ದಾವಣಗೆರೆ:
ಸ್ಮಾರ್ಟ್ಸಿಟಿಯಾಗಿ ನಿರ್ಮಾಣವಾಗುತ್ತಿರುವ ದಾವಣಗೆರೆಯ ಪ್ರಮುಖ ರಸ್ತೆಗಳು ಸಿಸಿ ರಸ್ತೆಗಳಾಗಿ ನಿರ್ಮಾಣಗೊಂಡು, ದೇವನಗರಿ ಸುಂದರವಾಗುತ್ತಿದೆ ಎಂಬುದಕ್ಕೆ ಪುಷ್ಟಿ ನೀಡುತ್ತಿದ್ದರೆ, ಕೊಳೆಗೇರಿಗಳ ಹಲವು ರಸ್ತೆಗಳು ಇನ್ನೂ ಅಭಿವೃದ್ಧಿಯಾಗದೇ, ಇವು ಸ್ಮಾರ್ಟ್ಸಿಟಿಯ ರಸ್ತೆಗಳೇ ಎಂಬಂತೆ ಅಣಿಕಿಸುತ್ತಿವೆ.
ಹೌದು… ದಾವಣಗೆರೆಯ ಪಿಬಿ ರಸ್ತೆ, ಹದಡಿ ರಸ್ತೆ, ಬಂಬೂ ಬಜಾರ್ ರಸ್ತೆ, ಶಾಮನೂರು ರಸ್ತೆ, ಶಾಂತಿ ಟಾಕೀಸ್ ರಸ್ತೆ ಸೇರಿದಂತೆ ಹಲವು ರಸ್ತೆಗಳು ಸಿಮೆಂಟ್ ಕಾಂಕ್ರೀಟ್ ರಸ್ತೆಗಳಾಗಿ ನಿರ್ಮಾಣವಾಗಿ, ಈ ಊರಿಗೆ ಬಂದವರಿಂದ ದೇವನಗರಿ ಸ್ಮಾರ್ಟ್ಸಿಟಿಯಾಗಿ ನಿರ್ಮಾಣಗೊಳ್ಳುತ್ತಿರುವುದಕ್ಕೆ ಸಾಕ್ಷಿಕರಿಸುತ್ತವೆ. ಆದರೆ, “ಮೇಲೆಲ್ಲಾ ಥಳಕು ಬಳುಕು ಸುಂದರಿ, ಒಳಗೆ ನೋಡು ಹುಳುಕು, ಕೊಳಕು ಚುರುಮುರಿ” ಎಂಬ ಮಾತಿನಂತೆ ಇಲ್ಲಿನ ಕೊಳೆಗೇರಿಗಳ ಹಲವು ರಸ್ತೆಗಳು ಇನ್ನೂ ಅಭಿವೃದ್ಧಿಯಾಗದೇ, ದಾವಣಗೆರೆಯ ಕೊಳಕನ್ನು ಅನಾವರಣಗೊಳಿಸುತ್ತಿವೆ.
ಇಲ್ಲಿನ ಜಾಲಿನಗರ, ಶಿವನಗರ, ಎಸ್.ಎಂ.ಕೃಷ್ಣ ನಗರ, ಎಸ್ಪಿಎಸ್ ನಗರ, ಹೊಸ ಕ್ಯಾಂಪ್, ಆಜಾದ್ ನಗರ, ಭಾಷಾ ನಗರ, ನಿಟ್ಟುವಳ್ಳಿ, ಕೆಟಿಜೆ ನಗರ, ಬೆಂಕಿ ನಗರ, ಬಾಲಾಜಿ ನಗರ, ಅಶೋಕ ನಗರ, ಗಾಂಧಿ ನಗರ ಸೇರಿದಂತೆ ಹಲವು ಕೊಳೆಗೇರಿಗಳಲ್ಲಿ ಕಿಷ್ಕಿಂದೆಯಂಥಹ ರಸ್ತೆಗಳಿದ್ದು, ಇಲ್ಲಿ ಕೆಲ ರಸ್ತೆಗಳು ಅಭಿವೃದ್ಧಿಯಾಗಿದ್ದು, ಇನ್ನೂ ಕೆಲ ರಸ್ತೆಗಳು ಅಭಿವೃದ್ಧಿ ಕಾಣದೇ, ರಸ್ತೆಗಳ ತುಂಬ ತಗ್ಗು, ಗುಂಡಿಗಳಿವೆ. ಹೀಗಾಗಿ ವಾಹನ ಸವಾರರು ಪ್ರಾಯಾಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಮಳೆಗಾಲದಲ್ಲಂತೂ ಸ್ವಲ್ಪ ಮಳೆ ಬಂದರೂ ಈ ರಸ್ತೆಗಳಲ್ಲಿ ನಿರ್ಮಾಣವಾಗಿರುವ ಗುಂಡಿಗಳು ಹಾಗೂ ತಗ್ಗು ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಳ್ಳುತ್ತಿವೆ. ಹೀಗಾಗಿ ಈ ರಸ್ತೆಗಳು ಒಂಥರ ಕೆಸರು ಗದ್ದೆಗಳಾಗಿ ಮಾರ್ಪಡುತ್ತವೆ. ಹೀಗಾಗಿ ಬೈಕ್, ಸೈಕಲ್ ಸವಾರರು ಬೈಕ್-ಸೈಕಲ್ಗಳು ಸ್ಕಿಡ್ ಆಗಿ ಬಿದ್ದು, ಕೈ-ಕಾಲು ಮುರಿದುಕೊಂಡ ಉದಾಹರಣೆಗಳು ಸಹ ಸಾಕಷ್ಟಿವೆ. ರಸ್ತೆ ಅಭಿವೃದ್ಧಿಗಾಗಿ ಈ ಭಾಗದ ಜನತೆ ಹಲವು ಬಾರಿ ಮಹಾನಗರ ಪಾಲಿಕೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಪಾಲಿಕೆ ಸದಸ್ಯರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಚುನಾವಣೆಯ ಸಂದರ್ಭದಲ್ಲಿ ವೋಟ್ ಕೇಳೊಕೆ ಬರೋ ಪಾಲಿಕೆ ಸದಸ್ಯರು ನಮ್ಮ ಗೊಳು ಕೇಳೊದಿರಲಿ, ಸಮರ್ಪಕ ಕುಡಿಯುವ ನೀರು ಪೂರೈಸಲು ಸಹ ಕ್ರಮ ಕೈಗೊಳ್ಳಲ್ಲ ಎಂದು ಆರೋಪಿಸುತ್ತಾರೆ ಜಾಲಿ ನಗರದ ನಾಗರೀಕರು.
ನಗರದ ಹದಗೆಟ್ಟ ರಸ್ತೆಗಳಿಗೆ ಉತ್ತಮ ಉದಾಹರಣೆ ಎಂದರೆ, ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ 9ನೇ ವಾರ್ಡ್ನ ಜಾಲಿ ನಗರದ 1ನೇ ಮುಖ್ಯ ರಸ್ತೆ (ಜಾಲಿನಗರ ಹಾಗೂ ಇಡಬ್ಲ್ಯೂಎಸ್ ಕಾಲೋನಿ ಮಧ್ಯೆ ಇರುವ ರಸ್ತೆ) ಸಂಪೂರ್ಣ ಹದಗಟ್ಟಿದ್ದು, ಈ ರಸ್ತೆ ಮಣ್ಣಿನಿಂದ ಕೂಡಿದೆ. ಮಳೆಗಾಲ ಬಂತೆಂದರೆ ಸಾಕು. ಈ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿ ಬಿಡುತ್ತದೆ. ಈ ರಸ್ತೆಗೆ ಸಂಪರ್ಕ ಕಲ್ಪಿಸುವ ಈಗಾಗಲೇ ಸಿಸಿ ರಸ್ತೆಯಾಗಿ ನಿರ್ಮಾಣವಾಗಿರುವ ರಸ್ತೆಗಳಿಂದ ಮಳೆ ನೀರು ಹರಿದು ಬಂದು ಈ ರಸ್ತೆಗೆ ಸೇರುತ್ತಿದೆ. ಆದ್ದರಿಂದ ಈ ರಸ್ತೆಯಲ್ಲಿರುವ ಗುಂಡಿಗಳಲ್ಲಿ ಮಳೆ ನೀರು ನಿಂತು, ವಾಹನ ಸವಾರರಿಗೆ ರಸ್ತೆ ಸರಿಯಾಗಿ ಕಾಣದ ಕಾರಣ ಗುಂಡಿಯಲ್ಲಿ ಗಾಡಿ ಹೊತ್ತಿಕೊಂಡು ಬಿದ್ದಿದ್ದಾರೆ. ಅಲ್ಲದೆ, ಸಣ್ಣ ಮಕ್ಕಳು ಸಹ ಬಿದ್ದಿರುವ ಉದಾಹರಣೆಗಳಿವೆ.
ಈ ರಸ್ತೆಯ ಸ್ಥಿತಿ ದಾವಣಗೆರೆಯ ಹಲವು ಕೊಳೆಗೇರಿಗಳ ರಸ್ತೆಗಳ ಪರಿಸ್ಥಿತಿಯಾಗಿದೆ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ನಾಗರೀಕರು ಆಗ್ರಹಿಸಿದ್ದಾರೆ.
