ಹುಳಿಯಾರು
ಪಟ್ಟಣದ ಬೀದಿ ಬದಿ ವ್ಯಾಪಾರಿಗಳಿಗೆ ಮಾಜಿ ಶಾಸಕ ಸಿ.ಬಿ.ಸುರೇಶ್ಬಾಬು ಅವರು ಬಿಸಿಲಿನ ರಕ್ಷಣೆಗಾಗಿ ಭಾನುವಾರ ದೊಡ್ಡ ಛತ್ರಿಗಳನ್ನು ವಿತರಿಸಿದರು.ನಂತರ ಮಾತನಾಡಿದ ಅವರು, ದಿನೇ ದಿನೇ ಬಿಸಿಲಿನ ತಾಪಮಾನ ಏರುತ್ತಿದ್ದು, ಬಸ್ ನಿಲ್ದಾಣದ ಬೀದಿ ಬದಿ ವ್ಯಾಪಾರಿಗಳಿಗೆ ಬಿಸಿಲಿನಿಂದ ಯಾವುದೇ ರಕ್ಷಣೆ ಇಲ್ಲದಿರುವ ಹಿನ್ನೆಲೆಯಲ್ಲಿ, ಆರೋಗ್ಯ ಕಾಪಾಡಿಕೊಳ್ಳಲಿ ಎನ್ನುವ ಉದ್ದೇಶದಿಂದ ಹುಳಿಯಾರಿನ ಹೂವು, ಹಣ್ಣು, ತರಕಾರಿ, ಎಲೆ-ಅಡಿಕೆ ಮಾರುವ 50ಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಛತ್ರಿ ವಿತರಿಸಲಾಗುತ್ತಿದ್ದು ಉಳಿದ ವ್ಯಾಪಾರಿಗಳ ಪಟ್ಟಿ ಮಾಡಿದಲ್ಲಿ ಅವರಿಗೂ ಸಹ ಛತ್ರಿ ವಿತರಿಸಲಾಗುವುದು ಎಂದರು.
ಹುಳಿಯಾರು ಪಪಂಯಿಂದ ಬೀದಿ ಬದಿ ವ್ಯಾಪಾರಿಗಳನ್ನು ಆಗಾಗ್ಗೆ ತೆರವು ಮಾಡಿಸುವ ಕ್ರಮಕ್ಕೆ ಮುಂದಾಗುತ್ತಿರುವುದನ್ನು ಖಂಡಿಸಿದ ಅವರು, ಕೊರೋನಾ ಸಮಯದಿಂದ ಬೀದಿ ಬದಿ ವ್ಯಾಪಾರಿಗಳ ಜೀವನ ಸ್ಥಿತಿ ಶೋಚನೀಯವಾಗಿದ್ದು, ಪ್ರತಿದಿನ ದುಡಿದೇ ಜೀವನ ಸಾಗಿಸಬೇಕಾಗಿರುವ ಅವರುಗಳಿಗೆ ಪಪಂಯಿಂದ ಅನುಕೂಲ ಕಲ್ಪಿಸಬೇಕೆ ಹೊರತು ಒಕ್ಕಲೆಬ್ಬಿಸುವುದು ತರವಲ್ಲ ಎಂದರು. ಪಪಂ ಅಧಿಕಾರಿಗಳು ತೆರವು ಮಾಡಿಸಲು ಮುಂದಾದಲ್ಲಿ ಯಾವುದೇ ಭಯವಿಲ್ಲದೆ ತೆರವು ಮಾಡುವುದಿಲ್ಲ ಎನ್ನೀರಿ ಎಂದು ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಹೊನ್ನೇಬಾಗಿ ಶಶಿಧರ್, ನಾಗರಾಜು.ಎಂ.ಬಿ, ಸೈಯದ್ ಜಹೀರ್, ಜಿಪಂ ಮಾಜಿ ಸದಸ್ಯ ರಾಮಚಂದ್ರಪ್ಪ, ದಬ್ಬಗುಂಟೆ ರವಿಕುಮಾರ್, ಹುಳಿಯಾರು ಜೆಡಿಎಸ್ ಘಟಕದ ಅಧ್ಯಕ್ಷ ರಾಘವೇಂದ್ರ, ನಂದಿಹಳ್ಳಿ ದೇವರಾಜು, ಕಿರುತೆರೆ ಕಲಾವಿದ ಗೌಡಿ, ಪಪಂ ಸದಸ್ಯರಾದ ದಯಾನಂದ್, ಮಂಜುನಾಥ್, ಗ್ರಾಪಂ ಮಾಜಿ ಉಪಾಧ್ಯಕ್ಷ ಗಣೇಶ್, ಅಹಮದ್ಖಾನ್, ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಸವರಾಜು, ಗಣೇಶ್, ಕೇಶವಾಪುರ ಕಿರಣ್, ವೆಂಕಟಮ್ಮ, ಹೊಸಹಳ್ಳಿ ಹನುಮಂತಪ್ಪ, ಅಹಮಾದ್ಖಾನ್ ಸೇರಿದಂತೆ ಜೆಡಿಎಸ್ ಮುಖಂಡರುಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2023/03/13HULIYAR1.jpg)