ಅಕ್ರಮ ಭೂ ಮಂಜೂರಾತಿ : ಸೀ ಬರ್ಡ್‌ ನೌಕರ ನ್ಯಾಯಾಂಗ ಬಂಧನಕ್ಕೆ

ಚಿಕ್ಕಮಗಳೂರು

     ಅಕ್ರಮ ಭೂ ಮಂಜೂರಾತಿ ಹಿನ್ನೆಲೆ ಕಾರವಾರ ಸೀಬರ್ಡ್ ನೌಕದಳದ ವಿಶೇಷ ಭೂಸ್ವಾಧೀನ ಅಧಿಕಾರಿ ಉಮೇಶ್‍ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪ್ರಿನ್ಸಿಪಲ್ ಕೋರ್ಟ್ ಆದೇಶ ಮಾಡಿದೆ.

    ಉಮೇಶ್ ಕಡೂರು ತಾಲೂಕಿನಲ್ಲಿ ತಹಶೀಲ್ದಾರ್ ಆಗಿದ್ದ ವೇಳೆ ತಾಲೂಕಿನ ಉಳಿಗನಾರು ಗ್ರಾಮದಲ್ಲಿ ಸರ್ಕಾರಿ ಬೀಳು ಜಮೀನನ್ನು ನಕಲಿ ದಾಖಲೆ ಸೃಷ್ಠಿಸಿ ನಾಲ್ವರಿಗೆ ತಲಾ 5 ಹೆಕ್ಟೇರ್‌ನಂತೆ ಅಕ್ರಮವಾಗಿ ಪರಭಾರೆ ಮಾಡಿಕೊಟ್ಟಿದ್ದರು. ಈ ಸಂಬಂಧ ಎಸಿ ಕಾಂತರಾಜು ಕಡೂರು ಠಾಣೆಯಲ್ಲಿ ತಹಶೀಲ್ದಾರ್ ಉಮೇಶ್, ಶಿರಸ್ಥೇದಾರ್ ಹಾಗೂ ರೆವಿನ್ಯೂ ಇನ್ಸ್‍ಪೆಕ್ಟರ್ ವಿರುದ್ಧ ದೂರು ನೀಡಿದ್ದರು.

    ಅಸಿಸ್ಟೆಂಟ್ ಕಮಿಷನರ್ ದೂರಿನ ಅನ್ವಯ ಕಡೂರು ಪೊಲೀಸರು ಕಳೆದ ರಾತ್ರಿ ಬೆಂಗಳೂರಿನ ಪೀಣ್ಯದಲ್ಲಿ ಉಮೇಶ್ ಅವರನ್ನು ಬಂಧಿಸಿ ಚಿಕ್ಕಮಗಳೂರಿಗೆ ಕರೆತಂದಿದ್ದರು. ತರೀಕೆರೆ ಡಿವೈಎಸ್‌ಪಿ ಕಚೇರಿಗೆ ಕರೆದೊಯ್ದಿದ್ದ ಉಮೇಶ್‌ನನ್ನು ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಕರೆತಂದಿದ್ದರು. ಅಲ್ಲಿಂದ ಕಡೂರು ನ್ಯಾಯಧೀಶರ ಮನೆಗೆ ಆರೋಪಿ ಉಮೇಶ್‍ರನ್ನು ಹಾಜರುಪಡಿಸಿದ್ದರು.

    ನ್ಯಾಯಧೀಶರು ಆರೋಪಿ ಉಮೇಶ್‍ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ. ನ್ಯಾಯಧೀಶರ ಸೂಚನೆ ಮೆರೆಗೆ ಕಡೂರು ಪೊಲೀಸರು ಆರೋಪಿ ಉಮೇಶ್‍ರನ್ನ ಚಿಕ್ಕಮಗಳೂರು ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸಿದ್ದಾರೆ. ಸೇವೆಯಿಂದ ಅಮಾನತ್ತುಗೊಳಿಸಿ ಆದೇಶ ಅಕ್ರಮ ಭೂ ಮಂಜೂರಾತಿ ಪ್ರಕರಣದಲ್ಲಿ ಬಂಧನವಾಗಿದ್ದ ಕಡೂರು ತಾಲೂಕಿನ ಹಿಂದಿನ ತಹಶೀಲ್ದಾರ್ ಜೆ.ಉಮೇಶ್ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧೀನ ಕಾರ್ಯದರ್ಶಿ ಉಮಾದೇವಿ ಆದೇಶಿಸಿದ್ದರು.

    ಇತ್ತೀಚೆಗೆ ವರ್ಗಾವಣೆಗೊಂಡು ಕಾರವಾರ ಸೀಬರ್ಡ್ ಭೂಸ್ವಾಧೀನ ಅಧಿಕಾರಿಯಾಗಿದ್ದ ಜೆ.ಉಮೇಶ್ ಅವರ ಮೇಲೆ ಅಕ್ರಮ ಭೂ ಮಂಜೂರಾತಿ ಸಂಬಂಧ ತರೀಕೆರೆ ಉಪವಿಭಾಗಾಧಿಕಾರಿ ಡಾ.ಕಾಂತರಾಜ್ ಕಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾಗುತ್ತಿದ್ದಂತೆ ತಹಶೀಲ್ದಾರ್ ಜೆ.ಉಮೇಶ್ ಬಂಧನ ಭೀತಿಯಿಂದ ಕಣ್ಮರೆಯಾಗಿದ್ದರು.

    ಕಡೂರು ಪೊಲೀಸರು ಗುರುವಾರ ರಾತ್ರಿ ಬೆಂಗಳೂರಿನಲ್ಲಿ ಜೆ.ಉಮೇಶ್ ಅವರನ್ನು ಬಂಧಿಸಿದ್ದಾರೆ. ಕಡೂರು ತಾಲೂಕಿನಲ್ಲಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಉಳ್ಳಿನಾಗರು ಸರ್ಕಾರಿ ಬೀಳು ಸರ್ವೇ ನಂ43ರಲ್ಲಿನ 5.04 ಎಕರೆ ಜಮೀನು ಅಕ್ರಮ ಭೂ ಮಂಜೂರಾತಿ ಮಾಡಿರುವ ಆರೋಪ ಈತನ ಮೇಲಿದ್ದು, ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಸರ್ಕಾರಿ ಅಧಿಕಾರಿ ಗಂಭೀರ ಕರ್ತವ್ಯಲೋಪ ಮತ್ತು ಸರ್ಕಾರಕ್ಕೆ ತೀವ್ರ ಆರ್ಥಿಕ ನಷ್ಟ ಉಂಟು ಮಾಡಿರು ವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನಲೆಯಲ್ಲಿ ಅಧಿಕಾರಿಯ ವಿರುದ್ಧ ಇಲಾಖೆ ವಿಚಾರಣೆ ಬಾಕೀ ಇದ್ದು, ಈ ಕಾರಣದಿಂದ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ ಎಂದು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ