ಸಚಿವ ಪುಟ್ಟರಾಜುಗೆ ಬೆಳ್ಳಂಬೆಳಗ್ಗೆ ಐಟಿ ಶಾಕ್!!

ಮೈಸೂರು:

      ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವರೂ ಆಗಿರುವ ಸಣ್ಣ ನೀರಾವರಿ ಇಲಾಖೆ ಸಚಿವ ಸಿ.ಎಸ್.ಪುಟ್ಟರಾಜು ಅವರ ಮೈಸೂರು ಹಾಗೂ ಮಂಡ್ಯ ನಗರಗಳ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ಗುರುವಾರ ಮುಂಜಾನೆ 5.30ರ ಸುಮಾರಿಗೆ ದಾಳಿ ನಡೆಸಿದ್ದಾರೆ. 

      ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನಲ್ಲಿರುವ ಪುಟ್ಟರಾಜು ಸ್ವಗ್ರಾಮ ಚಿನಕುರಳಿಯ ಮನೆ, ಮೈಸೂರಿನಲ್ಲಿರುವ ಅವರ ಸಂಬಂಧಿ ಅಶೋಕ್ ಎಂಬುವರ ಮನೆ ಮೇಲೆ ದಾಳಿ ನಡೆದಿದೆ.

     ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ಕೇಂದ್ರ ಮೀಸಲು ಪಡೆ (ಸಿಆರ್ ಪಿಎಫ್) ಸಿಬ್ಬಂದಿಗಳ ನೆರವಿನಿಂದ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸಿಎಂ ಎಚ್ಚರಿಕೆ:

       ತಮ್ಮನ್ನು ಸೇರಿದಂತೆ ಜೆಡಿಎಸ್ – ಕಾಂಗ್ರೆಸ್ ಮುಖಂಡರನ್ನು ಗುರಿಯಾಗಿಸಿಕೊಂಡು ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ದಾಳಿ ನಡೆಸಲು ಸಿದ್ಧತೆ ನಡೆಸಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ನಿನ್ನೆಯಷ್ಟೇ ಹೇಳಿದ್ದರು.

      ಅವರ ಹೇಳಿಕೆ ನಿಜವಾಗಿದ್ದು, ಐಟಿ ಇಲಾಖೆ ಜೆಡಿಎಸ್ ಮುಖಂಡರಿಗೆ ಶಾಕ್ ನೀಡಿದೆ. ಮುಖ್ಯಮಂತ್ರಿ ಆಪ್ತರು, ಜೆಡಿಎಸ್ ಬೆಂಬಲಿಗರ ಮನೆ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಚಿವ ಸಿ.ಎಸ್. ಪುಟ್ಟರಾಜು ನಿವಾಸ ಮತ್ತು ಅವರ ಸಂಬಂಧಿಕರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ.

      ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಹಾಸನದಲ್ಲಿ ಸಚಿವ ಹೆಚ್.ಡಿ. ರೇವಣ್ಣ ಅವರ ಆಪ್ತರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಸಿಎಂ ಹೇಳಿದ ಭವಿಷ್ಯ ನಿಜವಾಗಿದೆ. ಜೆಡಿಎಸ್ ನಾಯಕರಿಗೆ ಐಟಿ ಬಿಸಿ ತಟ್ಟಿದೆ. ಬೆಂಗಳೂರು, ಮಂಡ್ಯ, ಹಾಸನದಲ್ಲಿ ಸಿಎಂ ಆಪ್ತರು ಮತ್ತು ಜೆಡಿಎಸ್ ಬೆಂಬಲಿಗರ ಮನೆ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap