ದಾವಣಗೆರೆ
ಪಾಲಿಕೆ ವ್ಯಾಪ್ತಿಯ 23ನೇ ವಾರ್ಡ್ ಸೇರಿದಂತೆ ವಿವಿಧ ಪ್ರದೇಶಗಳ ನಿವೇಶನ ರಹಿತರಿಗೆ ಸೂರು ಕಲ್ಪಿಸಬೇಕೆಂದು ಒತ್ತಾಯಿಸಿ, ಎಐಟಿಯುಸಿ ಹಾಗೂ 23ನೇ ವಾರ್ಡ್ನ ಕೊಳಗೇರಿ ನಿವಾಸಿಗಳ ಸಂಘದ ನೇತೃತ್ವದಲ್ಲಿ ನಿವೇಶನ ರಹಿತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಎದುರಿನಿಂದ ಪ್ರತಿಭಟನಾ ಮೆರವಣಿಗೆ ಹೊರಟ ನಿವೇಶನ ರಹಿತರು ಪಿಬಿ ರಸ್ತೆಯ ಮೂಲಕ ಪಾಲಿಕೆಯ ಕಚೇರಿಗೆ ತೆರಳಿ, ಸೂರು ಕಲ್ಪಿಸದ ಪಾಲಿಕೆಯ ವಿರುದ್ಧ ಘೋಷಣೆ ಕೂಗಿ ಆಯುಕ್ತ ಮಂಜುನಾಥ್ ಆರ್. ಬಳ್ಳಾರಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಐಟಿಯುಸಿ ಮುಖಂಡ ಆವರಗೆರೆ ವಾಸು, ಪಾಲಿಕೆ ವ್ಯಾಪ್ತಿಯ 23ನೇ ವಾರ್ಡ್ನ ಆವರಗೆರೆ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ ಸಾಕಷ್ಟು ನಿವೇಶನ ರಹಿತರಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 72 ವರ್ಷ ಕಳೆದರೂ ಸಹ ಬಡವರು ನೆಮ್ಮದಿಯಿಂದ ಜೀವನ ನಡೆಸಲು ಇನ್ನೂ ವಸತಿ ಸೌಲಭ್ಯ ದೊರೆಯದಿರುವುದು ಅತ್ಯಂತ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿವೇಶನ ರಹಿತರು ಬಾಡಿಗೆ ಮನೆಗಳಲ್ಲಿ, ಗೋಶಾಲೆ ಬಡಾವಣೆಗಳಲ್ಲಿ, ಹಳ್ಳದ ಪಕ್ಕ ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ. ದಿನಗೂಲಿ ಕೆಲಸಗಳನ್ನೇ ನಂಬಿಕೊಂಡು ಕನಿಷ್ಠ ಕೂಲಿ ಪಡೆದು, ತುತ್ತಿನ ಚೀಲ ತುಂಬಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ. ವಾಸ್ತವ ಪರಿಸ್ಥಿತಿ ಹೀಗಿರುವಾಗ ಮನೆಗಳಿಗೆ ದುಬಾರಿ ಬಾಡಿಗೆ ಕೊಡುವುದು ಕಷ್ಟಕರವಾಗಿದೆ ಎಂದರು.
ನಿರಾಶ್ರಿತರ ಹೆಸರಿನಲ್ಲಿ ಸಿಟಿ ನಗರಸಭೆಯ ಸರ್ವೆ ನಂ.186 ರ 11 ಎಕರೆ 20 ಗುಂಟೆ ಜಮೀನು ಕಾಯ್ದಿರಿಸುವ ಬಗ್ಗೆ ಈ ಹಿಂದೆ ಮನವಿ ಸಲ್ಲಿಸಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಯಾವುದೇ ಕೆಲಸ ಆಗಿಲ್ಲ. ಹಾಗಾಗಿ ಕೂಡಲೇ ಆವರಗೆರೆ ಪಿ.ಬಿ. ಬಸವನಗೌಡ ಬಡಾವಣೆ, ಗೋಶಾಲೆ ಹಳ್ಳದ ಪಕ್ಕದ ಗುಡಿಸಲು, ಎಸ್.ಓ.ಜಿ ಕಾಲೋನಿ, ಆಂಜನೇಯಮಿಲ್ ಬಡಾವಣೆ, ಶಾಂತಿನಗರ, ಚಿಕ್ಕನಹಳ್ಳಿ ಹಾಗೂ ವಿವಿಧ ಬಡಾವಣೆಗಳಲ್ಲಿ ನಿವೇಶನ ರಹಿತ ನಿರಾಶ್ರಿತರಿಗೆ ನೆಮ್ಮದಿಯಾಗಿ ಜೀವಿಸಲು ನಿವೇಶನ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ಚಂದ್ರಪ್ಪ ಆವರಗೆರೆ, ಕಾರ್ಯದರ್ಶಿ ಮಂಜುನಾಥ್, ಸಂಘಟನಾ ಕಾರ್ಯದರ್ಶಿ ತಿಪ್ಪೇಶ್, ಉಪಾಧ್ಯಕ್ಷರಾದ ರಾಜು ಕೆರೆನಹಳ್ಳಿ, ಸಿ. ಗುರುಮೂರ್ತಿ, ಶಾರದಮ್ಮ, ರೇಣುಕಮ್ಮ, ರಿಹಾನಾಬಾನು, ಯಶೋಧಮ್ಮ, ಶೋಭಾ, ಶಾಂತಿಬಾಯಿ, ಕೆಂಚಮ್ಮ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
