
ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಸಿಹಿಸುದ್ದಿಯೊಂದನ್ನು ನೀಡಿದ್ದು, 11 ಇ, ಆಲಿನೇಷನ್ ಪೂರ್ವನಕ್ಷೆ, ಮತ್ತು ತತ್ಕಾಲ್ ಪೋಡಿ ಅರ್ಜಿಗಳಿಗೆ ನಿಗದಿಪಡಿಸಲಾದ ಅರ್ಜಿ ಶುಲ್ಕಗಳನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ಎಸ್ ಗುರುಮೂರ್ತಿ ಆದೇಶ ಹೊರಡಿಸಿದ್ದು, ಸಾರ್ವಜನಿಕರಿಂದ ಅಳತೆಗಾಗಿ ಮೋಜಿಣಿ ವ್ಯವಸ್ಥೆಯಡಿ ಸ್ವೀಕರಿಸುವ 11 ಇ, ಆಲಿನೇಷನ್ ಪೂರ್ವನಕ್ಷೆ, ಮತ್ತು ತತ್ಕಾಲ್ ಪೋಡಿ ಅರ್ಜಿಗಳಿಗೆ ನಿಗದಿಪಡಿಸಲಾದ ಅರ್ಜಿ ಶುಲ್ಕಗಳನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಅದೇ ರೀತಿ ಸಾರ್ವಜನಿಕರಿಂದ ಅಳತೆಗಾಗಿ ಮೋಜಿಣಿ ವ್ಯವಸ್ಥೆಯಡಿಯಲ್ಲಿ ಸ್ವೀಕರಿಸುವ ಹದ್ದುಬಸ್ತು ಅರ್ಜಿಗಳಿಗೆ ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶಗಳಿಗೆ ವಿಧಿಸಲಾಗುತ್ತಿದ್ದ ಶುಲ್ಕವನ್ನು ಕೂಡ ಇಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 131(ಬಿ) ಅನ್ವಯ ಮೋಜಿಣಿಯಲ್ಲಿ ಹದ್ದುಬಸ್ತು ಅರ್ಜಿ ಸಲ್ಲಿಸಲು ಗ್ರಾಮೀಣ ಪ್ರದೇಶದಲ್ಲಿ 2 ಎಕರೆವರೆಗೂ 500 ರೂ.ಮತ್ತು 2 ಎಕರೆಗೆ ಹೆಚ್ಚುವರಿ ಇದ್ದರೆ ಪ್ರತಿ ಎಕರೆಗೆ 300 ರೂ. ಶುಲ್ಕ ನಿಗದಿ ಮಾಡಲಾಗಿದೆ.
ನಗರ ಪ್ರದೇಶದಲ್ಲಿ ಎಕರೆ ವರೆಗೆ 2 ಸಾವಿರ ರೂ. ಮತ್ತು 2 ಎಕರೆಗಿಂತ ಹೆಚ್ಚಿದ್ದರೆ ಪ್ರತಿ ಎಕರೆಗೆ ಹೆಚ್ಚುವರಿ ಶುಲ್ಕ 400 ರೂ., ನೋಟಿಸ್ ಶುಲ್ಕ 25 ರೂ. ನಿಗದಿ ಮಾಡಿ ಸರ್ಕಾರ ಆದೇಶಿಸಿದೆ.
ಅದೇ ರೀತಿ 11ಇ ನಕ್ಷೆ, ಅಲೈನೇಷನ್ ಪೂರ್ವ ನಕ್ಷೆ ಮತ್ತು ತತ್ಕಾಲ್ ಪೋಡಿಗೆ ಅರ್ಜಿ ಸಲ್ಲಿಸಲು ಗ್ರಾಮೀಣ ಪ್ರದೇಶದಲ್ಲಿ 2 ಎಕರೆವರೆಗೂ 1500 ರೂ. ಮತ್ತು 2 ಎಕರೆಗಿಂತ ಹೆಚ್ಚಿದ್ದರೆ ಪ್ರತಿ ಎಕರೆಗೆ ಹೆಚ್ಚುವರಿ ಶುಲ್ಕ 400 ರೂ. ಹಾಗೂ ನಗರ ಪ್ರದೇಶದಲ್ಲಿ 2 ಎಕರೆ ವರೆಗೆ 2500 ರೂ. ಮತ್ತು 2 ಎಕರೆಗಿಂತ ಹೆಚ್ಚು ಇದ್ದರೆ ಪ್ರತಿ ಎಕರೆಗೆ ಹೆಚ್ಚುವರಿ 1 ಸಾವಿರ ರೂ. ನಿಗದಿ ಮಾಡಲಾಗಿದೆ.
ಇನ್ನೂ, ಶಾಕರಾದ ದಿನೇಶ್ ಗೂಳಿಗೌಡ ರವರು ಮನವಿ ಮಾಡಿದ ಬೆನ್ನಲ್ಲೆ ಎಚ್ಚೆತ್ತ ರಾಜ್ಯ ಸರ್ಕಾರವು ಸರ್ವೆ ಶುಲ್ಕದ ಹಿಂದಿನ ಆದೇಶವನ್ನು ಹಿಂಪಡೆದಿದ್ದು, ಪರಿಷ್ಕೃತ ಆದೇಶವನ್ನು ಹೊರಡಿಸಿದೆ.
ಹಾಲಿ ಆದೇಶದ ಪ್ರಕಾರ ಗ್ರಾಮೀಣ ಭಾಗದಲ್ಲಿ ಸರ್ವೆಗೆ ಎಕರೆಗೆ 3500 ರೂಪಾಯಿ ಹಾಗೂ 2 ಎಕರೆಗಿಂತ ಮೇಲ್ಪಟ್ಟಿದ್ದರೆ ಹೆಚ್ಚುವರಿಯಾಗಿ ಪ್ರತಿ ಎಕರೆಗೆ 400 ರೂಪಾಯಿಯಂತೆ ದರ ನಿಗದಿ ಮಾಡಿ ಆದೇಶಿಸಿದೆ.
ಇನ್ನು ನಗರ ಪ್ರದೇಶಗಳಲ್ಲಿ 2 ಎಕರೆವರೆಗೆ 2500 ರೂ. ಇದ್ದು, ಅದಕ್ಕಿಂತ ಮೇಲ್ಪಟ್ಟಿದ್ದರೆ ಪ್ರತಿ ಎಕರೆಗೆ 1000 ರೂ.ನಂತೆ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗಿದೆ. ಸರ್ಕಾರವು ಶುಲ್ಕವನ್ನು ಇಳಿಕೆ ಮಾಡಿದ್ದಕ್ಕೆ ಶಾಸಕರಾದ ದಿನೇಶ್ ಗೂಳಿಗೌಡ ಅಭಿನಂದನೆ ಸಲ್ಲಿಸಿದ್ದಾರೆ.
ಸರ್ವೆ ಶುಲ್ಕವನ್ನು ನೂರ ಹತ್ತು ಪಟ್ಟು ಹೆಚ್ಚಿಸಿ ಆದೇಶಿಸಿದ್ದ ರಾಜ್ಯ ಸರ್ಕಾರವು ಇದೀಗ ಆ ಶುಲ್ಕವನ್ನು ಪರಿಷ್ಕರಣೆ ಮಾಡಿ ಶೇಕಡಾ 50ಕ್ಕಿಂತ ಕಡಿಮೆ ಮಾಡಿರುವುದು ಸ್ವಾಗತಾರ್ಹ ಕ್ರಮವಾಗಿದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರನ್ನು ಹಾಗೂ ಕಂದಾಯ ಸಚಿವರಾದ ಆರ್. ಅಶೋಕ್ ಅವರನ್ನು ಅಭಿನಂದಿಸುವುದಾಗಿ ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕರಾದ ದಿನೇಶ್ ಗೂಳಿಗೌಡ ಅವರು ಹೇಳಿದ್ದಾರೆ.
ಗ್ರಾಮೀಣ ಭಾಗದಲ್ಲಿ ಸರ್ವೇ ಮಾಡಲು ಎಕರೆಗೆ 35 ರೂ. ಇದ್ದ ಸರ್ವೇ ಶುಲ್ಕವನ್ನು ರಾಜ್ಯ ಸರ್ಕಾರವು ಇತ್ತೀಚೆಗೆ ದಿಢೀರನೆ 3500ರಿಂದ 4000 ರೂ. ಹಾಗೂ ನಗರ ಭಾಗಕ್ಕೆ 5 ಸಾವಿರ ರೂಪಾಯಿಗೆ ಏರಿಸಿ ಶುಲ್ಕವನ್ನು ವಿಧಿಸಿತ್ತು.
ಸರ್ಕಾರದ ಈ ಕ್ರಮದಿಂದ ರಾಜ್ಯದ ರೈತರಿಗೆ ಬಹಳ ತೊಂದರೆ ಆಗುತ್ತಿದ್ದು, ಮತ್ತಷ್ಟು ಸಂಕಷ್ಟವನ್ನು ಅನುಭವಿಸುವ ಪರಿಸ್ಥಿತಿ ಬಂದೊದಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಶುಲ್ಕವನ್ನು ಇಳಿಸಬೇಕೆಂದು ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕರಾದ ದಿನೇಶ್ ಗೂಳಿಗೌಡ ರವರು ಮುಖ್ಯಮಂತ್ರಿಗಳಿಗೆ ಹಾಗೂ ಕಂದಾಯ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
