ಜಗಳೂರು:
ಖಾಸಗಿ ವ್ಯಕ್ತಿಯೊಬ್ಬರ ಮನೆಯಲ್ಲಿ ಕೃಷಿ ಇಲಾಖೆಯ ವತಿಯಿಂದ ರಿಯಾಯಿತಿ ಧರದಲ್ಲಿ ವಿತರಿಸಲಾಗುವ ಕಡ್ಲೆ ಬಿತ್ತನೆ ಬೀಜ ದಾಸ್ತಾನಿರುವುದು ಇಲಾಖೆಯ ಗಮನಕ್ಕೆ ಬಂದ ಹಿನ್ನಲೆಯಲ್ಲಿ ಸೋಮವಾರ ರಾತ್ರಿ 7-30ರ ಸಮಯದಲ್ಲಿ ಕೃಷಿ ಅಧಿಕಾರಿಗಳು, ಪೋಲೀಸ್ ಇಲಾಖೆಯ ಜೊತೆಗೂಡಿ 150ಕ್ಕೂ ಹೆಚ್ಚು ಪಾಕೇಟ್ ಕಡ್ಲೆ ಬಿತ್ತನೆ ಬೀಜ ಸಂಗ್ರಹಿಸಿದ್ದ ಕೊಠಡಿಯನ್ನು ಸೀಜ್ ಮಾಡಿದ ಘಟನೆ ನಡೆದಿದೆ.
ಪಟ್ಟಣದ ಜೆಸಿಆರ್ ಬಡಾವಣೆಯ ಸಾರ್ವಜನಿಕ ಗ್ರಂಥಾಲಯದ ಮುಂಭಾಗದ ವೀರೇಶ್ ಮತ್ತು ಜಗದೀಶ್ ಎಂಬ ಇಬ್ಬರು ಸಹೋದರರು ತಮ್ಮ ಮನೆಯಲ್ಲಿ 150ಕ್ಕೂ ಹೆಚ್ಚು ಪಾಕೇಟ್ ಕಡ್ಲೆ ಬಿತ್ತನೆ ಬೀಜವನ್ನು ರೈತರಿಂದ ಖರೀದಿಸಿ ದಾಸ್ತಾನು ಮಾಡಿಕೊಂಡಿದ್ದರು. ಕೃಷಿ ಇಲಾಖೆಯ ವತಿಯಿಂದ ರಿಯಾಯಿತಿ ದರದಲ್ಲಿ ಕಳೆದ ಎರಡು ದಿನಗಳಿಂದ ವಿತರಣೆಯಾಗುತ್ತಿದ್ದು ಎಲ್ಲ ರೈತರಿಗೆ ಬಿತ್ತನೆ ಬೀಜ ಸಿಗದೆ ಇರುವುದರಿಂದ ಖಚಿತ ಮಾಹಿತಿಯ ಮೇರೆಗೆ ಕೃಷಿ ಸಹಾಯಕ ನಿರ್ದೇಶಕ ಕೆ.ಟಿ. ಬಸಣ್ಣನವರ ನೇತೃತ್ವದ ತಂಡ ಪೊಲೀಸರ ನೆರವಿನೊಂದಿಗೆ ಎರಡು ಮನೆಗಳಲ್ಲಿ ಸಂಗ್ರಹಿಸಿಡಲಾಗಿದ್ದ ಬಿತ್ತನೆ ಬೀಜದ ಕೊಠಡಿಗೆ ಬೀಗ ಹಾಕಿ ಸೀಜ್ ಮಾಡಿದರು.
ಜಗದೀಶ್ ಮತ್ತು ವಿರೇಶ್ ಇವರುಗಳು ರೈತರಿಂದ ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಚಳ್ಳಕೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ರೈತರಿಗೆ ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಮತ್ತೊಬ್ಬ ಕಾಳು ವ್ಯಾಪಾರಿಯ ಮನೆಯಲ್ಲಿ ಸಹ 100ಕ್ಕೂ ಹೆಚ್ಚು ಚೀಲ ಕಡ್ಲೆ ಬಿತ್ತನೆ ಬೀಜ ಸಂಗ್ರಹವಾಗಿರುವ ಬಗ್ಗೆ ಸುಳಿವು ಸಿಕ್ಕಿದ್ದು ಅಧಿಕಾರಿಗಳು ದಾಳಿ ನಡೆಸಲಿದ್ದಾರೆಂದು ಗೋಡೊನ್ಗೆ ಬೀಗ ಹಾಕಿಕೊಂಡು ಕಣ್ಮರೆಯಾಗಿದ್ದಾನೆ.
ಈ ಸಂದರ್ಭದಲ್ಲಿ ಕೃಷಿ ಸಹಾಯಕ ನಿರ್ದೇಶಕ ಕೆ.ಟಿ.ಬಸಣ್ಣ, ಕೃಷಿ ತಾಂತ್ರಿಕ ಅಧಿಕಾರಿ ರೇಣುಕುಮಾರ್, ನಾಗರಾಜ್ ತೆಂಬದ್, ಪಿಎಸ್ಐ ಇಮ್ರಾನ್ಬೇಗ್, ಎಎಸ್ಐ ಅಂಜಿನಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
