ಎಸಿ ಡಾ.ಜಿ.ಸಂತೋಷ್ ಕುಮಾರ್ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ
ಗುಡಿಬಂಡೆ ಭರತ್ ಜಿ.ಎಸ್
ಚಿಕ್ಕಬಳ್ಳಾಪುರ: ಮಕ್ಕಳಿಗೆ ಆಸ್ತಿ ದಾನ ಮಾಡಿ ಬೀದಿಗೆ ಬಿದ್ದಿದ್ದ ವೆಂಕಟೇಶಾಚಾರಿ, ಪದ್ಮಾವತಮ್ಮ ವೃದ್ದ ದಂಪತಿಗಳ ಪರ ಆದೇಶ ನೀಡಿ ಆಸರೆಯಾದ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಎಸಿ ಡಾ.ಜಿ ಸಂತೋಷ್ ಕುಮಾರ್ ಅವರ ಕಾರ್ಯವೈಕರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಬದುಕಿನ ಸಂಧ್ಯಾಕಾಲದಲ್ಲಿ ನೊಂದು, ಬೆಂದವರ ಬಾಳಿಗೆ “ಸಂತೋಷ”ದ ಹೊನಲು ನೀಡಿದ ಚಿಕ್ಕಬಳ್ಳಾಪಯರ ಜಿಲ್ಲೆಯ ಉಪವಿಭಾಗಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್ ಕಾಳಜಿ ಮತ್ತು ಕಾರ್ಯವೈಕರಿಗೆ ಅಭಿನಂದನೆಗಳ ಮಹಾಪುರ ಹರಿದು ಬಂದಿದೆ.
ಹೆಣ್ಣು ಮಕ್ಕಳಾದರೂ ಸಾಕಿ, ಬೆಳಸಿ ಉತ್ತಮ ಬದುಕು ರೂಪಿಸಿಕೊಟ್ಟಿದ್ದರು. ಇಳಿ ವಯಸ್ಸಿನಲ್ಲಿ ಆಸ್ತಿ ನಮಗ್ಯಾಕೆ ಎಂದು ಇದ್ದ ಕೋಟಿ ಬೆಲೆ ಬಾಳುವ ಆಸ್ತಿಯನ್ನೂ ಮಕ್ಕಳಿಗೆ ಹಂಚಿಕೆ ಮಾಡಿದ್ದರು. ಆದರೆ ಹೆತ್ತವರು ಎನ್ನುವುದನ್ನೂ ಮರೆತ ಪುತ್ರಿಯರು ಅವರಿಗೆ ಕಷ್ಟ ನೀಡಿ, ನೆಮ್ಮದಿಯ ಬದುಕಿಗೆ ಭಂಗ ತಂದಿದ್ದರು. ಇದನ್ನು ಗಂಭೀರವಾಗಿ ಪರಿಣಿಸಿದ ದಕ್ಷ ಮತ್ತು ಪ್ರಾಮಾಣಿಕ ಉಪವಿಭಾಧಿಕಾರಿ ಡಾ.ಸಂತೋಷ್ ಕುಮಾರ್ ವೃದ್ದರ ಪರವಾಗಿ ಆದೇಶ ನೀಡುವುದರ ಮೂಲಕ ಆದೇಶ ಪ್ರತಿಯೊಂದಿಗೆ ಸ್ವಾತಂತ್ರ್ಯ ದಿನದಂದು ವೃದ್ದರ ಮನೆಗೆ ತೆರಳಿ ಆದೇಶ ಪ್ರತಿಯನ್ನು ನೀಡುವ ಮೂಲಕ ವೃದ್ದರಿಗೆ ಪುನರ್ ಸ್ವಾತಂತ್ರ್ಯ ನೀಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಅಜಾದ್ ಚೌಕ್ ನ 87 ವರ್ಷದ ವೆಂಕಟೇಶಾಚಾರ್, 67 ವರ್ಷದ ಪದ್ಮಾವತಮ್ಮ ಅವರು ತಮ್ಮ ಮೂವರು ಪುತ್ರಿಯರಿಗೆ ಸರಿ ಸುಮಾರು ಕೋಟಿ ರೂಪಾಯಿ ಬೆಲೆ ಬಾಳುವ ಮನೆಯನ್ನು ದಾನವಾಗಿ ನೀಡಿದ್ದರು. ಆದರೆ ಮಕ್ಕಳು ಬದುಕಿಗೆ ಮುಳ್ಳಾಗಿದ್ದರಿಂದ ನೊಂದ ದಂಪತಿಗಳು ನ್ಯಾಯಕ್ಕಾಗಿ ಕಂದಾಯ ಅಧಿಕಾರಿಗಳ ಮೊರೆ ಹೋಗಿದ್ದರು. ಪರಿಣಾಮ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಚಿಕ್ಕಬಳ್ಳಾಪುರ ಎಸಿ ಡಾ.ಜಿ.ಸಂತೋಷ್ ಕುಮಾರ್ ಹಿರಿಯ ನಾಗರೀಕ ಪೋಷಣೆ ಮತ್ತು ಶ್ರೇಯೋಭಿವೃದ್ದಿ ಹಾಗೂ ಸಂರಕ್ಷಣೆ ಕಾಯ್ದೆ 2007 ರಡಿ ಜೀವನ ನಿರ್ವಹಣೆ ಕಲಂ 23 ರ ಪ್ರಕಾರ
ಮಕ್ಕಳಿಗೆ ಮಾಡಿದ್ದ ದಾನ ಪತ್ರವನ್ನ ರದ್ದುಪಡಿಸಿ, ಪೋಷಕರಿಗೆ ಮಕ್ಕಳು ಮಾಸಿಕ ತಲಾ 7 ಸಾವಿರ ನೀಡುವಂತೆ ಆದೇಶಸಿದ್ದಾರೆ. ಜೊತೆಗೆ ಪೋಷಕರಿಗೆ ಕಿರುಕುಳ ನೀಡದೇ ನೆಮ್ಮದಿಯ ಬದುಕು ರೂಪಿಸುವಂತೆ ಆದೇಶಿಸಿದ್ದಾರೆ.
ಸ್ವಾತಂತ್ರ್ಯ ದಿನದಂದೇ ಆದೇಶ:
ಸ್ವಾತಂತ್ರ್ಯದ ದಿನಾಚರಣೆಯಂದು ಖುದ್ದು ವೃದ್ದ ದಂಪತಿಗಳ ಮನೆಗೆ ತೆರಳಿದ ಎಸಿ ಸಂತೋಷ್ ಕುಮಾರ್ ಹಾಗೂ ಪತ್ನಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಯೂ ಆಗಿರುವ ಡಾ.ಬಿ.ಎಸ್.ಹೇಮಲತಾ ಅವರು ಫಲ ತಾಂಬೂಲದೊಂದಿಗೆ ಆದೇಶ ಪತ್ರ ವೃದ್ದ ದಂಪತಿಗಳಿಗೆ ನೀಡಿದ ಬದುಕಿನ ಭರವಸೆ ತುಂಬಿದ್ದಾರೆ.
ವೃದ್ದರ ಕಣ್ಣಳ್ಳಿ ಆನಂದ ಬಾಷ್ಪ: ಹೆತ್ತ ಮಕ್ಕಳು ರಕ್ತ ಸಂಬಂಧಿಕರೇ ದೂರ ಹಾಕಿದ್ದರೆ ಆದರೆ ಯಾವುದೇ ಸಂಬಂದ ಇಲ್ಲದ ಕಂದಾಯ ಅಧಿಕಾರಿಯ ದಕ್ಷತೆ, ಕಾಳಜಿ, ಸರಳತೆ ಹಾಗೂ ಕಾರ್ಯಕ್ಷಮತೆಗೆ ಮಾರೂ ಹೋದ ವೃದ್ದ ದಂಪತಿಗಳು ಅಧಿಕಾರಿಗಳ ಬದ್ದತೆ, ಬಾಂಧವ್ಯಕ್ಕೆ ಆನಂದ ಬಾಷ್ಪ ಸುರಿಸಿದ್ದಾರೆ.
ವಯಸ್ಸಿನ ಹಂತರವಿಲ್ಲದೆ ನ್ಯಾಯ, ಅನ್ಯಾಯದ ಪರಿ ಇಲ್ಲದೆ, ಜನರ ಸಮಸ್ಯೆಗಳ ಸಾವಿರಾರು ಪೈಲ್ ಗಳನ್ನು ಹಿಂದೆ ಹಾಕಿಕೊಂಡು ಕೆಲಸ ಕಾರ್ಯಕ್ಕೆ ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸಿಕೊಳ್ಳುವ ಅಧಿಕಾರಿಗಳಿಗೆ ಚಿಕ್ಕಬಳ್ಳಾಪುರದ ಉಪ ವಿಭಾಗಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್ ಮಾದರಿಯಾಗಿದ್ದಾರೆ.
ಮಕ್ಕಳಿಗೆ ಮಾಡಿದ್ದ ದಾನ ಪತ್ರವನ್ನು ರದ್ದು ಮಾಡಿಕೊಡುವಂತೆ ವೃದ್ದ ದಂಪತಿಗಳು ಕಳೆದ ವರ್ಷ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಮಕ್ಕಳಿಂದ ತಾವು ಅನುಭವಿಸುತ್ತಿರುವ ನೋವನ್ನು ಪತ್ರಿಕಾ ಹೇಳಿಕೆಯ ಮೂಲಕ ತೋಡಿಕೊಂಡಿದ್ದರು. ಇದನ್ನೆಲ್ಲಾ ಗಮನಿಸಿ ದಾಖೆಲಗಳ ಅನುಸಾರ ಕಾನೂನು ಬದ್ದವಾಗಿ ನೊಂದ ವೃದ್ದ ದಂಪತಿಗಳ ಪರವಾಗಿ ಆದೇಶ ಮಾಡಿದ್ದೇನೆ. ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದಂದು ಅವರ ಮನೆಗೆ ತೆರಳಿ ಆದೇಶ ಪ್ರತಿಯನ್ನು ನೀಡಿ, ನನ್ನ ಜವಾಬ್ದಾರಿ, ಕರ್ತವ್ಯವನ್ನು ನಾನು ನಿರ್ವಹಿಸಿದ್ದೇನೆ.
-ಡಾ.ಜಿ.ಸಂತೋಷ್ ಕುಮಾರ್, ಉಪ ವಿಭಾಗಾಧಿಕಾರಿ ಚಿಕ್ಕಬಳ್ಳಾಪುರ ಜಿಲ್ಲೆ.
