ಕೂಡ್ಲಿಗಿ:
ತಾಲ್ಲೂಕಿನ ಬಡೇಲಡಕು ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ಶುಕ್ರವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.
ಆರಂಭದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂಡಿಸಿಕೊಂಡು ಸಕಲ ವಾಧ್ಯಗಳೊಂದಿಗೆ ರಥದ ಬಳಿ ಬಂದು ರಥಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಲಾಯಿತು.
ನಂತರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಟಾಪಿಸಿ, ಕಳೆದ ವರ್ಷ ಹರಾಜು ಮಾಡಲಾಗಿದ್ದ ಪಟವನ್ನು ಭಕ್ತರಿಂದ ಪಡೆಯಲಾಯಿತು. ನಂತರ ಈ ವರ್ಷ ಹರಾಜು ಮಾಡಲಾದ ಪಟವನ್ನು ಕೆ. ಗುರುರಾಜ 41,101 ರೂಪಾಯಿಗಳಿಗೆ ಪಡೆದರೆ, ದೇವರ ಹೂವಿನ ಹಾರವನ್ನು ಜೆ. ಮುತ್ತಾಲಿ 11,101 ರೂಪಾಯಿಗೆ ಪಡೆದರು. ನಂತರ ಜಯ ಘೋಷ ಕೂಗುತ್ತ ರಥವನ್ನು ಮುಂದೆ ಸಾಗಿಸಲಾಯಿತು. ಈ ವೇಳೆ ನೆರೆದಿದ್ದ ಭಕ್ತರು ಬಾಳೆ ಹಣ್ಣು ರಥಕ್ಕೆ ತೂರಿ ತಮ್ಮ ಭಕ್ತಿ ಸಮರ್ಪಿಸಿದರು. ತಾಲ್ಲೂಕಿನ ವಿವಿಧ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
