ದಾವಣಗೆರೆ:
ಪತ್ನಿಯ ಶೀಲ ಶಂಕಿಸಿ ಪತಿಯೇ ಕಬ್ಬಿಣದ ರಾಡ್ನಿಂದ ಪತ್ನಿಯ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿ, ಹತ್ಯೆ ಗೈದಿರುವ ಘಟನೆ ತಾಲೂಕಿನ ಹದಡಿ ಪೊಲೀಸ್ ಠಾಣೆ ವ್ಯಾಪ್ತಿಯ ಮತ್ತಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾನ್ನ ನಡೆದಿದೆ.
ಸಾವಿತ್ರಮ್ಮ (30) ಕೊಲೆಗೀಡಾಗಿರುವ ಮಹಿಳೆಯಾಗಿದ್ದು, ಬೀರಪ್ಪ ಎಂಬಾತನೆ ಕೊಲೆಮಾಡಿರುವ ಪತಿರಾಯಯಾಗಿದ್ದಾನೆ. ಕಳೆದ 4 ತಿಂಗಳಿನಿಂದ ತವರುಮನೆಯಲ್ಲಿದ್ದ ಸಾವಿತ್ರಮ್ಮ ಶುಕ್ರವಾರ ಬೆಳಗ್ಗೆ ಮತ್ತಿ ಗ್ರಾಮದ ಗಂಡನ ಮನೆಗೆ ಬಂದಿದ್ದರು. ಬೀರಪ್ಪ ಪತ್ನಿಯೊಂದಿಗೆ ಜಗಳತೆಗೆದು ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದ ಪರಿಣಾಮ ತೀವ್ರರಕ್ತಸ್ರಾವದಿಂದ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಹೆಂಡತಿಯ ಶೀಲ ಶಂಕಿಸಿ ಈ ಹಿಂದೆ ಗಂಡ-ಹೆಂಡತಿ ಮಧ್ಯೆ ಆಗಾಗ ಜಗಳ ಸಂಭವಿಸುತ್ತಿತ್ತು. ರೋಸಿದ ಸಾವಿತ್ರಮ್ಮ ಈ ಕುರಿತು ಮಹಿಳಾ ಸಾಂತ್ವನ ಕೇಂದ್ರದ ಮೊರೆಹೋಗಿದ್ದು, ಅಲ್ಲಿ ನೀಡಿದ್ದ ಸಲಹೆಯಂತೆ ಗಂಡನ ಮನೆ ತೊರೆದು ತವರು ಮನೆಯಲ್ಲಿದ್ದರು ಎನ್ನಲಾಗಿದೆ.
3ನೆ ತರಗತಿ ಓದುತ್ತಿರುವ ಮಗಳು ಸಾವಿತ್ರಮ್ಮನೊಂದಿಗಿದ್ದು, ಮಗಳ ವಿದ್ಯಾಭ್ಯಾಸಕ್ಕೆ ಆಧಾರ್ ಕಾರ್ಡ್ ಬೇಕಾಗಿದ್ದರಿಂದ ಅದನ್ನು ತರಲು ಗಂಡನ ಮನೆಗೆ ಹೋಗಿದ್ದರು. ಆಗ ಮತ್ತೆ ಗಂಡ ಹೆಂಡಿರ ನಡುವೆ ಜಗಳ ಸಂಭವಿಸಿದ್ದು, ಜಗಳ ವಿಕೋಪಕ್ಕೆ ತಿರುಗಿ ಬೀರಪ್ಪ ಕೊಲೆಗೈದಿದ್ದಾನೆ.
ಸ್ಥಳಕ್ಕೆ ಎಎಸ್ಪಿ ಟಿಜೆ ಉದೇಶ್, ಡಿವೈಎಸ್ಪಿ, ಸಿಪಿಐ ಭೇಟಿನೀಡಿ ಪರಿಶೀಲಿಸಿದರು. ಈ ಕುರಿತು ಹದಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೀರಪ್ಪನನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
