ಹೃದಯಾಘಾತ ಸರಣಿ ಮುಂದುವರಿಕೆ, ನಿನ್ನೆ ಒಂದೇ ದಿನ ರಾಜ್ಯದಲ್ಲಿ 11 ಬಲಿ

ಬೆಂಗಳೂರು :

    ರಾಜ್ಯದಲ್ಲಿ ಹೃದಯಾಘಾತದಿಂದ  ಸಾವಿಗೀಡಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ನಿನ್ನೆ ಒಂದೇ ದಿನ ಕರ್ನಾಟಕದಲ್ಲಿ  ಹೃದಯಾಘಾತದಿಂದ 11 ಮಂದಿ ಮೃತಪಟ್ಟಿದ್ದಾರೆ. ತುಮಕೂರಿನಲ್ಲಿ  ಮೂವರು ನಿನ್ನೆ ಒಂದೇ ದಿನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತುಮಕೂರಿನ ಹನುಮಂತಪುರದ ನಿವಾಸಿಗಳಾದ ಜಯಂತ್ (31) ಹಾಗೂ ಶ್ರೀಧರ್ (52) ಸೋಮವಾರ ಹೃದಯಸ್ತಂಭನದಿಂದ  ಸಾವನ್ನಪ್ಪಿದ್ದಾರೆ.

  ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಶಾಂತವ್ವ ತೋಟಗೇರ (56) ಮಗಳನ್ನು ಗಂಡನ ಮನೆಯಿಂದ ಕರೆದುಕೊಂಡು ಬರಲು ಸಮೀಪದ ಹೆಬ್ಬಳ್ಳಿ ಗ್ರಾಮಕ್ಕೆ ಹೋದಾಗ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಹುಬ್ಬಳ್ಳಿ ಕೆಎಂಸಿಆರ್‌ಐಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

  ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನಲ್ಲಿ ಸೋಮವಾರ ಒಂದೇ ದಿನ ಮೂವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಪಟ್ಟಣದ ನಾರಾಯಣ ರಾಯ್ಕರ (52), ಬಸಪ್ಪ ಸತ್ಯಪ್ಪ ಬಾಗಲಕೋಟಿ (78) ತಾಲೂಕಿನ ಬಸಾಪೂರ ಗ್ರಾಮದ ಅಣ್ಣಪೂರ್ಣಮ್ಮ ಯಲ್ಲಪ್ಪ ಚವಡಿ (56) ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಪಗಡದಿನ್ನಿ ಕ್ಯಾಂಪ್‌ ನಿವಾಸಿ ಶರಣಬಸವ (30) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ

  ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಮೆಣಸಮಕ್ಕಿ ಗ್ರಾಮದ ರೈತ ಲಕ್ಷ್ಮಣ (52) ಎನ್ನುವವರು ಸಾವನಪ್ಪಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮೆಣಸಮಕ್ಕಿ ಗ್ರಾಮದ ನಿವಾಸಿಯಾಗಿರುವ ರೈತ ಲಕ್ಷ್ಮಣ ಅವರು ನಿನ್ನೆ ಜಮೀನಿನಲ್ಲಿ ಕೆಲಸ ಮಾಡಿ ಮನೆಗೆ ಬಂದಿದ್ದಾಗ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಲಕ್ಷ್ಮಣ ಕುಟುಂಬಸ್ಥರು ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆಂಬುಲೆನ್ಸ್ ಬರುವಷ್ಟರಲ್ಲಿ ರೈತ ಲಕ್ಷ್ಮಣ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಳೆದ 46 ದಿನಗಳಲ್ಲಿ 38 ಮಂದಿ ಹೃದಯಾಘಾತದಿಂದ ಹಾಸನ ಜಿಲ್ಲೆ ಒಂದರಲ್ಲೇ ಸಾವನ್ನಪ್ಪಿದ್ದಾರೆ.

Recent Articles

spot_img

Related Stories

Share via
Copy link