ತ್ರಿವೇಣಿ ಸಂಗಮದಲ್ಲಿ ಕಾಲ್ತುಳಿತ; 15 ಮಂದಿ ಸಾವು ಶಂಕೆ….!

ಪ್ರಯಾಗ್​ರಾಜ್

    ಮಹಾಕುಂಭ ಮೇಳದ ಮೌನಿ ಅಮಾವಾಸ್ಯೆ ವೇಳೆ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಪವಿತ್ರ ಸ್ನಾನಕ್ಕೆ ಭಕ್ತಸಾಗರವೇ ಹರಿದಿದೆ. ಮಂಗಳವಾರ ಮಧ್ಯರಾತ್ರಿಯ ಬಳಿಕ ಜನದಟ್ಟಣೆ, ನೂಕು ನುಗ್ಗಲಿನಿಂದಾಗಿ ಕಾಲ್ತುಳಿತ ಉಂಟಾಗಿದ್ದು, ಈ ವೇಳೆ ಹಲವರು ಗಾಯಗೊಂಡು, 15 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

   ಜನವರಿ 13ರಂದು ಆರಂಭವಾದ ಮಹಾಕುಂಭ ಮೇಳಕ್ಕೆ ಈ ಬಾರಿ ಅತ್ಯಧಿಕ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದು, ಇದುವರೆಗೆ ಸುಮಾರು 15 ಕೋಟಿ ಮಂದಿ ಸಂಗಮಕ್ಷೇತ್ರದಲ್ಲಿ ಪವಿತ್ರಸ್ನಾನ ಕೈಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.ಎರಡನೇ ಅಮೃತಸ್ನಾನದ ದಿನವಾದ ಬುಧವಾರ ಲಕ್ಷಾಂತರ ಭಕ್ತರು ಪ್ರಯಾಗ್ರಾಜ್ ಯಾತ್ರೆ ಕೈಗೊಂಡಿರುವುದರಿಂದ ಭಾರಿ ಜನದಟ್ಟಣೆ ಕಂಡುಬಂದಿದೆ.

   ಕಾಲ್ತುಳಿತದಲ್ಲಿ ಗಾಯಗೊಂಡಿರುವ ಹಲವರ ಪೈಕಿ ಕೆಲವರು ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ. ಕಾಲ್ತುಳಿತ ಘಟನೆ ವರದಿಯಾದ ಬೆನ್ನಲ್ಲೇ 2ನೇ ಅಮೃತಸ್ನಾನಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ ಎಂದು ಅಖಿಲ ಭಾರತೀಯ ಅಖಾರಾ ಪರಿಷತ್ ಅಧ್ಯಕ್ಷ ಶ್ರೀ ಮಹಾಂತ ರವೀಂದ್ರ ಅವರು ಹೇಳಿದ್ದಾರೆ.

   ಅಮೃತಸ್ನಾನಕ್ಕೆ ಆಗಮಿಸದಂತೆ ಆಡಳಿತಯಂತ್ರ ನಮಗೆ ಮನವಿ ಮಾಡಿಕೊಂಡಿದೆ. ಶ್ರೀಗಳು ಮತ್ತು ನಾಗಾ ಸಾಧುಗಳ ಮೆರವಣಿಗೆ ಮುಂದೆ ಸಾಗುವ ಸಿದ್ಧತೆ ನಡೆದಿದ್ದರೂ, ನಾವು ಪ್ರಸ್ತುತ ಹಿಂದಿರುಗಿದ್ದೇವೆ. ಸದ್ಯಕ್ಕೆ ಅಮೃತಸ್ನಾನ ತಡೆಹಿಡಿಯಲಾಗಿದೆ. ಶೀಘ್ರವೇ ಮುಂದಿನ ಕ್ರಮ ಕೈಗೊಳ್ಳುತ್ತೇವೆಂದು ಅಧಿಕಾರಿಗಳೂ ತಿಳಿಸಿದ್ದಾರೆ.

   ಸ್ಥಳದಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ತಳ್ಳಿ, ಮುರಿಯುವಂತೆ ಮಾಡಿದ್ದಾರೆ. ಇದರಿಂದ ಕಾಲ್ತುಳಿತ ಎದುರಾಗಿ ಕೆಲವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಪರಿಸ್ಥಿತಿ ಗಂಭೀರವಾಗಿಲ್ಲ ಎಂದು ಹೇಳಿದ್ದಾರೆ.ಘಟನೆ ಬೆನ್ನಲ್ಲೇ ಪ್ರಯಾಗ್ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಪರಿಸ್ಥಿತಿಯನ್ನು ಅವಲೋಕಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆ ಮಾತುಕತೆ ನಡೆಸಿದ್ದು, ಶೀಘ್ರಗತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಕೂಡ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಕೇಂದ್ರದಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ.ಘಟನೆ ಬೆನ್ನಲ್ಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಗಮಕ್ಕೆ ತೆರಳುವ ಬದಲು ಗಂಗಾನದಿ ಸಮೀಪದಲ್ಲಿರುವ ಘಾಟ್‌ನಲ್ಲಿ ಸ್ನಾನ ಮಾಡುವಂತೆ ಭಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ. ಭಕ್ತರು ಆಡಳಿತ ಮಂಡಳಿಯ ಸೂಚನೆಗಳನ್ನು ಪಾಲಿಸಬೇಕು ಮತ್ತು ಕಾನೂವು ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು, ಯಾವುದೇ ವದಂತಿಗಳಿಗೆ ಕಿವಿಕೊಡಬಾರದು ಎಂದು ಹೇಳಿದ್ದಾರೆ.

   ಮಹಾಕುಂಭ ಮೇಳದಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ಎದುರಾಗರುವ ಹಿನ್ನೆಲೆಯಲ್ಲಿ ಸಂಗಮದಲ್ಲೇ ಸ್ನಾನ ಮಾಡಬೇಕೆಂಬ ಮನೋಭಾವ ಬೇಡ. ಸ್ಥಳದಲ್ಲಿ ಭಾರೀ ಜನಸಂದಣಿ ಇದ್ದು, ಸುರಕ್ಷತಾ ದೃಷ್ಟಿಯಿಂದ ನಿಮ್ಮ ಶಿಬಿರಗಳಿಂದ ಹೊರ ಬರದಿರಿ ಎಂದು ಜಗದ್ಗುರು ಸ್ವಾಮಿ ರಾಮಭದ್ರಾಚಾರ್ಯ ಸ್ವಾಮೀಜಿಗಳು ಮನವಿ ಮಾಡಿದ್ದಾರೆ.

   ವಿಶ್ವದ ಅತಿದೊಡ್ಡ ಧಾರ್ಮಿಕ ಉತ್ಸವ “ಮಹಾ ಕುಂಭಮೇಳ” ಉತ್ತರ ಪ್ರದೇಶದ ಪ್ರಯಾಗ್​ರಾಜ್​ ನಗರದಲ್ಲಿ ನಡೆಯುತ್ತಿದ್ದು, ಈ ಕುಂಭಮೇಳವು ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮೇಳವಾಗಿದೆ. ಕುಂಭಮೇಳಕ್ಕೆ ಪ್ರಪಂಚದಾದ್ಯಂತದ ಸಾಧು-ಸಂತರು ಮತ್ತು ಭಕ್ತ ಸಾಗರವೇ ಹರಿದುಬರುತ್ತಿದೆ.

   10 ಸಾವಿರ ಎಕರೆಗಳಲ್ಲಿ ಕುಂಭಮೇಳಕ್ಕಾಗಿ ವಿಶೇಷ ವ್ಯವಸ್ಥೆಯನ್ನು ಮಾಡಿರುವ ಉತ್ತರ ಪ್ರದೇಶ ಸರ್ಕಾರ, ಧಾರ್ಮಿಕ ಆಚರಣೆಗೆ ಆಗಮಿಸುವ ಕೋಟ್ಯಂತರ ಭಕ್ತಾಧಿಗಳಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗದಂತೆ ಹಲವು ಕ್ರಮಗಳು ಹಾಗೂ ವಿಶೇಷ ಸೌಲಭ್ಯಗಳನ್ನು ಒದಗಿಸಿದೆ.

 

Recent Articles

spot_img

Related Stories

Share via
Copy link