12ಕ್ಕೂ ಹೆಚ್ಚು ಐಷಾರಾಮಿ ಕಾರುಗಳ ಕಿಟಕಿಗಳು ಪುಡಿಪುಡಿ…!

ಭೋಪಾಲ್‍: 

ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಲ್ಲಿಸಿದ್ದ 12ಕ್ಕೂ ಹೆಚ್ಚು ಐಷಾರಾಮಿ ಕಾರುಗಳ ಕಿಟಕಿಗಳನ್ನು ಒಡೆದು ವ್ಯಕ್ತಿಯೊಬ್ಬ ಸಿಕ್ಕಿಬಿದ್ದ ವಿಚಿತ್ರ ಘಟನೆ ಜಬಲ್ಪುರದಲ್ಲಿ ನಡೆದಿದೆ.ಹಾನಿಗೊಳಗಾದ ಡಜನ್ ಗಟ್ಟಲೆ ಕಾರುಗಳಲ್ಲಿ ನಿವೃತ್ತ ಸಿಎಸ್ಪಿಯ ಕಾರು ಕೂಡ ಸೇರಿದೆ ಎನ್ನಲಾಗಿದೆ. ಈ ಘಟನೆಯ ದೃಶ್ಯ ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಗಮನಿಸಿದ ಪೊಲೀಸರು ಎಫ್ಐಆರ್ ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಗುರುವಾರ (ಏಪ್ರಿಲ್ 24) ಬೆಳಿಗ್ಗೆ 8 ಗಂಟೆ ಸುಮಾರಿಗೆ ಜಬಲ್ಪುರದ ಪಾಂಡೆ ಚೌಕ್‍ನಲ್ಲಿ ಈ ಘಟನೆ ನಡೆದಿದೆ.

ಮೂಲಗಳ ಪ್ರಕಾರ, ನಿವೃತ್ತ ಸಿಎಸ್ಪಿ ಹರಿಯೋಮ್ ಶರ್ಮಾ ನಿಮಾರ್ ಗಂಜ್ ತರಕಾರಿ ಮಾರುಕಟ್ಟೆಗೆ ಬಂದು ಪಾಂಡೆ ಚೌಕ್ ಬಳಿ ತಮ್ಮ ಕಾರನ್ನು ನಿಲ್ಲಿಸಿದ್ದಾರಂತೆ. ಅವರು ತರಕಾರಿಗಳನ್ನು ಖರೀದಿಸುತ್ತಿದ್ದಾಗ, ಸ್ಥಳೀಯ ವ್ಯಕ್ತಿಯೊಬ್ಬ ಕಬ್ಬಿಣದ ರಾಡ್‍ ಹಿಡಿದುಕೊಂಡು ಯಾವುದೇ ಕಾರಣವಿಲ್ಲದೆ ನಿಲ್ಲಿಸಿದ್ದ ಕಾರುಗಳ ಕಿಟಕಿಗಳನ್ನು ಪುಡಿಮಾಡಲು ಶುರುಮಾಡಿದ್ದಾನೆ ಕೆಲವೇ ನಿಮಿಷಗಳಲ್ಲಿ, ಅವನು ನಿವೃತ್ತ ಸಿಎಸ್ಪಿಯ ಕಾರು ಸೇರಿದಂತೆ ಅರ್ಧ ಡಜನ್‍ಗೂ ಹೆಚ್ಚು ವಾಹನಗಳ ಕಿಟಕಿಗಳನ್ನು ಒಡೆದು ಹಾಕಿದ್ದಾನೆ. ಘಟನೆಯ ನಂತರ ಕೆಲವರು ಧೈರ್ಯ ಮಾಡಿ ಆ ವ್ಯಕ್ತಿಯನ್ನು ಹಿಡಿದಿದ್ದಾರೆ. ಅವರು ಅವನ ಕೈಯಲ್ಲಿದ್ದ ಕಬ್ಬಿಣದ ರಾಡ್ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.ಆರೋಪಿಯ ಮೇಲೆ ಎಫ್ಐಆರ್ ದಾಖಲಾಗಿದ್ದು, ಆತನ ಕೃತ್ಯದ ಹಿಂದಿನ ಕಾರಣವನ್ನು ಕಂಡುಹಿಡಿಯಲು ಪೊಲೀಸರು ಆತನ ವಿಚಾರಣೆ ನಡೆಸಿದ್ದಾರೆ. ಈ ಘಟನೆಯ ಬಗ್ಗೆ ಕಾರು ಮಾಲೀಕರು ದೂರು ದಾಖಲಿಸಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.

ಜಬಲ್ಪುರದಲ್ಲಿ ಈ ರೀತಿಯ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಜಬಲ್ಪುರದ ನಿರ್ಜನ ಬೀದಿಗಳಲ್ಲಿ, ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ನಾಲ್ವರು ಯುವಕರು ಬೀದಿಗಳಲ್ಲಿ ತಿರುಗಾಡುತ್ತಾ 12 ಕಾರುಗಳ ಗಾಜುಗಳನ್ನು ಒಡೆದಿದ್ದಾರೆ. ಆರೋಪಿಗಳ ಈ ಕೃತ್ಯವು ಕಾಲೋನಿಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಎಲ್ಲಾ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ರಂಜಿ ಪೊಲೀಸ್ ಠಾಣೆ ಪ್ರದೇಶದ ನಯೀ ಬಸ್ತಿ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ಹುಟ್ಟುಹಬ್ಬದ ಸೆಲೆಬ್ರೆಷನ್‍ ವೇಳೆ ನಡೆದ ಮದ್ಯದ ಪಾರ್ಟಿಯ ನಂತರ ನಾಲ್ವರು ಯುವಕರು ತಡರಾತ್ರಿ ನಗರದ ಬೀದಿಗಳಲ್ಲಿ ತಿರುಗಾಡಿದ್ದು, ಕುಡಿದ ಮತ್ತಿನಲ್ಲಿದ್ದ ಆರೋಪಿಗಳು ಬೀದಿಗಿಳಿದು ಬಿಜೆಪಿ ಕಾರ್ಪೊರೇಟರ್ ಮತ್ತು ಸರ್ಕಾರಿ ಅಧಿಕಾರಿ ಸೇರಿದಂತೆ ಹಲವಾರು ವಾಹನಗಳ ಗಾಜುಗಳನ್ನು ಒಡೆದಿದ್ದಾರೆ.