ದಾವಣಗೆರೆ:
ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಒಟ್ಟು ೧೪,೦೪೮ ವಿದ್ಯಾರ್ಥಿಗಳು ದಾವಣಗೆರೆ ವಿಶ್ವವಿದ್ಯಾನಿಲಯದ ಹನ್ನೊಂದನೇ ಘಟಿಕೋತ್ಸವದಲ್ಲಿ ಪದವಿ ಪಡೆಯಲಿದ್ದಾರೆ. ೪೬ ವಿದ್ಯಾರ್ಥಿಗಳು ೮೭ ಚಿನ್ನದ ಪದಕ ಪಡೆದರೆ, ೫೭ ಸಂಶೋಧನಾ ವಿದ್ಯಾರ್ಥಿಗಳು ಪಿಎಚ್.ಡಿ. ಪದವಿಯನ್ನು ಪಡೆಯಲಿದ್ದಾರೆ.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಅವರು ಮಾತನಾಡಿ, ಈ ಬಾರಿ ಘಟಿಕೋತ್ಸವದಲ್ಲಿ ೨೧ ಮಹಿಳೆಯರು ಮತ್ತು ೩೬ ಪುರುಷರು ಸೇರಿ ಒಟ್ಟು ೫೭ ಜನರು ಪಿಎಚ್.ಡಿ. ಪದವಿ ಪಡೆಯಲಿದ್ದಾರೆ. ಒಟ್ಟು ೨೩ ವಿವಿಧ ವಿಭಾಗಗಳಲ್ಲಿ ಸಂಶೋಧನೆ ನಡೆಸಿದ್ದಾರೆ. ಆ ಮೂಲಕ ವಿಶ್ವವಿದ್ಯಾನಿಲಯವು ಶಿಕ್ಷಣದ ಜೊತೆಗೆ ಸಂಶೋಧನೆಯಲ್ಲಿಯೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಗೌರವ ಪಡೆಯಲು ಸಾಧ್ಯವಾಗಿದೆ.
ಕಳೆದ ಶೈಕ್ಷಣಿಕ ವರ್ಷದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಒಟ್ಟು ೮೭ ಸ್ವರ್ಣ ಪದಕಗಳಿದ್ದು, ೩೫ ವಿದ್ಯಾರ್ಥಿನಿಯರು ಮತ್ತು ೧೧ ಪುರುಷರು ಸೇರಿ ಒಟ್ಟು ೪೬ ವಿದ್ಯಾರ್ಥಿಗಳು ಪದಕಗಳನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ಈ ಬಾರಿಯೂ ವಿದ್ಯಾರ್ಥಿನಿಯರೇ ಚಿನ್ನದ ಗಳಿಕೆಯಲ್ಲಿ ಮೇಲುಗೈ ಸಾಧಿಸಿದ್ದಾರೆ. ಇದರಲ್ಲಿ ಸ್ನಾತಕ ಪದವಿಯ ೯ ಮತ್ತು ಸ್ನಾತಕೋತ್ತರ ಪದವಿಯ ೨೬ ವಿದ್ಯಾರ್ಥಿನಿಯರು ಈ ಸಾಧನೆ ಮಾಡಿದ್ದಾರೆ.
ಕಳೆದ ಶೈಕ್ಷಣಿಕ ವರ್ಷದ ಸ್ನಾತಕ ಪದವಿಯ ವಿವಿಧ ಕೋರ್ಸ್ಗಳಲ್ಲಿ ಒಟ್ಟು ೧೨,೧೨೯ ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ. ಅವರಲ್ಲಿ ೭,೬೪೫ ಮಹಿಳೆಯರು ಮತ್ತು ೪,೪೪೮ ಪುರುಷರು ಪದವೀಧರರಾಗಲಿದ್ದಾರೆ. ಅಲ್ಲದೆ ಸ್ನಾತಕ ಪದವಿಯ ತೇರ್ಗಡೆ ಫಲಿತಾಂಶ ಶೇ ೬೧.೧೪ ರಷ್ಟಾಗಿದೆ.ಇನ್ನು ವಿಶ್ವವಿದ್ಯಾನಿಲಯ ೨೪ ಕೋರ್ಸ್ಗಳಲ್ಲಿ ಒಟ್ಟು ೧,೯೧೯ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆಯಲು ಅರ್ಹರಾಗಿದ್ದಾರೆ. ಇವರಲ್ಲಿ ೧,೧೯೨ ಮಹಿಳೆಯರು ಮತ್ತು ೭೨೭ ಪುರುಷ ವಿದ್ಯಾರ್ಥಿಗಳು ಸೇರಿದ್ದಾರೆ. ಸ್ನತಕೋತ್ತರ ಪದವಿಯಲ್ಲಿ ಶೇ ೯೬.೧೪ರಷ್ಟು ಫಲಿತಾಂಶ ಬಂದಿದೆ.
ಸ್ನಾತಕೋತ್ತರ ಪದವಿಯಲ್ಲಿ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಐ.ಕೆ.ರಿಯಾ ೬ ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಸ್ನಾತಕ ಪದವಿಯಲ್ಲಿ ದಾವಣಗೆರೆ ಎವಿಕೆ ಕಾಲೇಜಿನ ರಕ್ಷಾ ವಿ.ಅಂಗಡಿ (ಬಿಎಸ್ಸಿ), ಹೊಳಲ್ಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಸ್.ಗಂಗಮ್ಮ (ಬಿ.ಎ), ಚಿತ್ರದುರ್ಗ ಎಸ್.ಆರ್.ಎಸ್ ಶಿಕ್ಷಣ ಮಹಾವಿದ್ಯಾಲಯದ ಎನ್.ಪಿ.ಭವ್ಯಶ್ರೀ (ಶಿಕ್ಷಣ) ಅವರು ತಲಾ ಮೂರು ಪದಕಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಸ್ನಾತಕೋತ್ತರ ಪದವಿಯಲ್ಲಿ ಅರ್ಥಶಾಸಸ್ತ್ರ ವಿಭಾಗದ ಆರ್.ಟಿ. ಶಶ್ವಂತ ಮತ್ತು ವ್ಯವಹಾರ ನಿರ್ವಹಣೆ ವಿಭಾಗದ ಎಸ್.ಜಿ. ಸೌಂದರ್ಯ ತಲಾ ನಾಲ್ಕು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಕೆ.ಸ್ನೇಹಾ (ಇಂಗ್ಲಿಷ್), ಸಿ.ಎನ್. ಅಕ್ಷತಾ (ಕನ್ನಡ), ವರ್ಷಾ ಸಣ್ಣಪ್ಪನವರ (ಜೀವರಸಾಯನ ವಿಜ್ಞಾನ), ಡಿ.ಶ್ರೀಕಾಂತ ಅಂಗಡಿ (ರಸಾಯನಶಾಸ್ತç), ಗೌರಿ ಮಣ್ಣೂರ (ಗಣಿತಶಾಸ್ತ್ರ), ಎಚ್. ಮೇಘನಾ (ಭೌತಶಾಸ್ತ್ರ), ಕೆ.ಸಿಂಧು (ಜೀವಶಾಸ್ತ್ರ) ಅವರು ತಲಾ ಮೂರು ಚಿನ್ನದ ಪದಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಆರ್.ಲಕ್ಷ್ಮಣ (ಪತ್ರಿಕೋದ್ಯಮ), ಸಿ.ಗುರುಪ್ರಸಾದ (ಬಿವಿಎ), ಎವಿಕೆ ಕಾಲೇಜಿನ ಖುಷಿ ಕೋಥಾರಿ (ಬಿಕಾಂ), ಚಿತ್ರದುರ್ಗ ಎಸ್ಆರ್ಎಸ್ ಶಿಕ್ಷಣ ಕಾಲೇಜಿನ ಇ.ಚೈತ್ರಾ (ಶಿಕ್ಷಣ), ಆರ್.ಅಂಜು (ಎಂ.ಪಿಇಡಿ), ಎನ್.ಎನ್.ಯಶ್ವಂತೆ (ಜೈವಿಕ ತಂತ್ರಜ್ಞಾನ), ಎ.ಪ್ರೀತಿ (ಸಸ್ಯಶಾಸ್ತ್ರ), ಶರ್ಮೀಳಾ (ಕಂಪ್ಯೂಟರ್ ವಿಜ್ಞಾನ), ರುಚಿತಾ ಪಾಟೀಲ (ಸೂಕ್ಷ್ಮಜೀವ ವಿಜ್ಞಾನ), ಬಾಪೂಜಿ ಹೈಟೆಕ್ ಕಾಲೇಜಿನ ಎಚ್.ಟಿ. ಶ್ರವಣಕುಮಾರಿ (ಬಿಸಿಎ) ಅವರು ತಲಾ ಎರಡು ಚಿನ್ನದ ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
