ಶಿರಾ :
ಮದುವೆ ಮುಗಿಸಿಕೊಂಡು ಆರತಕ್ಷತೆಗೆಂದು ವರನ ಕಡೆಯವರನ್ನು ಕೂರಿಸಿಕೊಂಡು ವಧುವಿನ ಗ್ರಾಮಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ರಸ್ತೆಯ ತಿರುವೊಂದರಲ್ಲಿ ಪಲ್ಟಿ ಹೊಡೆದು ಮುಗುಚಿ ಬಿದ್ದ ಪರಿಣಾಮ ಇಬ್ಬರು ದಂಪತಿಗಳು ಸ್ಥಳದಲ್ಲಿಯೇ ಮೃತಪಟ್ಟು, 30ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಗುರುವಾರ ರಾತ್ರಿ 8.30ರ ಸಮಯದಲ್ಲಿ ನಡೆದಿದೆ.
ತಾಲ್ಲೂಕಿನ ಬುಕ್ಕಾಪಟ್ಟಣ ರಸ್ತೆಯ ಮೇಕೇರಹಳ್ಳಿಯ ಬಳಿ ಈ ಘಟನೆಯು ನಡೆದಿದ್ದು ಅಪಘಾತದಿಂದ ತೀವ್ರವಾಗಿ ಗಾಯಗೊಂಡವರ ಪೈಕಿ ಇನ್ನೂ ಹಲವು ಮಂದಿ ಸಾವು, ನೋವಿನ ನಡುವೆ ಸೆಣಸಾಡುತ್ತಿದ್ದಾರೆ ಎನ್ನಲಾಗಿದೆ.
ತುಮಕೂರು ತಾಲ್ಲೂಕಿನ ಕೋರ ಹೋಬಳಿಯ ಶಂಬೋನಹಳ್ಳಿ ಗೊಲ್ಲರಹಟ್ಟಿಯ ವರನ ಸ್ವಗೃಹದಲ್ಲಿ ವಿವಾಹ ಮಹೋತ್ಸವವನ್ನು ಪೂರೈಸಿಕೊಂಡು ವಧುವಿನ ಗ್ರಾಮವಾದ ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿಯ ಮಾಳಿಗೆಹಟ್ಟಿ ಗ್ರಾಮಕ್ಕೆ ಆರತಕ್ಷತೆಗೆಂದು ವರನ ಕಡೆಯವರು ಮತ್ತು ವಧುವಿನ ಕಡೆಯ ಸಂಬಂಧಿಗಳು ಖಾಸಗಿ ಬಸ್ಸಿನಲ್ಲಿ ತೆರಳುತ್ತಿದ್ದರು.
ಶಿರಾ ಮೂಲಕ ಬುಕ್ಕಾಪಟ್ಟಣ ರಸ್ತೆಯಲ್ಲಿ ತೆರಳುವ ಮಾರ್ಗ ಮಧ್ಯದಲ್ಲಿ ಮೇಕೇರಹಳ್ಳಿ ಗ್ರಾಮದ ತಿರುವಿನಲ್ಲಿ ಪ್ರಯಾಣಿಕರಿದ್ದ ಈ ಖಾಸಗಿ ಬಸ್ಸು ಮುಗುಚಿ ಬಿದ್ದು ಮೂರ್ನಾಲ್ಕು ಪಲ್ಟಿ ಒಡೆದಿದೆ. ಈ ಅಪಘಾತದಿಂದ ಶಂಬೋನಹಳ್ಳಿ ಗೊಲ್ಲರಹಟ್ಟಿಯ ಕಿಟ್ಟಣ್ಣ(45) ಹಾಗೂ ಭಾಗ್ಯಮ್ಮ(40) ಎಂಬ ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ರಾತ್ರಿ 8.30ರ ಸಮಯದಲ್ಲಿ ಖಾಸಗಿ ಬಸ್ ಅಪಘಾತವಾದ ಸುದ್ದಿ ತಿಳಿದ ಕೂಡಲೇ ಮೇಕೇರಹಳ್ಳಿ ಗ್ರಾಮವೂ ಸೇರಿದಂತೆ ಸಮೀಪದ ಮುದಿಗೆರೆ, ಬೂತೇಶ್ವರ ನಗರ ಗ್ರಾಮದ ಗ್ರಾಮಸ್ಥರು ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನಿರಂತರ ಶ್ರಮ ವಹಿಸಿದರು ಎನ್ನಲಾಗಿದೆ.
ಸದರಿ ಅಪಘಾತದಿಂದ ಕೆಲವರಿಗೆ ಕೈ, ಕಾಲುಗಳು ಮುರಿದಿದ್ದು ಮತ್ತಲವರಿಗೆ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದೆ. ಐದಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲಾಡಳಿತದ ವೈಫಲ್ಯ:
ತಾಲ್ಲೂಕಿನ ಬುಕ್ಕಾಪಟ್ಟಣ ರಸ್ತೆಯಲ್ಲಿರುವ ಮೇಕೇರಹಳ್ಳಿಯ ತಿರುವಿನಲ್ಲಿ ಈ ಅಪಘಾತವಾಗಿದ್ದು ಇಂತಹ ಅಪಘಾತಗಳು ಈ ತಿರುವಿನಲ್ಲಿ ಕಳೆದ ಒಂದು ವರ್ಷದಿಂದಲೂ ನಡೆಯುತ್ತಿಲೇ ಇವೆ. ನೂರಾರು ಮಂದಿ ಈವರೆಗೆ ಅಪಘಾತದಿಂದ ಇದೇ ಸ್ಥಳದಲ್ಲಿ ಸಾವನ್ನಪ್ಪಿರುವ ನಿದರ್ಶನಗಳೂ ಇವೆ ಎನ್ನಲಾಗಿದೆ.
ಸದರಿ ರಸ್ತೆಯು ಮಂಗಳೂರಿನಿಂದ ತಮಿಳುನಾಡಿನ ತಿರುವಳ್ಳೂರ್ ಹೆದ್ದಾರಿ ರಸ್ತೆಯೂ ಆಗಿದ್ದು ಮೇಕೇರಹಳ್ಳಿ ತಿರುವಿನ ರಸ್ತೆ ಕಾಮಗಾರಿ ಕಳೆದ ಒಂದು ವರ್ಷದಿಂದಲೂ ನೆನೆಗುದಿಗೆ ಬಿದ್ದಿದೆ. ರಾತ್ರಿ ವೇಳೆಯಲ್ಲಿ ಶಿರಾದಿಂದ ಹುಳಿಯಾರು ಕಡೆಗೆ ಹೋಗುವ ಮರ್ಗ ಮಧ್ಯದಲ್ಲಿ ಮೇಕೇರಹಳ್ಳಿಯ ಬಳಿ ಇರುವ ಈ ರಸ್ತೆಯ ತಿರುವು ವಾಹನ ಚಾಲಕರಿಗೆ ತಕ್ಷಣ ಕಾಣುವುದೇ ಇಲ್ಲ. ಇಷ್ಟಕ್ಕೂ ಈ ರಸ್ತೆಯು ಮಣ್ಣಿನ ತಿರುವಿನ ರಸ್ತೆಯಾಗಿದ್ದು ನಿರಂತರವಾಗಿ ಅಪಘಾತಗಳು ನಡೆಯುತ್ತಲೇ ಇವೆ.
ಈ ಸಂಬಂಧ ಗ್ರಾಮಸ್ಥರು ರಸ್ತೆ ದುರಸ್ತಿಗೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಸಾಕಷ್ಟು ದೂರುಗಳನ್ನು ನೀಡಿದ್ದರೂ ಜಿಲ್ಲಾ ಸಚಿವರಾಗಲಿ, ಜಿಲ್ಲಾಡಳಿತವಾಗಲಿ ಈವರೆಗೂ ಕ್ರಮ ಕೈಗೊಂಡಿಲ್ಲ. ನಿರಂತರವಾಗಿ ಅಪಘಾತಗಳು ನಡೆಯುತ್ತಿದ್ದರೂ ಜಿಲ್ಲಾಡಳಿತ ಕಣ್ಣುಮುಚ್ಚಿ ಕೂತಿದೆ ಎಂಬುದು ಈ ಭಾಗದ ಗ್ರಾಮಸ್ಥರ ಆರೋಪವೂ ಆಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
