ದಾವಣಗೆರೆ:
ದೆಹಲಿಯಲ್ಲಿ ಸಂವಿಧಾನದ ಪುಸ್ತಕ ಸುಟ್ಟ ದೇಶದ್ರೋಹಿಗಳನ್ನು ತಕ್ಷಣವೇ ಬಂಧಿಸಿ, ದೇಶದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಸಾಮಾಜಿಕ ಸಂಘರ್ಷ ಸಮಿತಿ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ವಿದ್ಯಾರ್ಥಿ ಒಕ್ಕೂಟದ ಕಾರ್ಯಕರ್ತರು ಇಲ್ಲಿನ ಪಾಲಿಕೆ ಕಚೇರಿ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಮುಖಂಡ ಹೆಚ್.ಮಲ್ಲೇಶ್, ಸಂವಿಧಾನ ಜಾರಿಗೆ ಬಂದ ನಂತರ ದಲಿತರು, ಹಿಂದುಳಿದವರು, ಧಾರ್ಮಿಕ, ಅಲ್ಪಸಂಖ್ಯಾತರು ಮತ್ತು ವಿಶೇಷವಾಗಿ ಮಹಿಳೆಯರು ಸೌಲಭ್ಯ ಪಡೆದು ಬದುಕು ಕಟ್ಟಿಕೊಂಡಿದ್ದಾರೆ. ಈ ಸಂವಿಧಾನ ಕೃತಿಯು ಜಗತ್ತಿನ ಯಾವುದೇ ಸಮಾನತೆಯ ಬಯಸುವ ವ್ಯಕ್ತಿಗಳಿಗೆ ಒಪ್ಪಿತವಾಗಿದೆ. ಆದರೆ, ಕೆಲ ಪಟ್ಟಭದ್ರರು ಸಂವಿಧಾನದ ಸಮಾನತೆಯ ಆಶಯವನ್ನು ಒಪ್ಪಿಕೊಳ್ಳದೇ ಅದನ್ನು ಸುಟ್ಟು ಹಾಕಿರುವುದು ಅತ್ಯಂತ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂವಿಧಾನ ಸುಡುವುದು ಎಂದರೆ ದೇಶದ ಸಂಸತ್ತು, ಕಾರ್ಯಾಂಗ, ನ್ಯಾಯಾಂಗ ಗಳನ್ನು ಸುಡುವಿಕೆಯಾಗಿದೆ. ಸಂವಿಧಾನದ ರಕ್ಷಕರಾದ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು ಈ ಬಗ್ಗೆ ತೀವ್ರ ಗಮನ ಹರಿಸಿ, ಭಯೋತ್ಪಾದಕ ದೇಶದ್ರೋಹಿಗಳನ್ನು ಬಂಧಿಸಿ, ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಬಿ.ಎನ್.ನಾಗೇಶ್, ಎಂ.ಸಿ.ಮೋಹನ್ಕುಮಾರ್, ಡಿ.ಹನುಮಂತಪ್ಪ, ತಿಪ್ಪೆರುದ್ರಪ್ಪ, ನೀತಿಗೆರೆ ಮಂಜಪ್ಪ, ಆಂಜಿನಪ್ಪ, ವೆಂಕಟೇಶ್, ಹೆಚ್.ಮಲ್ಲೇಶ್, ಮಂಜಪ್ಪ, ರುದ್ರಪ್ಪ, ಮಹೇಶ್ ಸೇರಿದಂತೆ ಮತ್ತಿತರು ಭಾಗವಹಿಸಿದ್ದರು.
