ಹೊಸದುರ್ಗ ತಾಲ್ಲೂಕಿನ ಕೆರೆಗಳ ಅಭಿವೃದ್ಧಿಗೆ ಮಠಾಧೀಶರ ಸಂಕಲ್ಪ

ಸಾಣೇಹಳ್ಳಿ

     ಇಲ್ಲಿನ ಶ್ರೀಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಸಭೆ ಸೇರಿದ್ದ ಹೊಸದುರ್ಗ ತಾಲ್ಲೂಕಿನ ಮಠಾಧೀಶರಾದ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮಿಗಳು, ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮಿಗಳು ಮತ್ತು ಕುಂಚಿಟಿಗ ಮಠದ ಶ್ರೀ ಬಸವ ಶಾಂತವೀರ ಸ್ವಾಮಿಗಳು ಇಡೀ ನಾಡು ಕಳೆದ ನಾಲ್ಕೈದು ವರ್ಷಗಳಿಂದ ಬರದಿಂದ ತತ್ತರಿಸಿದೆ.

       ಅದರಲ್ಲೂ ಹೊಸದುರ್ಗ ತಾಲ್ಲೂಕಿನ ತೋಟ-ತುಡಿಕೆಗಳು ಒಣಗಿ ನಿಂತಿವೆ. ರೈತರು ಕಂಗಾಲಾಗಿದ್ದಾರೆ. ಜನ-ಜಾನುವಾರುಗಳ ಕುಡಿಯುವ ನೀರಿಗೂ ತತ್ವಾರ ಪಡುವಂತಾಗಿದೆ. ಇನ್ನು ಪ್ರಾಣಿ-ಪಕ್ಷಿಗಳ ಸ್ಥಿತಿಯಂತೂ ದಯನೀಯವಾಗಿದೆ. ಇಂಥ ಸಂದರ್ಭದಲ್ಲಿ ತಾಲ್ಲೂಕಿನ ಮಠಾಧೀಶರಾದ ನಮ್ಮ ಮೇಲೆ ನೈತಿಕ ಜವಾಬ್ದಾರಿ ಹೆಚ್ಚಾಗಿದೆ. ಜನರಲ್ಲಿ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಪರಿಹಾರದ ಕ್ರಿಯಾಯೋಜನೆಗಳನ್ನೂ ಹಮ್ಮಿಕೊಳ್ಳಬೇಕಿದೆ.

      ಕೇವಲ ಸರಕಾರದ ಭರವಸೆಗಳನ್ನು, ಯೋಜನೆಗಳನ್ನು ನಂಬಿ ಕುಳಿತರೆ ಸಾಲುವುದಿಲ್ಲ. ಅವು ಎಷ್ಟರಮಟ್ಟಿಗೆ ಫಲಪ್ರದವಾಗುತ್ತವೆ ಎನ್ನುವುದು ಎಲ್ಲರಿಗೂ ತಿಳಿದ ವಾಸ್ತವ ಸಂಗತಿ. ಅದರಲ್ಲೂ ಇದು ಲೋಕಸಭಾ ಚುನಾವಣಾ ಸಮಯ. ಶಾಸಕಾಂಗ ಮತ್ತು ಕಾರ್ಯಾಂಗ ಚುನಾವಣೆಯಲ್ಲಿ ಮುಳುಗಿದೆ. ಇಂಥ ಸಂದರ್ಭದಲ್ಲಿ ಅವರಿವರನ್ನು ದೂರುತ್ತ ಸುಮ್ಮನೆ ಕುಳಿತುಕೊಳ್ಳುವುದು ಸರಿಯಲ್ಲ. ಮೊದಲಿಗೆ ಸಕಲ ಜೀವಜಂತುಗಳ ಮೂಲ ದ್ರವ್ಯ ನೀರಿನ ಕಡೆಗೆ ತುರ್ತಾಗಿ ಗಮನ ಹರಿಸಬೇಕಾಗಿದೆ.

        ಈ ನಿಟ್ಟಿನಲ್ಲಿ ಮಠಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿಕೊಂಡು ಸಕ್ರಿಯವಾಗಬೇಕಿದೆ. ಮೊದಲು ನಾಲ್ಕೂ ಮಠಗಳಿಂದಲೂ ತಲಾ ಒಂದು ಲಕ್ಷ ರೂಪಾಯಿಯಂತೆ ನಾಲ್ಕು ಲಕ್ಷ ರೂಪಾಯಿಗಳನ್ನು ಮೂಲನಿಧಿಯಾಗಿ ತೊಡಗಿಸುವುದು. ಸರಕಾರದ ಯೋಜನೆಗಳ, ದಾನಿಗಳ, ತಂತ್ರಜ್ಞರ ನೆರವಿನಿಂದ ನಾಲ್ಕು ಹೋಬಳಿಗಳ ನಾಲ್ಕು ಕೆರೆಗಳನ್ನು ಗುರುತಿಸಿ ಕೂಡಲೇ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಳ್ಳುವುದು. ಇವುಗಳ ಕಾರ್ಯ ಮುಗಿಯುತ್ತಲೇ ಮತ್ತೆ ನಾಲ್ಕು ಕೆರೆಗಳ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳುವುದು. ಜನರಲ್ಲಿ ನೀರಿನ ಮಿತವ್ಯಯದ ಬಗ್ಗೆ ಜಾಗೃತಿ ಮೂಡಿಸುವುದು.

          ಮಳೆಗಾಲ ಆರಂಭವಾಗುತ್ತಲೇ ಕೆರೆಗಳ ಸುತ್ತಮುತ್ತ, ಸರಕಾರಿ ಖಾಲಿ ಜಾಗಗಳಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಕೆಲಸ ಮಾಡುವುದು. ಈ ನಿಟ್ಟಿನಲ್ಲಿ ಯೋಚಿಸಿ-ಯೋಜಿಸಲು ಇದೇ ಏಪ್ರಿಲ್ ಒಂದರಂದು ಸಂಜೆ ನಾಲ್ಕು ಗಂಟೆಗೆ ಹೊಸದುರ್ಗದ ಶ್ರೀ ಕುಂಚಿಟಗ ಮಠದಲ್ಲಿ ಮತ್ತೊಂದು ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ಹಾಲಿ, ಮಾಜಿ ಶಾಸಕರೂ ಸೇರಿದಂತೆ ಜನಪ್ರತಿನಿಧಿಗಳು, ಸ್ವಯಂ ಸೇವಕರು ಮತ್ತು ತಂತ್ರಜ್ಞರು ಸೇರಿ ಕಾರ್ಯ-ಯೋಜನೆಯ ಸಾಧಕ-ಬಾಧಕಗಳನ್ನು ಚರ್ಚಿಸಿ ಮೊದಲ ನಾಲ್ಕು ಕೆರೆಗಳನ್ನು ಆಯ್ಕೆ ಮಾಡಿ ಕೂಡಲೇ ಕಾರ್ಯರೂಪಕ್ಕೆ ತರಲಾಗುವುದು ಎಂದರು.

        ಇದೇ ಸಂದರ್ಭದಲ್ಲಿ ಇತ್ತೀಚೆಗಷ್ಟೇ ಚಿತ್ರದುರ್ಗ ಜಿಲ್ಲಾ ಪಂಚಾಯತಿ ಅಧ್ಯಕ್ಷೆಯಾಗಿ ಆಯ್ಕೆಯಾದ ಬಾಗೂರು ಕ್ಷೇತ್ರದ ಜಿ ಎಂ ವಿಶಾಲಾಕ್ಷಿ ನಟರಾಜ್ ಎಲ್ಲ ಶ್ರೀಗಳ ಆಶೀರ್ವಾದ ಪಡೆದುಕೊಂಡರು.ಶಿವನಕೆರೆ ಬಸವಲಿಂಗಪ್ಪ, ಎಸ್ ಕೆ ಪರಮೇಶ್ವರಯ್ಯ, ಹೆಚ್ ಎಸ್ ದ್ಯಾಮೇಶ್ ಚರ್ಚೆಯಲ್ಲಿ ಭಾಗವಹಿಸಿದ್ದರು. ಶ್ರೀ ಗುರುಪಾದೇಶ್ವರ ಪ್ರೌಢಶಾಲೆಯ 2018-19 ರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಶ್ರೀಗಳ ಜೊತೆ ಗ್ರೂಫ್ ಫೋಟೋ ತೆಗೆಸಿಕೊಂಡರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link