ಸಮಾಜ ಒಡೆಯಲೆತ್ನಿಸಿದವರಿಗೆ ತಕ್ಕ ಪಾಠ

ದಾವಣಗೆರೆ:

   ವೀರಶೈವ ಲಿಂಗಾಯಿತ ಸಮಾಜ ಒಡೆಯಲೆತ್ನಿಸಿದ ಮಹಾಪಂಡಿತರಿಗೆ ರಾಜ್ಯದ ಜನತೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿದ್ದಾರೆ ಎಂದು ಹಾಲಕೆರೆ ಅನ್ನದಾನೀಶ್ವರ ಸಂಸ್ಥಾನ ಮಠದ ಜಗದ್ಗುರು ಡಾ.ಅಭಿನವ ಅನ್ನದಾನ ಸ್ವಾಮೀಜಿ ತಿಳಿಸಿದ್ದಾರೆ.
ನಗರದ ದೇವರಾಜ ಅರಸ್ ಬಡಾವಣೆಯಲ್ಲಿರುವ ಭಾನುವಾರ ಶ್ರೀಅನ್ನದಾನೀಶ್ವರ ಶಾಖಾಮಠದಲ್ಲಿ ಕೆ.ತಿಪ್ಪಣ್ಣನವರ ಹೆಸರಿನಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಭಾನುವಾರ ಏರ್ಪಡಿಸಿದ್ದ ಲಿಂ.ಶ್ರೀಗುರು ಅನ್ನದಾನ ಮಹಾಶಿವಯೋಗಿಗಳ 41ನೇ ಪುಣ್ಯಾರಾಧನೆ, 216ನೇ ಶಿವಾನುಭವ ಸಂಪದ, 510 ಮುತೈದೆಯರಿಗೆ ಉಡಿತುಂಬುವ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು.

    ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಸಮಾಜ ಯಾವುದಾದರು ಇದ್ದರೆ, ಅದು ವೀರಶೈವ- ಲಿಂಗಾಯಿತ ಸಮಾಜ. ಇಂಥಹ ಸಮಾಜವನ್ನು ಒಡೆಯಲು ಎತ್ನಿಸಿದ ಕೆಲ ಮಹಾಪಂಡಿತರಿಗೆ ಚುನಾವಣೆಯಲ್ಲಿ ರಾಜ್ಯದ ಜನತೆ ತಕ್ಕಪಾಠ ಕಲಿಸಲಿದ್ದಾರೆ. ವೀರಶೈವ ಲಿಂಗಾಯಿತ ಸಮಾಜ ಎರಡೂ ಒಂದೇ. ಈ ಸಮಾಜ ಸರ್ವಜನಾಂಗದ ಪ್ರಗತಿಯೊಂದಿಗೆ ತಾನೂ ಬೆಳೆಯುತ್ತದೆ. ಆದ್ದರಿಂದಲೇ ಇಂದಿಗೂ ಸಿದ್ದಗಂಗಾ ಮಠ, ಸುತ್ತೂರು ಮಠಗಳು ಸರ್ವಜನಾಂಗದವರಿಗೂ ಅನ್ನ, ಅಕ್ಷರ ದಾಸೋಹ ಸೇವೆಗೈಯುವಲ್ಲಿ ನಿರತವಾಗಿವೆ ಎಂದರು.
ವೀರಶೈವ-ಲಿಂಗಾಯಿತರು ಎಂದಿಗೂ ಒಂದೇ. ಆದರೆ, ಅವರು ಬೇರೆ, ಬೇರೆ ಎಂಬ ಭಾವನೆಯನ್ನು ಕೆಲವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾದರು. ಆದರೆ, ರಾಜ್ಯದ ಜನತೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿದರು. ಯಾರೇ ನಿಮ್ಮ ಜಾತಿ ಕೇಳಿದರೂ ಉಪಪಂಗಡ ಹೇಳದೇ ವೀರಶೈವ-ಲಿಂಗಾಯಿತರು ಎಂಬುದಾಗಿ ಉತ್ತರಿಸಬೇಕು. ಆಗ ಮಾತ್ರ ನೀವು ಬಸವಣ್ಣ, ಪಾಂಚಾಚಾರ್ಯರ ಕೃಪೆಗೆ ಪಾತ್ರರಾಗಲು ಸಾಧ್ಯ ಎಂದರು.

     ಯಾವ ವಿದ್ಯಾರ್ಥಿ ದೇಶ, ಮಾತಾಪಿತೃ, ಗುರುಗಳ ಸೇವೆ, ಋಣ ತೀರಿಸುತ್ತಾನೋ ಅವನ ಬದುಕು ಮಾತ್ರ ಬಂಗಾರವಾಗಲು ಸಾಧ್ಯ. ಗುರುವಿನ ಕೃಪೆಯಿಂದ ಮಾತ್ರ ಜೀವನದಲ್ಲಿ ಸುಖಶಾಂತಿ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಆದ್ದರಿಂದ ಅಂಕಗಳಿಗೆಯ ಬೆನ್ನು ಹತ್ತದೆ ಸಂಸ್ಕಾರ ವಂತರಾಗಬೇಕು. ಗುರು, ತಂದೆತಾಯಿ, ದೇಶ ಸೇವೆಗೈಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಡುಪಾಗಿಡಬೇಕು ಎಂದು ಕಿವಿಮಾತು ಹೇಳಿದರು.
ಆವರಗೊಳ್ಳ ಪುರವರ್ಗಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈ ಹಿಂದೆ ಮಠಗಳು ಜಾತ್ಯಾತೀತವಾಗಿದ್ದವು. ಎಲ್ಲಾ ಸಮುದಾಯದವರನ್ನು ಸಮಾನವಾಗಿ ಕಾಣುತ್ತಿದ್ದವು. ಆದರೆ, ಇಂದು ಜಾತಿಗೊಂದು ಮಠ ಸೃಷ್ಟಿಗೊಂಡಿದ್ದು, ಎಲ್ಲರೂ ಜಾತಿ ಕಟ್ಟಳೆಯಲ್ಲಿ ಬಂಧಿಯಾಗಿರುವುದು ಶೋಚನೀಯವಾಗಿದೆ. ಇಂಥಹ ದಿನಮಾನಗಳಲ್ಲಿ ಅನ್ನದಾನೀಶ್ವರ ಮಠ ಕಲಿಯುಗದ ಕಾಮಧೇನುವಾಗಿರುವುದು ಅನುಕರಣೀಯವಾಗಿದೆ ಎಂದರು.

   ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಮಠ ಮಾನ್ಯಗಳು ದುರ್ಮಾರ್ಗದಲ್ಲಿ ನಡೆಯುವವರನ್ನು ತಿದ್ದಿತೀಡಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುವಲ್ಲಿ ಮುಂಚೂಣಿಯಲ್ಲಿವೆ. ಮುಂದಿನ ದಿನಗಳಲ್ಲೂ ಮಠ, ಮಠಾಧೀಶರಿಂದ ಇಂತಹ ಕಾರ್ಯಗಳು ಹೆಚ್ಚೆಚ್ಚು ನಡೆಯಲಿ ಎಂದು ಆಶಿಸಿದರು.
ಪಾಲಿಕೆ ಮೇಯರ್ ಶೋಭಾ ಶಿವಾನಂದ ಪಲ್ಲಾಗಟ್ಟೆ ಮಾತನಾಡಿ, ಆಧ್ಯಾತ್ಮದಲ್ಲಿ ಸಿಗುವಂತಹ ಶಾಂತಿ, ನೆಮ್ಮದಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಆಧ್ಯಾತ್ಮ ಎಷ್ಟುಕಲಿತರೂ ಕಡಿಮೆಯೇ. ಇಂದಿನ ಜಂಜಾಟ ಜೀವನದಲ್ಲಿ ಎಲ್ಲರೂ ಕೆಲಕಾಲವಾದರೈ ಆಧ್ಯಾತ್ಮದತ್ತ ವಾಲಿದರೆ ಮನಸ್ಸಿಗೆ ಅಲ್ಪಶಾಂತಿಯಾದರೂ ದಕ್ಕುತ್ತದೆ ಎಂದರು.
ಅನ್ನದಾನೀಶ್ವರ ಮಠದ ಉತ್ತರಾಧಿಕಾರಿಗಳಾದ ಶ್ರೀಮುಪ್ಪಿನ ಬಸವಲಿಂಗದೇವರು ಆಶೀರ್ವಚನ ನೀಡಿದರು. ಕನ್ನಡ ಉಪನ್ಯಾಸಕ ಎಫ್.ಎನ್. ಹುಡೇದ್ ಅನ್ನದಾನೀಶ್ವರರ ಕುರಿತು ಉಪನ್ಯಾಸ ನೀಡಿದರು.
ಇದೇ ಸಂದರ್ಭ ಮತ್ತಿಹಳ್ಳಿ ವೀರಣ್ಣ ಅವರಿಗೆ ವಾಣಿಜ್ಯ ಸಿರಿ ಪ್ರಶಸ್ತಿ, ಸಿಎ ಬಸವರಾಜಪ್ಪ ಬೆಳಗಾವಿ ಅವರಿಗೆ ಗಣಕ ಶ್ರೇಷ್ಠ ಪ್ರಶಸ್ತಿ, ಬಸಮ್ಮ ಇಳಕಲ್ ಜಯಣ್ಣಗೆ ಕಾಯಕಜೀವಿ ಪ್ರಶಸ್ತಿ, ಆದಪ್ಪ ಅವರಿಗೆ ಕಾಯಕಶ್ರೇಷ್ಠ, ಹಿರಿಯ ಪತ್ರಕರ್ತರಾದ ವೀರಪ್ಪ ಎಂ. ಭಾವಿ ಹಾಗೂ ಇ.ಎಂ. ಮಂಜುನಾಥ್ ಅವರಿಗೆ ಪತ್ರಿಕೋದ್ಯಮ ಸಿರಿ ಪ್ರಶಸ್ತಿ, ಹಿರಿಯ ಛಾಯಾಗ್ರಾಹಕ ವಿವೇಕಾನಂದ ಎಲ್. ಬದ್ದಿ ಅವರಿಗೆ ಛಾಯಾಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅನ್ನದಾನೀಶ್ವರ ಸಾರ್ವಜನಿಕ ಸೇವಾ ಟ್ರಸ್ಟ್ ಅಧ್ಯಕ್ಷ ಅಥಣಿ ಎಸ್. ವೀರಣ್ಣ, ವಿಧಾನ ಪರಿಷತ್ ಮಾಜಿ ಮುಖ್ಯಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ಶಿವಕುಮಾರಸ್ವಾಮಿ ಪ್ರಾರ್ಥಿಸಿದರು. ವೀರಪ್ಪ ಎಂ ಭಾವಿ ಸ್ವಾಗತಿಸಿದರು. ಸುಜಾತ ನಿರೂಪಿಸಿದರು.

Recent Articles

spot_img

Related Stories

Share via
Copy link