಡುಕ, ಕ್ರೂರಿಯಾಗಿದ್ದ ಎಂಬುದನ್ನು ಸಾಬೀತು ಪಡೆಸಿದ್ದಲ್ಲಿ, ಅವರ ಮನೆಯಲ್ಲಿ ಕೊನೆಯ ವರೆಗೂ ಕೆಲಸ ಮಾಡಿಕೊಂಡು ಜೀತವಿರುವುದಾಗಿ ಬಳ್ಳಾರಿ ಲೋಕಸಭಾ ಸದಸ್ಯ ವಿ.ಎಸ್.ಉಗ್ರಪ್ಪ ಸವಾಲು ಹಾಕಿದ್ದಾರೆ.
ನಗರದ ವಾಲ್ಮೀಕಿ ನಾಯಕ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ನಾಯಕ ವಿದ್ಯಾರ್ಥಿ ನಿಲಯದ ಆಡಳಿತ ಮಂಡಳಿಯಿಂದ ಏರ್ಪಡಿಸಿದ್ದ ನೂತನ ಶ್ರೀವಾಲ್ಮೀಕಿ ಸಾಂಸ್ಕøತಿಕ ಭವನದ ಊಟದ ಹಾಲ್, ವಸತಿ ಕೊಠಡಿಗಳು, ಗ್ರಂಥಾಲಯ, ವಾಚಾನಾಲಯ ಮತ್ತು ಕಂಪ್ಯೂಟರ್ ತರಬೇತಿ ಕೇಂದ್ರಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಮಾಯಣ ಮಹಾಕಾವ್ಯ ರಚಿಸಿದ ಮಹರ್ಷಿ ವಾಲ್ಮೀಕಿಯವರು ಯಾವತ್ತೂ ಕೆಟ್ಟವರಾಗಿರಲಿಲ್ಲ. ಆದರೆ, ಕೆಲವರು ಮೊದಲು ರತ್ನಾಕರನಾಗಿದ್ದ ವಾಲ್ಮೀಕಿಯು ಕೊಲೆಗಡುಕ, ಕ್ರೂರಿಯಾಗಿದ್ದ. ಆದರೆ, ನಾರದನ ಉಪದೇಶದ ನಂತರ ಮಹಾಷಿಯಾದ ಎಂಬುದಾಗಿ ಬಿಂಬಿಸುತ್ತಿದ್ದಾರೆ. ಯಾರಾದರೂ ವಾಲ್ಮೀಕಿ ಅವರು ಕೆಟ್ಟವರಾಗಿದ್ದರು ಎಂಬುದನ್ನು ಸಾಬೀತು ಪಡೆಸಿದರೆ, ಅವರ ಮನೆಯಲ್ಲಿ ಸಾಯುವ ವರೆಗೂ ಜೀತ ಮಾಡುತ್ತೇನೆಂದು ಮರು ಸವಾಲು ಹಾಕಿದರು.
ವಾಲ್ಮೀಕಿ ಮಹರ್ಷಿ ಒಬ್ಬ ದಾರ್ಶನಿಕ, ಸಮಾಜ ಸುಧಾರಕ ಅದಕ್ಕಿಂತಲೂ ಮೀಗಿಲಾಗಿ ಅವರೊಬ್ಬ ಮಹಾನ್ ಮಾನವತಾವಾದಿಯಾಗಿದ್ದಾರೆ. ರಾಮಾಯಣದಲ್ಲಿ ಬರುವ ಗರ್ಭೀಣಿ ಸೀತೆಯನ್ನು ರಾಮ ಯಾರದ್ದೋ ಮಾತು ಕೇಳಿ, ಮನೆಬಿಟ್ಟು ಕಳುಹಿಸುವಾಗ ಆಕೆಗೆ ಆಶ್ರಯ ನೀಡದ ವಾಲ್ಮೀಕಿ ಅವರು ಲವ-ಕುಶರಿಗೆ ಸಂಪೂರ್ಣ ವಿದ್ಯಾಭ್ಯಾಸ ಮಾಡಿಸಿದ್ದರು ಎಂದರು.
ಎಲ್ಲರಿಗೂ ಜಾತಿ ಅಭಿಮಾನ ಇರಬೇಕು. ಆದರೆ, ದುರಾಭಿಮಾನ ಮಾತ್ರ ಇರಬಾರದು. ವಾಲ್ಮೀಕಿ ಮಹರ್ಷಿರವರು ಸಮಾಜದಲ್ಲಿ ಸಹಬಾಳ್ವೆಯನ್ನು ಮೊಟ್ಟ ಮೊದಲು ಕಳುಹಿಸಿದ್ದರು. ಅದನ್ನೇ ಮಹಾತ್ಮ ಗಾಂಧೀಜಿಯವರು ರಾಮ ರಾಜ್ಯ ಎಂಬುದಾಗಿ ಕರೆದಿದ್ದರು. ಆದರೆ, ಇಂದು ಕೆಲವರು ಅಧಿಕಾದರ ದುರಾಸೆಯಿಂದ ರಾಮ ರಾಜ್ಯದ ವ್ಯಾಖ್ಯಾನವನ್ನೇ ಬದಲಿಸುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ಧರ್ಮದ ನೆಲೆಯಲ್ಲಿ ಬದುಕು ರೂಪಿಸಿಕೊಂಡಿರುವ ನಾವು ಎಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಿದರೆ, ಅದು ವಾಲ್ಮೀಕಿಗೆ ಕೊಡುವ ದೊಡ್ಡ ಗೌರವಾಗಿದೆ. ವಾಲ್ಮೀಕಿ ಅವರು ರಾಮಯಾಣದಲ್ಲಿ ಹೇಳಿರುವುದು ಇದನ್ನೆ ಎಂಬುದನ್ನು ಅರಿತು ಎಲ್ಲರೊಂದಿಗೂ ಸಹಬಾಳ್ವೆಯ ಜೀವನ ನಡೆಸಬೇಕೆಂದು ಕಿವಿಮಾತು ಹೇಳಿದರು.
ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ದಾವಣಗೆರೆ ಶೈಕ್ಷಣಿಕವಾಗಿ ಹೆಸರು ಗಳಿಸಲು ಇಲ್ಲಿನ ವಿದ್ಯಾರ್ಥಿನಿಲಯಗಳೇ ಪ್ರಮುಖ ಕಾರಣವಾಗಿವೆ. 1907ರಲ್ಲಿ ಶ್ರೀಜಯದೇವ ಜಗದ್ಗುರು ಅವರು ಮೊದಲು ವಿದ್ಯಾರ್ಥಿನಿಲಯ ಪ್ರಾರಂಭಿಸಿದರು. ಇದರಿಂದ ಪ್ರೇರಣೆಗೊಂಡ ಮಹಾತ್ಮ ಗಾಂಧೀಜಿ ಅವರು ಇಲ್ಲಿಗೆ ಬಂದ ಸಂದರ್ಭದಲ್ಲಿ ಹರಿಜನರ ವಿದ್ಯಾರ್ಥಿನಿಲಯಕ್ಕೆ ಅಡಿಗಲ್ಲು ಹಾಕಿದ್ದರು. ವಾಲ್ಮೀಕಿ ಸಮಾಜ ಎಲ್ಲರೊಂದಿಗೆ ಜೀವನ ಮಾಡುವ ಸಮಾಜವಾಗಿದೆ. ಇದಕ್ಕೆ ಉದಾಹರಣೆ ಎಂದರೆ ಬಸವರಾಜಪೇಟೆಯಲ್ಲಿ ಇಂದಿಗೂ ಕೂಡ ಬಸವ ಜಯಂತಿಯನ್ನು ವಾಲ್ಮೀಕಿ ಹಾಗೂ ಲಿಂಗಾಯತ ಸಮಾಜಗಳು ಒಟ್ಟಾಗಿ ಆಚರಿಸುತ್ತವೆ. ಇದು. ಸಮಾಜದ ಐಕ್ಯತೆಯ ಭಾವವನ್ನು ತೋರಿಸುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಮಾತನಾಡಿ, ಇಂದಿನ ನಾಯಕರ ಹಾಸ್ಟೆಲ್ ನೋಡಿದರೆ ತುಂಬಾ ಸಂತೋಷ ಆಗುತ್ತದೆ. ಪಕ್ಕದಲ್ಲೇ ನಮ್ಮ ಸಮಾಜದ ಹಾಸ್ಟೆಲ್ ಇದ್ದರೂ ಇಷ್ಟೊಂದು ಬೆಳವಣಿಗೆ ಹೊಂದಿಲ್ಲ. ಹೀಗಾಗಿ, ನಮಗೆಲ್ಲ ನಾಯಕ ಸಮಾಜದ ಹಾಸ್ಟೆಲ್ ಮಾದರಿಯಾಗಿದೆ. ಮಕ್ಕಳಿಗೆ ಗ್ರಂಥಾಲಯ, ಕಂಪ್ಯೂಟರ್ ಸೆಂಟರ್ ಪ್ರಾರಂಭಿಸಿರುವುದು ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ವಹಿಸಿದ್ದರು. ವಿದ್ಯಾರ್ಥಿ ನಿಲಯದ ಅಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ, ಎಸ್.ವಿ. ರಾಮಚಂದ್ರ, ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಎಚ್.ಓಬಳಪ್ಪ, ನಿಲಯದ ಉಪಾಧ್ಯಕ್ಷ ಟಿ. ದಾಸಕರಿಯಪ್ಪ, ಪಾಲಿಕೆ ಸದಸ್ಯೆ ಅಶ್ವಿನಿ ಪ್ರಶಾಂತ್, ವೃತ್ತ ನಿರೀಕ್ಷಕ ಜಿ.ಬಿ. ಉಮೇಶ್, ಅಂತರಾಷ್ಟ್ರೀಯ ಈಜುಪಟು ರೇವತಿ ನಾಯ್ಕ, ಆರ್. ಎಸ್. ಶೇಖರಪ್ಪ, ಬಿ. ವೀರಣ್ಣ, ಕೆ.ಎಸ್. ಮಂಜುನಾಥ್, ಡಾ. ಡಿ.ಆರ್. ವಾಲ್ಮೀಕಿ, ಪಿ.ಆರ್. ಶಾಹು, ಪ್ರೊ.ಎ.ಬಿ.ರಾಮಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
